ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಪಿಎಚ್.ಡಿ ಮಹಾಪ್ರಬಂಧಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ 2024ನೇ ಸಾಲಿನ ಸಂಸ್ಕೃತ ಗ್ರಂಥ ಪುರಸ್ಕಾರ ಲಭಿಸಿದೆ.
ಶ್ರೀಗಳು ಪ್ರತಿಪಾದಿಸಿರುವ ಅಂಶುಮದಾಗಮ ಸಂಪದನಾತ್ಮಕಮಧ್ಯಯನಮ್’ ಸಂಶೋಧನಾ ಪ್ರಬಂಧಕ್ಕೆ ಕುಂದೂರು ಮಠದ ಪೀಠಾಧಿಪತಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿದ್ವಾನ್ ಡಾ.ಶರತ್ಚಂದ್ರ ಸ್ವಾಮೀಜಿ ಮಾರ್ಗದರ್ಶನ ಮಾಡಿದ್ದರು. ಈ ಮಹಾಪ್ರಬಂಧದಲ್ಲಿ 84 ಅಧ್ಯಾಯಗಳಿದ್ದು, ಪರಿಪೂರ್ಣವಾಗಿ ದೇಗುಲ, ಪೂಜಾದಿ ಆರಂಭ, ಸಕಲ ಸ್ಥಾಪನ, ಅತ್ಯಾರ್ಥಯಜನ ಪವಿತ್ರ ವಿಧಿ, ಪಂಚಾಮೃತ ವಿಧಿ, ಚೂರ್ಣೋತ್ಸವ ವಿಧಿ, ಪರಸುಪಯ ವಿಧಿ, ಪಾದ್ಯಾದಿವಿಧಿಗಳನ್ನು ಸುವಿಸ್ತಾರವಾಗಿ ವರ್ಣಿತವಾಗಿವೆ. ವಿವಿಧ ದೇವತೆಗಳಿಗೆ ಸಂಬಂಧಿಸಿದ ಅರ್ಚನಾ ಕ್ರಮಗಳ ವಿವರಗಳಿವೆ.
ವಿನಾಯಕ ವ್ರತ, ಮುಖಲಿಂಗಾರ್ಚನ, ಗೌರೀಪವಿತ್ರ ವಿಧಿ, ನಕ್ಷತ್ರ ಪೂಜಾ ವಿಧಿ, ಅರ್ಧನಾರೀಶ್ವರ ಪೂಜಾ ವಿಧಿ, ಚಂದೇಕಾರ್ಚನ ವಿಧಿ ಮಹಾಶಾಂತಿ ವಿಧಿ, ದೇವೀಪೂಜಾ ವಿಧಿ ಇದೆ. ಈ ಅಗಮದಲ್ಲಿ ದೇಗುಲಗಳ ನಿರ್ಮಾಣ, ಮೂರ್ತಿ ನಿರ್ಮಾಣದ ವಿಧಾನ, ಸೇನಾಸ್ತಂಭ, ಅಶ್ವಸ್ತಂಭಗಳ ಸ್ಥಾಪನೆ ಇತ್ಯಾದಿ ವಿವರಗಳಿವೆ. ಜತೆಗೆ ರುದ್ರಾಕ್ರ ಭಸ್ಮಾದಿ ವಿಧಿಗಳು, ಕೃತ್ತಿಕಾದೀಪ ವಿಧಿ, ವಿವಿಧ ಪ್ರಾಯಶ್ಚಿತ್ರಗಳು, ಪ್ರದೋಷ, ಪೂಜಾದಿ ವಿಧಿಗಳನ್ನು ವಿವರಿಸಲಾಗಿದೆ. ದೇಗುಲಗಳ ವಿವಿಧ ಕರ್ಮ ವಿಧಾನ, ಶೈವ ದೇಗುಲಗಳ ವಿಧಿವಿಧಾನಗಳ ಬಗ್ಗೆ ಅಧ್ಯಯನ ಮಾಡುವ ಸಂಶೋಧಕರಿಗೆ ಇದು ನೆರವಾಗಲಿದೆ.





