ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಪಟ್ಟಣ ವ್ಯಾಪ್ತಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕನನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಣೆ ಮಾಡಿ ಚಾಮರಾಜನಗರದ ಬಾಲ ಮಂದಿರಕ್ಕೆ ಬಿಟ್ಟು ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ನರಸೀಪುರ ತಾಲೂಕಿನ ಯಳವರಹುಂಡಿ ಗ್ರಾಮದ ಮಹದೇವ್ ಎಂಬುವವರ ಪುತ್ರ ಅಪ್ಪು (6) ರಕ್ಷಿಸಲ್ಪಟ್ಟ ಬಾಲಕನಾಗಿದ್ದಾನೆ.
ಘಟನೆ ವಿವರ : ಆರು ವರ್ಷದ ಬಾಲಕ ಅಪ್ಪು ಎಂಬಾತ ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ಇನ್ನಿತರ ಕಡೆ ಭಿಕ್ಷೆ ಬೇಡಿ ತಂದೆಗೆ ಹಣ ನೀಡುತ್ತಿದ್ದ. ಬಂದಂತಹ ಹಣವನ್ನು ತಂದೆ ಕುಡಿದು ಮೈ ಮೇಲೆ ಪ್ರಜ್ಞೆ ಇಲ್ಲದೆ ಎಲ್ಲೆಂದರಲ್ಲಿ ಮಲಗುತ್ತಿದ್ದ. ಈ ವೇಳೆ ಬಾಲಕ ವಿಧಿ ಇಲ್ಲದೆ ಮಳೆ ಚಳಿ ಬೇಸಿಗೆ ಎನ್ನದೆ ಅಪ್ಪ ಮಲಗುತ್ತಿದ್ದ ಸ್ಥಳದಲ್ಲಿಯೇ ಮಲಗಿಕೊಳ್ಳುತ್ತಿದ್ದ. ಈ ವಿಚಾರವನ್ನು ಸ್ಥಳೀಯರು ಮಾಧ್ಯಮದವರ ಗಮನಕ್ಕೆ ತಂದಿದ್ದಾರೆ.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಮಹಾದೇಶ್, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಅಂಬಿಕಾರವರ ಗಮನಕ್ಕೆ ತಂದಿದ್ದಾರೆ. ತಕ್ಷಣ ಮಹಿಳಾ ರಕ್ಷಣಾ ಘಟಕದ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿ, ಸೋಮವಾರ ಮಧ್ಯಾಹ್ನ ಹನೂರು ಪಟ್ಟಣಕ್ಕೆ ಬಂದು ಬಾಲಕನನ್ನು ಹುಡುಕಾಡಿದ್ದಾರೆ. ಆದರೆ ಬಾಲಕ ಸಿಕ್ಕಿರಲಿಲ್ಲ, ಈ ವೇಳೆ ಹನೂರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್ ವಾರ್ಡನ್ ರಮೇಶ್ ರವರಿಗೆ ಬಾಲಕನ ಮೇಲೆ ನಿಗಾ ವಹಿಸಿ ಕರೆತರುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಸೂಚನೆ ನೀಡಿದ್ದರು.
ಬುಧವಾರ ರಾತ್ರಿ ಬಾಲಕ ಭಿಕ್ಷೆ ಬೇಡುತ್ತಿದ್ದ ವೇಳೆ ವಾರ್ಡನ್ ರಮೇಶ್ ರವರು ನೋಡಿ ಬಾಲಕ ಹಾಗೂ ಆತನ ತಂದೆಯನ್ನು ಮನವೊಲಿಸಿ, ಪೊಲೀಸ್ ಠಾಣೆಗೆ ಕರೆತಂದು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಸಂಯೋಜಕ ಸಿದ್ದರಾಜು ಹಾಗೂ ಮಹೇಶ್ ರವರ ಸಮ್ಮುಖದಲ್ಲಿ ಬಾಲಕನನ್ನು ಒಪ್ಪಿಸಿದ್ದಾರೆ.
ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಚಾಮರಾಜನಗರದ ಬಾಲಮಂದಿರಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದಾರೆ.
ಇದೇ ವೇಳೆ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಸಂಯೋಜಕ ಸಿದ್ದರಾಜು, ವಿಷಯ ಕಾರ್ಯಕರ್ತ ಮಹೇಶ್ , ವಾರ್ಡನ್ ರಮೇಶ್ ಪೊಲೀಸ್ ಪೇದೆ ಸತೀಶ್ ಹಾಜರಿದ್ದರು.




