ಚಾಮರಾಜನಗರ : ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಯುಗಾದಿ, ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೌಹಾರ್ದ ಸಭೆ ನಡೆಸಲಾಯಿತು.
ಎಸ್ಪಿ ಎಂ.ಮುತ್ತುರಾಜು ಮಾತನಾಡಿ, ಹಬ್ಬ ಎಂಬುದು ಎಲ್ಲರೂ ಸೇರಿ ಸಂತೋಷದಿಂದ ಆಚರಿಸುವಂಥದ್ದು. ಈ ಸಂದರ್ಭದಲ್ಲಿ ಐಕ್ಯತೆ, ಸಹೋದರತೆ ಇರಬೇಕು. ಇನ್ನೊಬ್ಬರಿಗೆ ಯಾರೂ ತೊಂದರೆ ಕೊಡಬಾರದು. ಎಲ್ಲರೂ ಪರಸ್ಪರ ಪ್ರೀತಿ, ಗೌರವದಿಂದ ಇದ್ದು ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದರು.
ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ, ಯುಗಾದಿ ಹಾಗೂ ರಂಜಾನ್ ಹಬ್ಬವನ್ನು ಜಿಲ್ಲೆಯಲ್ಲಿ ಎಂದಿನಂತೆ ಸೌಹಾರ್ದ ಹಾಗೂ ಸಾಮರಸ್ಯದಿಂದ ಆಚರಿಸುವಂತೆ ಹೇಳಿದರು.
ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಎಲ್ಲ ಕೋಮು, ಧರ್ಮಗಳ ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಿಕೊಂಡು ಬಂದಿರುವ ಸಂಪ್ರದಾಯವಿದ್ದು, ಈ ಉತ್ತಮ ನಡೆ ಹೀಗೆಯೇ ಮುಂದುವರೆಯಲಿ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕೋಮುಗಳ ಮುಖಂಡರು ಮಾತನಾಡಿ, ಎಲ್ಲರೂ ಪರಸ್ಪರ ಗೌರವ, ಶಾಂತಿ ಪ್ರೀತಿಯಿಂದ ಈ ಹಬ್ಬಗಳನ್ನು ಆಚರಿಸುತ್ತೇವೆ. ಹಬ್ಬದ ವೇಳೆ ಕುಡಿಯುವ ನೀರು, ಸ್ವಚ್ಚತೆಗೆ ವಿಶೇಷ ವ್ಯವಸ್ಥೆ ಮಾಡಿಸುವಂತೆ ಮನವಿ ಮಾಡಿದರು. ಈ ಅನುಕೂಲ ಕಲ್ಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಡಿವೈಎಸ್ಪಿ ಸ್ನೇಹರಾಜು, ನಗರಸಭೆ ಆಯುಕ್ತ ಪರಶುರಾಮ ಛಲವಾದಿ, ವಿವಿಧ ಕೋಮುಗಳ ಮುಖಂಡರು, ಸಂಘಟನೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿರಿದ್ದರು.





