Mysore
21
broken clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಬಂಡೀಪುರದಲ್ಲಿ ಅಂತರಾಷ್ಟ್ರೀಯ ಬಿಗ್‌ ಕ್ಯಾಟ್‌ ಶೃಂಗಸಭೆ : 23 ದೇಶದ ವಿಜ್ಞಾನಿಗಳು ಭಾಗಿ

ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿಯಲ್ಲಿ ಅಂತರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲಯನ್ಸ್ ಶೃಂಗಸಭೆಯಲ್ಲಿಂದು ಕಾರ್ಯಾಗಾರ ಹಾಗೂ ಕ್ಷೇತ್ರ ಭೇಟಿ ಕಾರ್ಯಕ್ರಮ ಆರಂಭಗೊಂಡಿತು.

ಭಾರತದಲ್ಲಿ ಮೊದಲ ಬಾರಿಗೆ ಬಿಗ್ ಕ್ಯಾಟ್ ಮೈತ್ರಿ ಶೃಂಗಸಭೆ ರಾಜ್ಯದ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ನಡೆಯುತ್ತಿದ್ದು, ಬಂಡೀಪುರದಲ್ಲಿಂದು ವನ್ಯಜೀವಿ ಮತ್ತು ಸಂರಕ್ಷಣೆ ಕುರಿತ ಸಾಮಥ್ರ್ಯಾಭಿವೃದ್ದಿ ಕಾರ್ಯಾಗಾರ ಹಾಗೂ ಕ್ಷೇತ್ರ ಭೇಟಿಗಾಗಿ 23 ದೇಶಗಳ 39 ಪ್ರತಿನಿಧಿಗಳು ಪಾಲ್ಗೊಂಡರು.

ಬಂಡೀಪುರ ಹುಲಿ ಯೋಜನೆ ಕೇಂದ್ರ ಸ್ಥಾನವಾದ ಮೇಲುಕಾಮನಹಳ್ಳಿಯ ಸಭಾ ಭವನದಲ್ಲಿ ಆಯೋಜಿತವಾಗಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅಂತರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ನ ನಿರ್ದೇಶಕರಾದ ಡಾ. ಎಸ್.ಪಿ. ಯಾದವ್ ಅವರು, ದೊಡ್ಡ ಬೆಕ್ಕುಗಳ ಸಂತತಿ ವೃದ್ದಿ ಮತ್ತು ಸಂರಕ್ಷಣೆ ಮಾಡುವ ನಾಯಕತ್ವವನ್ನು ಭಾರತ ವಹಿಸಿಕೊಂಡಿದೆ. ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಜಾಗ್ವಾರ್, ಪೂಮ, ಚೀತಾದಂತಹ ಏಳು ದೊಡ್ಡ ಬೆಕ್ಕಿನ ರಕ್ಷಣೆ ಮಾಡುವ ನಿರ್ಣಯಕ್ಕೆ 24 ದೇಶಗಳು ಸಹಿ ಮಾಡಿವೆ ಎಂದು ತಿಳಿಸಿದರು.

ದೊಡ್ಡ ಬೆಕ್ಕು ಸಂತತಿ ಉಳಿವಿಗೆ ಭಾರತ ನಾಯಕತ್ವ ವಹಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ಪ್ರಪಂಚದ ಶೇ.70ರಷ್ಟು ಹುಲಿಗಳು ನಮ್ಮಲ್ಲಿವೆ. ಶೇ.35ರಷ್ಟು ಚಿರತೆಗಳಿವೆ. ಭಾರತ ವೈವಿಧ್ಯತೆಯಲ್ಲಿ ಸಮೃದ್ದತೆ ಹೊಂದಿದ ರಾಷ್ಟ್ರವಾಗಿದ್ದು, ಏಳು ದೊಡ್ಡ ಬೆಕ್ಕಿನ ಪ್ರಭೇದದಲ್ಲಿ ಐದು ಪ್ರಭೇದಗಳು ಭಾರತದಲ್ಲಿವೆ ಎಂದರು.

ಭಾರತ ಸರ್ಕಾರ ಹುಲಿ ಸೇರಿದಂತೆ ದೊಡ್ಡ ಬೆಕ್ಕುಗಳ ಪ್ರಭೇದ ಸಂರಕ್ಷಣೆಗೆ ಉತ್ತಮ ಯೋಜನೆ ಹಾಕಿಕೊಂಡು ಶ್ರಮಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ಅಂತರಾಷ್ಟ್ರೀಯ ಬಿಗ್ ಕ್ಯಾಟ್ ಶೃಂಗಸಭೆ ಆಯೋಜನೆ ಸಂಬಂಧ ಮಾಹಿತಿ ನೀಡಿದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಪ್ರಭಾಕರನ್ ಅವರು ಶೃಂಗಸಭೆಯಲ್ಲಿ ಕಾರ್ಯಾಗಾರ ಹಾಗೂ ಕ್ಷೇತ್ರ ಭೇಟಿಯಂತಹ ಕಾರ್ಯಕ್ರಮಗಳು ಇವೆ. ದೊಡ್ಡ ಬೆಕ್ಕು ಜಾತಿಗೆ ಸೇರಿದ ಪ್ರಾಣಿಗಳ ಸಂರಕ್ಷಣೆ, ಮಾನವ ಸಂಘರ್ಷ ಸಮಸ್ಯೆಗಳಿಗೆ ಪರಿಹಾರ ಇನ್ನಿತರ ಮಹತ್ವದ ವಿಷಯಗಳ ಕುರಿತು ವಿವಿಧ ದೇಶಗಳಿಂದ ಆಗಮಿಸಿರುವ ಪ್ರತಿನಿಧಿಗಳೊಂದಿಗೆ ಜ್ಞಾನ ವಿನಿಮಯ ನಡೆಯಲಿದೆ. ಹುಲಿ ಸಂರಕ್ಷಣೆಗೆ ಕೈಗೊಂಡ ಪರಿಣಾಮಕಾರಿ ಕ್ರಮಗಳು ಹೊರ ದೇಶದವರು ಅಳವಡಿಸಿಕೊಂಡಿರುವ ಕ್ರಮಗಳ ಕುರಿತ ಮಾಹಿತಿ ವಿನಿಮಯ ಸಹ ನಡೆಯಲಿದೆ ಎಂದು ತಿಳಿಸಿದರು.

ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಮತ್ತು ಕರ್ನಾಟಕದ ಚೀಫ್ ವೈಲ್ಡ್ ಲೈಫ್ ವಾರ್ಡನ್) ಸುಭಾಷ್ ಮಾಲ್ಖೇಡೆ, ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಬಿಶ್ವಜಿತ್ ಮಿಶ್ರಾ, ಎನ್.ಟಿ.ಸಿಎ ಡಿಐಜಿ ವೈಭವ್ ಮಾಥುರ್, ಎಪಿಪಿಸಿಎಫ್ ಮನೋರಂಜನ್, ಮೈಸೂರು ಹುಲಿ ಯೋಜನೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ. ರಮೇಶ್‍ಕುಮಾರ್, ಚಾಮರಾಜನಗರ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಪ್ರಭಾಕರನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:
error: Content is protected !!