Mysore
24
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹನೂರು: ಬೈರನತ್ತ ಗ್ರಾಮದಿಂದ ಬಿಎಮ್‌ ಹಳ್ಳಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಆಗ್ರಹ

ಹನೂರು: ತಾಲೂಕಿನ ಮಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರನತ್ತ ಗ್ರಾಮದಿಂದ ಬಿಎಮ್ ಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಯನ್ನು ದುರಸ್ತಿ ಪಡಿಸುವಂತೆ ರೈತ ಸಂಘದ ಮುಖಂಡ ಬೈರನತ್ತ ರಾಜು ಒತ್ತಾಯಿಸಿದ್ದಾರೆ.

ಬೈರನತ್ತ ಗ್ರಾಮದಿಂದ ಬಿಎಮ್ ಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ತಳಭಾಗದಲ್ಲಿ ಇರುವುದರಿಂದ ಪ್ರತಿ ಮಳೆಗಾಲದ ಸಂದರ್ಭದಲ್ಲಿ ರೈತರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಈ ಸಂಬಂಧ ಹಲವಾರು ಬಾರಿ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ತಟ್ಟೆ ಹಳ್ಳ ಮೈದುಂಬಿ ಹರಿಯುತ್ತಿದೆ ಇದರಿಂದ ದ್ವಿಚಕ್ರ ವಾಹನ ಸವಾರರು ತಮ್ಮ ಗ್ರಾಮಗಳಿಗೆ ಹೋಗಲು ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಬಿಎಂ ಹಳ್ಳಿ ಗ್ರಾಮದ ಸಮೀಪ ರೈತ ಸಂಘದ ವತಿಯಿಂದ ಹತ್ತಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಲ್ಕು ದಿನಗಳ ಕಾಲ ಸತತವಾಗಿ ಪ್ರತಿಭಟನೆ ನಡೆಸಲಾಗಿತ್ತು ಪ್ರತಿಭಟನೆಯ ವೇಳೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವದಾಗಿ ಹೇಳಿ ಹೋದವರು ಇದುವರೆಗೂ ಯಾವುದೇ ಸಮಸ್ಯೆ ಬಗೆಹರಿಸಿಲ್ಲ, ಜನಪ್ರತಿನಿಧಿಗಳಂತೆ ಅಧಿಕಾರಿಗಳು ಸಹ ಭರವಸೆಯ ನೀಡುವುದರಲ್ಲಿ ತಲೀನರಾಗಿದ್ದಾರೆ ಈ ನಿಟ್ಟಿನಲ್ಲಿ ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕೊಚ್ಚಿ ಹೋದ ಮಣ್ಣಿನ ರಸ್ತೆ: ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಬೈರನತ್ತ ಹಾಗೂ ಡಿಎಂ ಸಮುದ್ರದ ಮಾರ್ಗ ಮಧ್ಯದ ರಸ್ತೆಗಳು ಕೊಚ್ಚಿ ಹೋಗಿದ್ದು, ಮಣ್ಣುಗೊರೆದು ಬಾದಾಚಾರಿಗಳು ನಡೆದುಕೊಂಡು ಹೋಗಲು ಸಹ ಸಾಧ್ಯವಾಗದಷ್ಟು ತೊಂದರೆ ಆಗಿದೆ. ಇದೇ ರಸ್ತೆಯಲ್ಲಿ ಅರಣ್ಯ ಇಲಾಖೆಯವರು ಕಾಡಿಗೆ ತೆರಳಬೇಕು. ಇನ್ನು ರೈತರಗಳು ಹೈನುಗಾರಿಕೆಯನ್ನೇ ನಂಬಿಕೊಂಡಿದ್ದು ಪ್ರತಿನಿತ್ಯ ಬೆಳಗ್ಗೆ ಹಾಗೂ ಸಾಯಂಕಾಲ ಹಾಲು ಹಾಕಲು ಹಾಲಿನ ಡೇರಿಗೆ ಹೋಗುವ ಸಂದರ್ಭದಲ್ಲಿ ನರಕವನ್ನೇ ನೋಡುತ್ತಿದ್ದಾರೆ ಇನ್ನು ಮುಂದಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ರಸ್ತೆ ದುರಸ್ತಿ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

ಪೋಷಕರ ಆಳಲು: ಬೈರನತ್ತ ಗ್ರಾಮದಿಂದ ಬಿಎಮ್ ಹಳ್ಳಿ, ಎಲ್ಲೇ ಮಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದ ಹಳ್ಳಕ್ಕೆ ಸೇತುವೆ ಇಲ್ಲದೆ ಇರುವ ಪರಿಣಾಮ ಶಾಲಾ ಕಾಲೇಜು ವಿದ್ಯಾರ್ಥಿಗಳು ಶಾಲೆಗಳಿಗೆ ತರಲು ಹಳ್ಳ ದಾಟಿಕೊಂಡು ಹೋಗಬೇಕಿದೆ. ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿರುವುದರಿಂದ ತಟ್ಟೆ ಹಳ್ಳ ಮೈದುಂಬಿ ಹರಿಯುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳುಗಳನ್ನು ಹಳ್ಳದಾಟಿಸಿ ನಂತರ ಶಾಲೆಗೆ ಕಳುಹಿಸಬೇಕಿದೆ ಪ್ರತಿನಿತ್ಯ ಇದೇ ಕೆಲಸವಾಗಿರುವುದರಿಂದ ಸಂಬಂಧ ಪಟ್ಟ ಜನಪ್ರತಿನಿಧಿಗಳು ಆದಷ್ಟು ಬೇಗ ಸೇತುವೆ ನಿರ್ಮಾಣ ಮಾಡಿ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಪ್ರತಿ ಮಳೆಗಾಲದ ಸಂದರ್ಭದಲ್ಲಿಯೂ ತೊಂದರೆಯಾಗುತ್ತಿದೆ ಎಂದು ಆಳಲನ್ನು ತೋಡಿಕೊಂಡಿದ್ದಾರೆ‌.

ಇನ್ನು ಒಂದು ತಿಂಗಳೊಳಗೆ ಸಮಸ್ಯೆಯನ್ನು ಬಗೆಹರಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರುಗಳಾದ ಮೋಹನ್ ,ಪ್ರದೀಪ್ ಕುಮಾರ್, ಗುರುಸ್ವಾಮಿ, ಗೌರೀಶ್, ಪ್ರಸನ್ನ ಕುಮಾರ್, ಪಿ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

Tags: