ಸಂತೇಮರಳ್ಳಿ: ಕೂಲಿ ಕಾರ್ಮಿಕರು, ರೈತಾಪಿ ವರ್ಗ, ಬಡವರು ಅನಾರೋಗ್ಯಕ್ಕೆ ತುತ್ತಾದ್ರೆ ಅಂಥವರು ನೇರವಾಗಿ ತೆರಳುವುದು ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಿಗೆ. ಆದರೆ ಅಂತಹ ಸರ್ಕಾರಿ ಆಸ್ಪತ್ರೆಗಳೇ ಬಡ ಜನರ ಹತ್ತಿರ ಹಣ ವಸೂಲಿಗೆ ನಿಂತರೆ ಅವರ ಪಾಡೇನು. ಅದರಲ್ಲೂ ಇಂತಿಂತ ಚಿಕಿತ್ಸೆಗೆ ಇಂತಿಷ್ಟು ಹಣ ಅಂದು ವಸೂಲಿಗೆ ನಿಂತರೆ ಅವರ ಗತಿಯೇನು?
ಹೌದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ರೋಗಿಗಳಿಂದ ಹಣ ಪಡೆದುಕೊಳ್ಳುವ ಮೂಲಕ ಸುಲಿಗೆಗೆ ಇಳಿದಿದ್ದು, ಅಲ್ಲಿಗೆ ಹೋಗುವ ಸಾರ್ವಜನಿಕರು ಇಂತಿಂತ ಚಿಕಿತ್ಸೆಗೆ ಇಂತಿಷ್ಟು ಹಣ ಕೊಟ್ಟು ಚಿಕಿತ್ಸೆ ಪಡೆಯುವ ಪಾಡು ಎದುರಾಗಿದೆ. ಇಲ್ಲಿನ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವರಿಗೆ ರೂ.3 ಸಾವಿರ, ಸಿಜೇರಿಯನ್ಗೆ ರೂ 20 ಸಾವಿರ, ಗರ್ಭಕೋಶ ಶಸ್ತ್ರ ಚಿಕಿತ್ಸೆಗೆ ರೂ.30 ಸಾವಿರ ಅಂತ ಒಂದೊಂದು ಚಿಕಿತ್ಸೆಗೂ ಒಂದೊಂದು ಹಣ ನಿಗದಿಯಾಗಿದೆ.
ಆಶಾ ಕಾರ್ಯಕರ್ತೆಯರು ಆ ಹಣವನ್ನು ಸಂಗ್ರಹಿಸಿ ನರ್ಸ್ಗಳಿಗೆ ಕೋಡಬೇಕು. ಬಳಿಕ ವೈದ್ಯಾಧಿಕಾರಿ ರೇಣುಕಾದೇವಿ ಈ ಹಣವನ್ನು ಸಂಗ್ರಹಿಸುತ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೇ ರೀತಿ ರಾಣಿ ಎಂಬ ಆಶಾ ಕಾರ್ಯಕರ್ತೆಗೆ ಡೆಲಿವರಿ ರೋಗಿಗಳ ಬಳಿ ರೂ.10 ಸಾವಿರ ಹಣ ವಸೂಲಿ ಮಾಡೋಕೆ ಹೇಳಿದ್ದರು. ಇದಕ್ಕೊಪ್ಪದೇ ಇದ್ದಿದ್ದಕ್ಕೆ ವೈದ್ಯಾಧಿಕಾರಿ ರೇಣುಕಾದೇವಿ ಇಲ್ಲ ಸಲ್ಲದ ಆರೋಪ ಮಾಡಿ ಭ್ರಷ್ಟಚಾರ ವಿರುದ್ಧ ಧ್ವನಿ ಎತ್ತಿದ್ದ ಆಶಾ ಕಾರ್ಯಕರ್ತೆ ರಾಣಿ ವಿರುದ್ಧ ಮೆಮೋ ನೀಡಿದ್ದಾರೆ. ಅಸಲಿಗೆ ಕಾರ್ಯಕರ್ತೆಯರು ಸರ್ಕಾರಿ ನೌಕರರಲ್ಲ. ಅವರಿಗೆ ನೋಟಿಸ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಆದರೂ ಸಹ ಮೆಮೋ ನೀಡಿ ಈಗ ವೈದ್ಯಾಧಿಕಾರಿ ರೇಣುಕಾದೇವಿ ಅಡ್ಡಕತ್ತರಿಗೆ ಸಿಲುಕಿದ್ದಾರೆ.





