ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ.
ಮಲಯಾಳಂ ಚಿತ್ರದ ಶೂಟಿಂಗ್ ವಿವಾದ ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಚಿತ್ರೀಕರಣ ನಡೆದ ಸ್ಥಳ ಮುಜರಾಯಿ ಇಲಾಖೆಗೆ ಸೇರಿದ್ದ ಅಥವಾ ಅರಣ್ಯ ಇಲಾಖೆಗೆ ಸೇರಿದ್ದಾ ಎಂಬ ಪ್ರಶ್ನೆ ಎದ್ದಿದೆ.
ನಿನ್ನೆಯಷ್ಟೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಂಡೀಪುರ ಎಸಿಎಫ್ ನವೀನ್ಕುಮಾರ್ ಅವರು, ಚಿತ್ರತಂಡಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಆದರೆ ನಿಯಮ ಉಲ್ಲಂಘಿಸಿದ್ದರೆ ಕಾನೂನು ಕ್ರಮ ಆಗಲಿದೆ ಎಂದು ಹೇಳಿದ್ದರು.
ಆದರೆ ಅರಣ್ಯಾಧಿಕಾರಿಗಳ ಸಾರ್ವಜನಿಕ ಪ್ರಕಟಣೆ ಅನ್ವಯ ಶೂಟಿಂಗ್ ನಡೆದಿದ್ದು, ನಿಷೇಧಿತ ಪ್ರದೇಶ ಅಲ್ಲದಿದ್ದರೆ ಅದು ಮುಜರಾಯಿ ಇಲಾಖೆಯ ಸ್ಥಳವೇ ಎಂಬ ಅನುಮಾನ ಹುಟ್ಟಿಸಿದೆ.
ಈ ಬಗ್ಗೆ ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಅವರನ್ನು ಕೇಳಿದರೆ ಮುಜರಾಯಿ ಇಲಾಖೆಯಿಂದ ಯಾವುದೇ ಅನುಮತಿ ಕೊಟ್ಟಿಲ್ಲ. ಯಾರೂ ಕೂಡ ನಮ್ಮ ಅನುಮತಿಯನ್ನು ಕೇಳಿಲ್ಲ. ಸದ್ಯ ನಮ್ಮನ್ನು ಎಳೆದು ತರುವ ಪ್ರಯತ್ನವಾಗುತ್ತಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಅರಣ್ಯ ಇಲಾಖೆ ಯಾರದೋ ಮಾತಿಗೆ ಕಟ್ಟುಬಿದ್ದು ಅನುಮತಿ ನೀಡಿ ಈಗ ವಿವಾದವನ್ನು ಎಳೆದುಕೊಂಡಿದೆ ಎನ್ನಲಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಬಂದು ತಲುಪುತ್ತದೆ ಎಂಬುದನ್ನು ಕಾದುನೋಡಬೇಕಿದೆ.





