ಗುಂಡ್ಲುಪೇಟೆ : ತಾಲ್ಲೂಕಿನ ಇಂಗಲವಾಡಿ ಗ್ರಾಮದ ಮಾದಪ್ಪ ಎಂಬವರ ತೋಟದ ಮನೆ ಬಳಿ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ ಹುಲಿ ದಾಳಿ ನಡೆಸಿ ಒಂದು ಹಸುವನ್ನು ಕೊಂದು ಹಾಕಿದ ಘಟನೆ ನಡೆದಿದೆ.
ಹುಲಿ ದಾಳಿಯಿಂದ ಹಸು ಸಾವಿಗೀಡಾದ ಸಂಗತಿ ತಿಳಿದ ಅರಣ್ಯ ಇಲಾಖೆಯ ಅಽಕಾರಿಗಳು ಸ್ಥಳಕ್ಕೆ ಆಗಮಿಸದೇ ಇದ್ದುದರಿಂದ ಆಕ್ರೋಶಗೊಂಡ ರೈತರು ಹಸುವನ್ನು ಟ್ರಾಕ್ಟರ್ನಲ್ಲಿ ಅರಣ್ಯ ಇಲಾಖೆ ಕಚೇರಿ ಬಳಿ ತಂದು ಪ್ರತಿಭಟನೆ ಮಾಡಲು ಮುಂದಾದರು. ಆಗ ಸ್ಥಳಕ್ಕೆ ಆರ್ಎಫ್ಒ ತೆರಳಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಚಿರತೆ ದಾಳಿ ಮಾಡಿದೆ ಎಂಬ ಆರ್ ಎಫ್ ಒ ಹೇಳಿಕೆಗೆ ಆಕ್ರೋಶಗೊಂಡ ರೈತರು, ನಾವು ಕಣ್ಣಾರೆ ಹುಲಿ ದಾಳಿ ಮಾಡಿದ್ದನ್ನು ಕಂಡಿದ್ದೇವೆ ಎಂದರು.
ನಂತರ ಸಾಕಾನೆ ಮೂಲಕ ಹುಲಿ ಸೆರೆಗೆ ಕೂಂಬಿಂಗ್ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಇದನ್ನು ಓದಿ: ಗುಂಡ್ಲುಪೇಟೆ | ಚಿರತೆ ದಾಳಿಗೆ ಕರು ಸಾವು
ಹಸು ಕಳೆದುಕೊಂಡ ರೈತ ಮಾದಪ್ಪನಿಗೆ ಅರಣ್ಯ ಇಲಾಖೆ ತಕ್ಷಣ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು. ನಂತರ ಇಲಾಖೆಯವರು ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ರೈತರು ಹುಲಿ ದಾಳಿ ಮಾಡಿದೆ ಎಂದು ಹೇಳುತ್ತಿದ್ದಾರೆ. ಹಸು ಕಳೆದುಕೊಂಡ ರೈತರಿಗೆ ಇಲಾಖೆಯಿಂದ ೩೦ ಸಾವಿರ ರೂ. ಹಾಗೂ ಎನ್ಜಿಒ ಕಡೆಯಿಂದ ೭ ಸಾವಿರ ರೂ. ಪರಿಹಾರ ನೀಡಲಾಗುವುದು. ಹುಲಿ ಸೆರೆಗೆ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದು, ಸೋಮವಾರದಿಂದ ಆನೆ ಮೂಲಕ ಕೂಂಬಿಂಗ್ ಮಾಡಲಾಗುವುದು. ಎಂದು ವಲಯಾಧಿಕಾರಿ ಶಿವಕುಮಾರ್ ಭರವಸೆ ನೀಡಿದರು.





