ಗುಂಡ್ಲುಪೇಟೆ : ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿದೆ. ಈ ವೇಳೆ ರೈತ ತನ್ನ ಹಸು ರಕ್ಷಿಸಲು ಹರಸಾಹಸ ಪಟ್ಟಿದ್ದು, ಗೋವಿನ ಮೇಲೆರಗಿದ ವ್ಯಾಘ್ರನಿಗೆ ಥಳಿಸಿ ಜೋರಾಗಿ ಕೂಗಿಕೊಂಡಿದ್ದರಿಂದ ಸ್ಥಳದಿಂದ ಕಾಲ್ಕಿತ್ತರೂ ದಾಳಿಯ ತೀವ್ರತೆಗೆ ಹಸು ಸಾವನ್ನಪ್ಪಿದೆ.
ತಾಲೂಕಿನ ಪಡಗೂರು ಗ್ರಾಮದಲ್ಲಿ ಮಂಗಳವಾರ ಸಂಜೆ ಘಟನೆ ಸಂಭವಿಸಿದೆ.
ಗ್ರಾಮದ ಗುರುಸಿದ್ದಪ್ಪ ಎಂಬವರಿಗೆ ಸೇರಿದ ಹಸು ಹುಲಿ ದಾಳಿಗೆ ಬಲಿಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮೊನ್ನೆಯಷ್ಟೇ ಚಿರತೆ ಮರಿಗಳು ಪತ್ತೆಯಾಗಿದ್ದ ಶಿವಕುಮಾರ್ ಎಂಬ ರೈತನ ಜಮೀನಿನಲ್ಲೇ ಘಟನೆ ನಡೆದಿರುವುದು ಆತಂಕ ಸೃಷ್ಠಿಸಿದೆ. ಬಾಳೆ ತೋಟದಲ್ಲಿ ಪತ್ತೆಯಾಗಿದ್ದ ಚಿರತೆ ಮರಿಗಳನ್ನ ಅರಣ್ಯ ಇಲಾಖೆ ರಕ್ಷಣೆ ನೀಡಿದ ಮೂರು ದಿನದಲ್ಲೇ ಹುಲಿ ಪ್ರತ್ಯಕ್ಷವಾಗಿರುವುದು ರೈತರನ್ನ ಬೆಚ್ಚಿಬೀಳಿಸಿದ್ದು, ಹಸು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನಾ ಸಂಬಂಧ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದ್ದಾರೆ.
ಪಡಗೂರು ಗ್ರಾಮದಲ್ಲಿ ಹುಲಿ ಚಿರತೆ ಉಪಟಳ ಉಲ್ಬಣಗೊಂಡಿದ್ದು ರೈತರ ಹಿತಕಾಯಲು ಅರಣ್ಯ ಇಲಾಖೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಕೂಂಬಿಂಗ್ ಕಾರ್ಯಚರಣೆಗೆ ಮುಂದಾಗಬೇಕು, ಹಾಡಹಗಲೇ ರೈತರ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮೃಗಗಳಿಂದ ಕೃಷಿ ಚಟುವಟಿಕೆಗೆ ಮುಂದಾಗಲು ಸಹ ರೈತರು ಹಿಂದೇಟು ಹಾಕುವಂತ ಪರಿಸ್ಥಿತಿಯನ್ನ ತಿಳಿಗೊಳಿಸುವ ಕೆಲಸಕ್ಕೆ ಅರಣ್ಯ ಇಲಾಖೆ ಮುಂದಾಗಬೇಕು ಎಂದು ರೈತ ಮುಖಂಡ ಶಿವಕುಮಾರ್ ಆಗ್ರಹಿಸಿದ್ದಾರೆ.





