ಚಾಮರಾಜನಗರ : ಇತ್ತೀಚೆಗೆ ಸುರಿದ ಗಾಳಿ ಸಹಿತ ಮಳೆಯಿಂದಾಗಿ ತಾಲ್ಲೂಕು ವ್ಯಾಪ್ತಿಯ ದೊಡ್ಡಮೋಳೆ, ಕಟ್ನವಾಡಿ, ಗ್ರಾಮಗಳಲ್ಲಿ ಮನೆ ಗೋಡೆ ಕುಸಿದಿದ್ದ ಸ್ಥಳಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭೇಟಿ ನೀಡಿ, ಪರಿಶೀಲಿಸಿ, ವೈಯಕ್ತಿಕ ಪರಿಹಾರ ನೀಡಿದರು.
ಇದೇ ವೇಳೆ ಕೆ.ಕೆ.ಹುಂಡಿ ಗ್ರಾಮ, ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಗಾಳಿ ಮಳೆಯಿಂದ ಬಾಳೆಬೆಳೆ, ತೆಂಗಿನಗಿಡ ಸೇರಿದಂತೆ ಬೆಳೆಗಳು ಹಾನಿಯಾಗಿರುವ ಸಂಬಂಧ ರೈತರಿಂದ ಮಾಹಿತಿ ಪಡೆದುಕೊಂಡರು.
ತಾಲ್ಲೂಕು ವ್ಯಾಪ್ತಿಯ ದೊಡ್ಡಮೋಳೆ, ಕಟ್ನವಾಡಿ, ಗ್ರಾಮಗಳಲ್ಲಿ ಮಳೆಯಿಂದ ಮನೆ ಗೋಡೆ ಕುಸಿದಿದ್ದು, ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಗಾಳಿ ಮಳೆಗೆ ಬೆಳೆಗಳು ಎಲ್ಲೆಲ್ಲಿ ಹಾನಿಯಾಗಿವೆ. ಅಂತಹ ಗ್ರಾಮಗಳಿಗೆ ರಾಜಸ್ವ ನಿರೀಕ್ಷಕರು, ಕಂದಾಯಾಧಿಕಾರಿಗಳು ಭೇಟಿ ನೀಡಿ, ರೈತರಿಂದ ಮಾಹಿತಿ ಪಡೆದುಕೊಂಡು, ಸೂಕ್ತ ಪರಿಹಾರ ಕೊಡಿಸುವ ಸಂಬಂಧ ಸರ್ಕಾರಕ್ಕೆ ಅಂದಾಜುಪಟ್ಟಿ ಸಲ್ಲಿಸುವಂತೆ ಶಾಸಕರು ಸೂಚನೆ ನೀಡಿದರು.
ರಾಜಸ್ವ ನಿರೀಕ್ಷಕರಾದ ರಾಜಶೇಖರ್, ಗುರುಸಿದ್ದಪ್ಪ, ಗ್ರಾಮ ಆಡಳಿತಾಧಿಕಾರಿ ವೆಂಕಟೇಶ್, ತಾಪಂ ಮಾಜಿ ಸದಸ್ಯ ಎಚ್.ಎಂ.ಮಹದೇವಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಮಂಜುನಾಥ್, ಕುಮಾರ್, ಮುಖಂಡರಾದ ಉಡಿಗಾಲನಂಜಪ್ಪ, ದೊರೆಸ್ವಾಮಿ, ಕೇಶವಮೂರ್ತಿ, ಶಿವಣ್ಣ, ಸುಬ್ರಹ್ಮಣ್ಯ, ಮಹದೇವಸ್ವಾಮಿ, ಕುಮಾರ್, ಇತರರು ಹಾಜರಿದ್ದರು.





