Mysore
32
clear sky

Social Media

ಮಂಗಳವಾರ, 03 ಮಾರ್ಚ್ 2026
Light
Dark

ಅದ್ದೂರಿಯಾಗಿ ಜರುಗಿದ ಬೂದಬಾಳು ವೆಂಕಟರಮಣಸ್ವಾಮಿ ರಥೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು 

ಹನೂರು: ತಾಲೂಕಿನ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದ ಬೂದುಬಾಳು ಪುಣ್ಯ ಕ್ಷೇತ್ರದಲ್ಲಿ ಶ್ರೀ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಮಂಗಳವಾರ 10.30ರ ವೇಳೆ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ರಥೋತ್ಸದ ಹಿನ್ನಲೆಯಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ವಿವಿಧಡೆಯಿಂದ ಆಗಮಿಸಿದ್ದ ವೆಂಕಟರಮಣ ಸ್ವಾಮಿಯ ಭಕ್ತಗಣ ಹಣ್ಣು ಧವನ, ನಾಣ್ಯ ಎಸೆದು ಗೋವಿಂದ ಗೋವಿಂದ ಎಂಬ ನಾಮ ಸ್ಮರಣೆಯನ್ನು ಮಾಡುತ್ತಾ ತೇರಿಗೆ ನಮಸ್ಕರಿಸಿ ಭಕ್ತಿ ಭಾವ ಮೆರೆದರು.

ಶ್ರೀ ವೆಂಕಟರಮಣ ಸ್ವಾಮಿಗೆ ಬೆಳ್ಳಿಗ್ಗೆಯಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿ ವೆಂಕಟರಮಣಸ್ವಾಮಿಯ ಮೂರ್ತಿಯನ್ನು ಸತ್ತಿಗೆ, ಸೂರಿಪಾನಿ ಹಾಗೂ ಮಂಗಳ ವಾದ್ಯದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ತೇರಿನಲ್ಲಿ ಪ್ರತಿಷ್ಟಾಪಿಸಲಾಯಿತು. ತೇರಿನ ಮೇಲೆ ಬಾನಂಗಳದಲ್ಲಿ ಗರುಡ ಪ್ರದಕ್ಷಿಣೆ ಹಾಕಿದಾಗ ನೆರೆದಿದ್ದ ಭಕ್ತರು ವಿಷ್ಣುವಿನ ಅವತಾರ ಎಂದು ನಮಿಸಿದರು.

ಶಾಸಕ ಎಂ.ಆರ್.ಮಂಜುನಾಥ್ ದೇವಾಲಯಕ್ಕೆ ಬೇಟಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಆಡಳಿತ ಮಂಡಳಿ ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಬ್ರಹ್ಮ ರಥಕ್ಕೆ ನಮಿಸಿದರು.

ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಚಿಕ್ಕ ತಿರುಪತಿ ಎಂದೇ ಪ್ರಸಿದ್ದಿಯನ್ನು ಪಡೆದುಕೊಂಡಿರುವ ಬೂದುಬಾಳು ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಇಂದು ಬಹಳ ಅದ್ದೂರಿಯಾಗಿ ರಥೋತ್ಸವ ಜರುಗಿರುವುದು ತುಂಬಾ ಸಂತೋಷದ ವಿಷಯ. ಹನೂರು ಕ್ಷೇತ್ರದಲ್ಲಿ ಉತ್ತಮ ಮಳೆ ಬೆಳೆಯಾಗಿ ಎಲ್ಲರಿಗೂ ಸುಭಿಕ್ಷೆಯನ್ನು ಉಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಪವರ್ ಸ್ಟಾರ್ ಪುನಿತ್ ಮಡದಿ ಅಶ್ವಿನಿ ಆಗಮನ: ಬೂದುಬಾಳು ಸಮೀಪದ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ಡಾ.ರಾಜಕುಮಾರ್ ಅವರ ಮನೆ ದೇವರಾದ ಬೂದುಬಾಳು ಶ್ರೀ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಅವರ ಕುಟುಂಬ ವರ್ಗದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಮಿಸಿ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದುಕೊಂಡದ್ದು ವಿಶೇಷವಾಗಿತ್ತು. ದೇವಾಲಯದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಲವು ಭಕ್ತರಿಂದ ವಿವಿಧ ಸಂತರ್ಪಣೆ: ಜಿಲ್ಲೆ ನೆರೆ ಜಿಲ್ಲೆಯಲ್ಲೂ ಅಪಾರ ಸಂಖ್ಯೆಯ ಭಕ್ತಗಣವನ್ನು ಹೊಂದಿರುವ ಬೂದುಬಾಳು ಶ್ರೀ ವೆಂಕಟರಮಣಸ್ವಾಮಿಯ ಸದ್ಭಕ್ತರು ರಥೋತ್ಸವದ ಅಂಗವಾಗಿ ಮಜ್ಜಿಗೆ ಪಾನಕ ಕೋಸಂಬರಿ ಅನ್ನ ಸಂತರ್ಪಣೆಯನ್ನು ಕೈಗೊಂಡಿದ್ದರು. ಬೂದುಬಾಳು ಸಮೀಪದ ತೋಟದ ಮನೆಯ ಮಾರಯಪ್ಪ ಗೌಂಡರ್ ಕುಟುಂಬಸ್ಥರು ಪ್ರತಿ ವರ್ಷದಂತೆ ನೂರಾರು ಜನರಿಗೆ ಪಾನಕ ಮಜ್ಜಿಗೆ ಅನ್ನ ಸಂತರ್ಪಣೆಯನ್ನು ನೆರವೇರಿಸಿದರು. ಇದೇ ರೀತಿ ಬೆಂಗಳೂರು ಬನಶಂಕರಿಯ ವಾಸಿಗಳಾದ ಬಿ. ನಾಗರಾಜು ಕುಟುಂಬಸ್ಥರು, ಸಿಂಗನಲ್ಲೂರು ಮಹೇಶ್ ಕುಟುಂಬಸ್ಥರು ಸೇರಿದಂತೆ ಹರಕೆ ಹೊತ್ತ ಹಲವರು ಈ ಪುಣ್ಯಕಾರ್ಯವನ್ನು ನೆರವೇರಿಸಿದರು.

ಮುತ್ತೈದೆಯರಿಗೆ ಪೂಜೆ: ಕೊಳ್ಳೇಗಾಲದ ಇಷಿತಾ ಫುಡ್ ಪಾಯಿಂಟ್ ನ ಸುರೇಶ್ ಕುಟುಂಬಸ್ಥರು ತಮ್ಮ ಪೂರ್ವಜರ ಸಂಪ್ರದಾಯದಂತೆ ರಥೋತ್ಸವದ ಬಳಿಕ ದೊಡ್ಡ ಕೆರೆ ಬಳಿ ಹತ್ತಾರು ಮುತ್ತೈದೆ ಹೆಣ್ಮಕ್ಕಳಿಗೆ ಪಾದ ಪೂಜೆ ನೆರವೇರಿಸಿ ಪೂಜೆ ಸಲ್ಲಿಸಿ ಬಾಗಿನ ನೀಡಿ ತಮ್ಮ ಹರಕೆಯನ್ನು ಸಮರ್ಪಣೆ ಮಾಡಿದ್ದು ಜಾತ್ರೆಯಲ್ಲಿ ನೆರೆದಿದ್ದವರಿಗೆ ವಿಶೇಷವೆನಿಸಿತು.

ಬಿಗಿ ಬಂದೋಬಸ್ತ್: ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹನೂರು ಠಾಣಾ ಇನ್ಸ್ಪೆಕ್ಟರ್ ಆನಂದ್ ಮೂರ್ತಿ, ರಾಮಾಪುರ ಠಾಣಾ ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಧರ್ಮಾಧಿಕಾರಿ ಕೃಷ್ಣಪ್ಪ ಸ್ವಾಮಿಯಾರ್, ಆದಿತ್ಯ ಸ್ವಾಮಿಯಾರ್, ತಹಸೀಲ್ದಾರ್ ಚೈತ್ರ, ಕೊಳ್ಳೇಗಾಲ ಇ ಒ ಗುರುಶಾಂತಪ್ಪ, ಮಂಜುನಾಥ್ ಸ್ವಾಮಿಯಾರ್,‌ ಮಧುಸೂಧನ್ ಸ್ವಾಮಿಯಾರ್, ಇನ್ನಿತರರು ಇದ್ದರು.

Tags:
error: Content is protected !!