ಕೊಳ್ಳೇಗಾಲ : ಬೆಂಗಳೂರಿನಿಂದ ಕೇರಳಕ್ಕೆ ಸಾಗಿಸುತ್ತಿದ್ದ 101 ಕೆಜಿ ತೂಕದ 8 ರಕ್ತಚಂದನ ತುಂಡುಗಳನ್ನು ಅರಣ್ಯ ಸಂಚಾರ ದಳದವರು ವಶಪಡಿಸಿಕೊಂಡಿದ್ದಾರೆ.
ಟಯೋಟ ಕಾರಿನಲ್ಲಿ (ಕೆ.ಎ 04 ಡಿ.7257) ರಕ್ತಚಂದನ ತುಂಡುಗಳನ್ನು ಸಾಗಿಸುತ್ತಿದ್ದ ಕುರಿತು ಸಿಐಡಿ ಅರಣ್ಯ ಸಂಚಾರ ದಳದವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ತಾಲ್ಲೂಕಿನ ಸತ್ತೇಗಾಲ ರಾಷ್ಟ್ರೀಯ ಹೆದ್ದಾರಿ ಉಗನಿಯ ರಸ್ತೆ ಜಂಕ್ಷನ್ ಬಳಿ ತಪಾಸಣೆ ನಡೆಸಿದಾಗ, ಯಾವುದೇ ದಾಖಲಾತಿಗಳು ಇಲ್ಲದೇ ಅಕ್ರಮವಾಗಿ ಸಾಗಣೆ ಮಾಡುತ್ತಿರುವುದು ತಿಳಿದುಬಂದಿದೆ.
ಈ ವೇಳೆ ಬೆಂಗಳೂರು ಮೂಲದ ಜಯಚಂದ್ರ(49), ಸುಮನ್(28), ಕಾರು ಚಾಲಕ ಹರೀಶ್(36) ಎಂಬವರನ್ನು ಬಂಧಿಸಿ, 8.08 ಲಕ್ಷ ರೂ. ಮೌಲ್ಯದ ರಕ್ತಚಂದನ ಹಾಗೂ ಅದನ್ನು ಸಾಗಿಸಲು ಬಳಸಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಸಿಐಡಿ ಅರಣ್ಯ ಸಂಚಾರ ದಳದವರು ಬಂಧಿತರನ್ನು ಬಫರ್ ವಲಯದ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಐಡಿ ಅರಣ್ಯ ಸಂಚಾರ ದಳದ ಆರಕ್ಷಕ ಉಪನಿರೀಕ್ಷಕ ವಿಜಯ್ ರಾಜ್, ಸಿಬ್ಬಂದಿಗಳಾದ ಬಸವರಾಜು, ಸೈಯದ್ ಜಮೀಲ್ ಅಹಮದ್, ರಾಮಚಂದ್ರ, ಲತಾ, ಬಸವರಾಜು, ಚಾಲಕ ಪ್ರಭಾಕರ್ ಭಾಗವಹಿಸಿದ್ದರು.





