ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಗುರುವಾರ ಮುಂಜಾನೆ ಅಗ್ನಿಕುಂಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಕಳೆದ ನಾಲ್ಕು ದಿನಗಳಿಂದ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿದೆ. ನಾಲ್ಕನೇ ದಿನವಾದ ಇಂದು ಮುಂಜಾನೆ 5 ಗಂಟೆಯ ವೇಳೆ ಅಗ್ನಿಕುಂಡೋತ್ಸವವನ್ನು ಪ್ರಧಾನ ಅರ್ಚಕರಾದ ರಾಜುರಾವ್ ಪ್ರದಕ್ಷಿಣೆ ಮಾಡಿದರು.
ಯಶಸ್ವಿಯಾಗಿ ನೆರವೇರಿದ ಅಗ್ನಿಕುಂಡೋತ್ಸವ: ಬುಧವಾರ ತಡರಾತ್ರಿ ಬೃಹತ್ ಗಾತ್ರದ ಮಡಿಕೆಯಲ್ಲಿ ಕಗ್ಗಲಿ ಸೌದೆ ಹಿಟ್ಟು ಪೂಜೆ ಸಲ್ಲಿಸಿದ ನಂತರ ರಾತ್ರಿಯಿಡಿ ಉರಿಸಲಾಗುವುದು. ಗುರುವಾರ ಬೆಳಿಗ್ಗೆ ಪ್ರದಾನ ಅರ್ಚಕರಾದ ರಾಜುರಾವ್ ದೇವಸ್ಥಾನದ ಸಮೀಪದಲ್ಲಿರುವ ಅರಳಿಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಸೂರ್ಯನಮಸ್ಕಾರ ಹಾಕಿದ ನಂತರ ಅರ್ಚಕರ ಮೇಲೆ ಶ್ರೀ ಬೆಟ್ಟಳ್ಳಿ ಮಾರಮ್ಮ ತಾಯಿ ಬಂದು ಬೆಂಕಿಯ ಅಗ್ನಿಕುಂಡವನ್ನು ಪ್ರಧಾನ ಅರ್ಚಕರು ಎತ್ತಿ ಹಿಡಿದು ದೇವಸ್ಥಾನದ ಸುತ್ತಲು ಒಂದು ಬಾರಿ ಪ್ರದಕ್ಷಿಣೆ ಹಾಕಿದ ನಂತರ ಪ್ರಸಕ್ತ ಸಾಲಿನಲ್ಲಿ ಆಗಲಿರುವ ಮಳೆಯ ಪ್ರಮಾಣ ಹಾಗೂ ದೈವವಾಣಿ ಹೇಳುವುದು ವಾಡಿಕೆ. ಅದರಂತೆ ಪ್ರಸಕ್ತ ಸಾಲಿನ ಮುಂಗಾರು ಮತ್ತು ಮುಂಗಾರು ಮಳೆ ಎಷ್ಟು ಆಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಯಿತು.
ಶುಕ್ರವಾರ ಸಂಜೆ ತೆಪ್ಪೋತ್ಸವ: ಹನೂರು ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಮೊದಲನೆ ದಿನ ಜಾಗರ ಸಮರ್ಪಣೆ, ಎರಡನೇ ದಿನ ತಂಪು ಜ್ಯೋತಿ, ರಥೋತ್ಸವ, ಮೂರನೇ ದಿನ ದೊಡ್ಡ ಬಾಯಿ ಬೀಗ, ನಾಲ್ಕನೇ ದಿನ ಅಗ್ನಿಕುಂಡೋತ್ಸವ ಕಾರ್ಯಕ್ರಮಗಳು ನೆರವೇರಲಿದೆ.
ಆರ್.ಎಸ್.ದೊಡ್ಡಿ ಗ್ರಾಮವು ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಿಯ ಗಂಡನ ಮನೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಸಂಜೆ ದೇವರ ಮೆರವಣಿಗೆ ನಡೆಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಆರ್ ಎಸ್ ದೊಡ್ಡಿ ಕೆರೆಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮವು ನೆರವೇರಲಿದೆ. ನಂತರ ಕೆರೆಯ ಮುಂಭಾಗದ ನಿವೇಶನದಲ್ಲಿ ಹಸಿರು ಚಪ್ಪರ ನಿರ್ಮಾಣ ಮಾಡಿ ಉಯ್ಯಾಲೋತ್ಸವದಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ಉತ್ಸವ ಮೂರ್ತಿಯನ್ನು ಇಟ್ಟು ರಾತ್ರಿಯಿಡಿ ಪೂಜೆ ಸಲ್ಲಿಸಿದ ನಂತರ ಶನಿವಾರ ಬೆಳಗ್ಗೆ ಶ್ರೀ ಬೆಟ್ಟಳ್ಳಿ ಮಾರಮ್ಮ ಉತ್ಸವ ಮೂರ್ತಿಯನ್ನು ಹನೂರು ಪಟ್ಟಣದ ಮಾರಮ್ಮ ದೇವಸ್ಥಾನಕ್ಕೆ ತಲುಪಿಸಿದ ನಂತರ ಜಾತ್ರೆಗೆ ತೆರೆ ಬೀಳಲಿದೆ.
ಜಿಲ್ಲಾಡಳಿತಕ್ಕೆ ಕೃತಜ್ಞತೆ: ಹನೂರು ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಯಶಸ್ವಿಯಾಗಲು ಸಹಕರಿಸಿದ ಚಾಮರಾಜನಗರ ಜಿಲ್ಲಾಡಳಿತ ಹನೂರು ತಾಲೂಕು ಆಡಳಿತ, ಪೊಲೀಸ್ ಇಲಾಖೆಗೆ ದೇವಸ್ಥಾನದ ಸಮಿತಿ ವತಿಯಿಂದ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ.
ಇದಲ್ಲದೆ ಕಳೆದ ನಾಲ್ಕು ದಿನಗಳಿಂದ ನಡೆದ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಪಟ್ಟಣದ ಸರ್ವ ಸಮುದಾಯದ ಯಜಮಾನರು ಮುಖಂಡರುಗಳು ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಯಶಸ್ವಿಗೆ ಶ್ರಮಿಸಿದ ಹಿನ್ನೆಲೆ ದೇವಸ್ಥಾನದ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.
ದೇವಸ್ಥಾನದ ಪೂಜಾ ವಿಧಿ ವಿಧಾನಗಳನ್ನು ಅರ್ಚಕರಾದ ದೀಕ್ಷಿತ್, ಯಶ್ವಂತ್ ಸೇರಿದಂತೆ ಇತರೆ ಅರ್ಚಕರು ನೆರವೇರಿಸಿದರು.





