Mysore
15
clear sky

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಗುಡಿ ಗೋಪುರಗಳ ಕೆತ್ತನೆಯ ಹಿಂದೆ ವಿಶ್ವಕರ್ಮರ ಶ್ರಮವಿದೆ: ಶಾಸಕ ಎಂ.ಆರ್.ಮಂಜುನಾಥ್‌

ಹನೂರು: ವಿಶ್ವಕರ್ಮರು ಈ ನೆಲದ ದೇವರ ಸೃಷ್ಟಿಕರ್ತರು. ಯಾವುದೇ ದೇವಸ್ಥಾನಗಳಾಗಲಿ, ಐತಿಹಾಸಿಕ ಸ್ಥಳಗಳಾಗಲಿ, ಮತ್ತಿತರ ಗುಡಿ ಗೋಪುರಗಳ ಕೆತ್ತನೆಯ ಹಿಂದೆ ವಿಶ್ವಕರ್ಮರ ಅಪಾರ ಶ್ರಮವಿದೆ ಎಂದು ಶಾಸಕ ಎಂಆರ್ ಮಂಜುನಾಥ್ ಬಣ್ಣಿಸಿದ್ದಾರೆ.

ಈ ಬಗ್ಗೆ ಹನೂರು ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜಕ್ಕೆ ಮತ್ತು ಅವರ ವೃತ್ತಿಗೆ ದೇಶದಲ್ಲಿಯೇ ಗೌರವ ಸಿಗುವಂತಹ ಕೆಲಸವನ್ನು ವಿಶ್ವಕರ್ಮರು ಮಾಡಿದ್ದಾರೆ. ಜನಸಾಮಾನ್ಯರ ಯಾವುದೇ ದಿನಬಳಕೆಯ ವಸ್ತುಗಳ ಹಿಂದೆ ವಿಶ್ವಕರ್ಮರ ತ್ಯಾಗವಿದೆ. ಈ ನಿಟ್ಟಿನಲ್ಲಿ ಈ ಸಮಾಜವನ್ನು ಗೌರವದಿಂದ ಕಾಣಬೇಕು ಎಂದರು.

ವೇದ ಪುರಾಣಗಳಲ್ಲಿ ವಿಶ್ವಕರ್ಮರನ್ನು ಕಲೆ ವಾಸ್ತುಶಿಲ್ಪದ ಸೃಷ್ಟಿಕರ್ತ ಎಂದು ಬಣ್ಣಿಸಲಾಗಿದೆ. ಹಾಗಾಗಿ ವಿಶ್ವಕರ್ಮ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ಪ್ರತಿಯೊಬ್ಬರು ವಿಶ್ವಕರ್ಮರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಮುದಾಯ ಭವನಕ್ಕೆ ಹೆಚ್ಚಿನ ಅನುದಾನ: ಹನೂರು ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ ವಿಶ್ವಕರ್ಮ ಸಮುದಾಯ ಭವನ ಕಾಮಗಾರಿ ಪೂರ್ಣಗೊಳ್ಳಲು ಹೆಚ್ಚಿನ ಅನುದಾನ ನೀಡುವಂತೆ ಸಮುದಾಯದವರು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅನುದಾನ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಂದಿನ ವರ್ಷದೊಳಗೆ ಉದ್ಘಾಟನೆ ಮಾಡಲು ಕ್ರಮವಹಿಸುತ್ತೇನೆ. ವಿಶ್ವಕರ್ಮ ಸಮುದಾಯಕ್ಕೆ ನಿಗಮದಿಂದ ಹೆಚ್ಚಿನ ಅನುದಾನ ಕೊಡಿಸಲಾಗುವುದು. ಇದಲ್ಲದೆ ಸಮುದಾಯದ ಕೆಲಸ ಕಾರ್ಯಗಳು ನೆನೆಗುದಿಗೆ ಬಿದ್ದಿದ್ದರೆ, ಅದರ ಮಾಹಿತಿಯನ್ನು ಕೊಡಿ. ಅವುಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಸಮುದಾಯದವರು ಸಮುದಾಯ ಭವನ ನಿರ್ಮಾಣ ಮಾಡಲು ನಿವೇಶನ ಕೇಳಿದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸಲು ಬದ್ದನಾಗಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮುಮ್ತಾಜ್ ಬಾನು, ಸದಸ್ಯರಾದ ಮಹೇಶ್ ನಾಯ್ಕ, ಗ್ರೇಡ್ ೨ ತಹಸಿಲ್ದಾರ್ ಡಾ. ಧನಂಜಯ್ ಇಒ ಉಮೇಶ್, ಮುಖ್ಯಾಧಿಕಾರಿ ಅಶೋಕ್ ಆರ್, ಸಿರಸ್ತೆದಾರ್ ನಾಗೇಂದ್ರ, ಅಬಕಾರಿ ಸಬ್ ಇನ್ಸ್ಪೆಕ್ಟರ್ ಸಿದ್ದಯ್ಯ, ಕಂದಾಯ ನಿರೀಕ್ಷಕ ಶೇಷಣ್ಣ ಗ್ರಾಮ ಆಡಳಿತಾಧಿಕಾರಿಗಳಾದ ಕಾವ್ಯ, ಮುಖಂಡರಾದ ರಂಗದಮಾಚಾರ್ ಮುತ್ತುರಾಜು, ಶ್ರೀನಿವಾಸ್ ಮೂರ್ತಿ, ನಾಗಣ್ಣ ಆಚಾರ್ ನಾಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:
error: Content is protected !!