ಚಾಮರಾಜನಗರ: ಭಗವದ್ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸಬೇಕೆಂಬ ಬೇಡಿಕೆ ಹಿಂದಿನಿಂದಲೂ ಇದೆ. ಅದನ್ನು ಬೇಗ ಈಡೇರಿಸಬೇಕು ಎಂದು ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದರು.
ನಗರದ ಡಾ.ರಾಜ್ಕುಮಾರ್ ರಂಗಮಂದಿರದಲ್ಲಿ ಬುಧವಾರ ಸಂಜೆ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಮತ್ತು ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ನೈತಿಕ ಅಧಃಪತನ, ಅಪರಾಧ ಪ್ರವೃತ್ತಿ ಹೆಚ್ಚಾಗಿದೆ. ಇದನ್ನು ತಡೆಯಲು ನೈತಿಕ ಶಿಕ್ಷಣ ಬೇಕಾಗಿದೆ. ಅದು ಈ ಭಗವದ್ಗೀತೆಯಲ್ಲಿದೆ. ಹಾಗಾಗಿ ಶಿಕ್ಷಣದಲ್ಲಿ ಅಳವಡಿಕೆ ಸೂಕ್ತ ಎಂದು ಅಭಿಪ್ರಾಯಪಟ್ಟರು.
ವ್ಯಕ್ತಿತ್ವ ವಿಕಸನ, ನೈತಿಕತೆ ಪುನರುತ್ಥಾನ, ಸಾಮಾಜಿಕ ಸಾಮರಸ್ಯ, ರಾಷ್ಟಿçÃಯ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಈ ಅಭಿಯಾನದ ಉದ್ದೇಶವಾಗಿದೆ. ೨೦೦೭ರಲ್ಲಿ ಅಭಿಯಾನವನು ಆರಂಭಿಸಲಾಗಿತ್ತು. ಜಿಲ್ಲೆಯಲ್ಲೂ ಅಭಿಯಾನವು ನಡೆದಿತ್ತು ಎಂದು ತಿಳಿಸಿದರು.
ತದನಂತರ ಅಭಿಯಾನ ನಿರಂತರವಾಗಿ ನಡೆದಿದೆ. ಮೊದಲ ೪ ವರ್ಷಗಳಲ್ಲಿ ೪ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದೇವು. ನಂತರ ಸಮಗ್ರ ಕರ್ನಾಟಕದಲ್ಲಿ ನಡೆಸಿದ್ದು ಈ ವರ್ಷ ಒಂದು ಜಿಲ್ಲೆಯನ್ನು ಕೇಂದ್ರೀಕರಿಸಲಾಗಿದ್ದು ದಾವಣಗೆರೆ ಜಿಲ್ಲೆಯನ್ನು ಆಯ್ದುಕೊಂಡಿದ್ದೇವೆ ಎಂದು ತಿಳಿಸಿದರು.
ವಿವಿಧತೆಯಲ್ಲಿ ಏಕತೆಯನ್ನು ಕಾಣಲು, ಎಲ್ಲರಲ್ಲೂ ಸಾಮರಸ್ಯ ಮೂಡಿಸಲು, ಸುಶಿಕ್ಷಿತರಲ್ಲಿ ಇರುವ ಸಮಾಜ ಘಾತುಕತನವನ್ನು ಹೋಗಲಾಡಿಸಲು, ಅಪರಾಧ ಮನೋಭಾವ ಕಡಿಮೆ ಮಾಡಲು ಭಗವದ್ಗೀತೆಯನ್ನು ಬೋಧಿಸುವ ಅಗತ್ಯವಿದೆ ಎಂದರು.





