ಚಾಮರಾಜನಗರ: ಡಿ.೧೨ ರಂದು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಲು ಆಗಮಿಸುತ್ತಿರುವ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೇಲೆ ನಾನು ಸೇರಿದಂತೆ ನಾಲ್ವರು ಶಾಸಕರು ದೊಡ್ಡ ನಿರೀಕ್ಷೆ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ತಿಳಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಹನೂರಿನಲ್ಲಿ ೯೫ ಗ್ರಾಮಗಳಿಗೆ ಕಾವೇರಿ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಉದ್ಘಾಟಿಸುವರು. ಅಲ್ಲದೆ ೨೯೧ ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡುವರು. ೩ ಜಲಾಶಯಗಳಿಗೆ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸುವರು ಎಂದರು.
ಜಿಲ್ಲೆಯ ೩೭೬ ಕೆರೆಗಳಿಗೆ ನೀರು ತುಂಬಿಸುವ ೧೫೦೦ ಕೋಟಿ ರೂ. ಯೋಜನೆಗೂ ಶಂಕುಸ್ಥಾಪನೆ ನೀಡಲಿದ್ದಾರೆ. ಇದಲ್ಲದೆ ಇನ್ನು ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು ಎಂದು ತಿಳಿಸಿದರು.
ಇವುಗಳಲ್ಲದೆ ಇನ್ನು ಕೆಲವು ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ನಾನು ಮತ್ತು ನಾಲ್ವರು ಶಾಸಕರು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಮುಖ್ಯಮಂತ್ರಿ ಅವರು ಡಿ.೧೨ ರಂದು ಚಾಮರಾಜನಗರಕ್ಕೆ ಆಗಮಿಸಿ ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೧೨.೩೦ ಗಂಟೆ ತನಕ ಕಾರ್ಯಕ್ರಮದಲ್ಲಿ ಹಾಜರಿರುವರು. ನಂತರ ಹನೂರು, ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ. ಸಂಜೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆ ಹಿಂದುಳಿದಿದೆ ಎಂಬ ಶಾಪವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅಧಿಕಾರಿಗಳು ಸಹಕಾರ ನೀಡಬೇಕು. ಭಾನುವಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಉಳಿದು ಕಾರ್ಯಕ್ರಮಕ್ಕೆ ಸಜ್ಜಾಗಬೇಕು. ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಕರೆತರಬೇಕು ಎಂದು ಸೂಚಿಸಿದರು.
ಶಾಸಕರಿಂದ ಸಿಎಂ ಮೇಲೆ ಹೆಚ್ಚು ನಿರೀಕ್ಷೆ : ಡಿ.12ರ ಕಾರ್ಯಕ್ರಮ ಯಶಸ್ವಿಗೆ ಸೋಮಣ್ಣ ಮನವಿ





