Mysore
20
overcast clouds

Social Media

ಶುಕ್ರವಾರ, 21 ಆಗಸ್ಟ್ 2026
Light
Dark

ಕೇಂದ್ರ ಬಜೆಟ್: ನೈರುತ್ಯ ರೈಲ್ವೆಗೆ 9,200 ಕೋಟಿ ರೂ. ಅನುದಾನ

ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಹೆಚ್ಚು ಮೊತ್ತದ ಅನುದಾನ ಹಂಚಿಕೆ

ಮೈಸೂರು: 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ 9,200 ಕೋಟಿ ರೂ. ಅನುದಾನ ನೀಡಿದ್ದು, ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಇಷ್ಟು ಹಣ ನೀಡಲಾಗಿದೆ. ಮೈಸೂರು ವಿಭಾಗದಲ್ಲಿ ಹೊಸ ರೈಲ್ವೆ ಮಾರ್ಗಗಳ ನಿರ್ಮಾಣಕ್ಕಾಗಿ 1,200 ಕೋಟಿ ರೂ. ಹಂಚಿಕೆಯಾಗಿದೆ.

ಈ ಸಂಬಂಧ ಮೈಸೂರು ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರಾದ ಇ.ವಿಜಯಾ, ಕಳೆದ ಬಾರಿಯ ಬಜೆಟ್‌ನಲ್ಲಿ 9,200 ಕೋಟಿ ರೂ. ನೀಡಲಾಗಿತ್ತು. ಈ ಬಾರಿ ಶೇ 33 ಅನುದಾನ ಹೆಚ್ಚುವರಿಯಾಗಿ ಸಿಕ್ಕಿದೆ. ರಾಜ್ಯಕ್ಕೆ ಒಟ್ಟು 7,561 ಕೋಟಿ ದೊರೆತಿದೆ. 45 ವರ್ಷಗಳಲ್ಲಿಯೇ ಅತಿ ಹೆಚ್ಚು ಅನುದಾನ ಸಿಕ್ಕಿದ್ದು, ಸದ್ಯ ಇರುವ ಮಾರ್ಗಗಳಲ್ಲಿ ಜೋಡಿ ಮಾರ್ಗಗಳ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿರುವುದರಿಂದ ಹೊಸ ಮಾರ್ಗಗಳ ನಿರ್ಮಾಣಕ್ಕೆ ಹಣ ಹಂಚಿಕೆಯಾಗಲಿದೆ ಎಂದು ಮಾಹಿತಿ ನೀಡಿದರು.

ತುಮಕೂರು -ಚಿತ್ರದುರ್ಗ- ದಾವಣಗೆರೆ ಹೊಸ ಮಾರ್ಗಕ್ಕೆ 420 ಕೋಟಿ ರೂ. ನೀಡಿದ್ದು, ತುಮಕೂರು- ರಾಯನದುರ್ಗ ಲೇನ್‌ಗೆ 950 ಕೋಟಿ ರೂ. ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಹೊಸ ಮಾರ್ಗಕ್ಕೆ 150 ಕೋಟಿ ರೂ., ಕಡೂರು-ಚಿಕ್ಕಮಗಳೂರು-ಸಕಲೇಶಪುರ ಮಾರ್ಗಕ್ಕೆ 145 ಕೋಟಿ ರೂ., ಹಾಸನ-ಬೇಲೂರಿಗೆ- 60 ಕೋಟಿ ರೂ. ನೀಡಲಾಗಿದೆ. 6 ಹೊಸ ಮಾರ್ಗಗಳ ರಚನೆಗೆ ಬಹು ಪಾಲು ಹಣ ಹಂಚಿಕೆಯಾಗಿದೆ. ಹಾವೇರಿ-ದೇವರಗುಡ್ಡ ಜೋಡಿ ಮಾರ್ಗ ಮಾಡಲಾಗಿದ್ದು, ಈಗ ಹುಬ್ಬಳ್ಳಿ -ಚಿಕ್ಕಜಾಜೂರು ಜೋಡಿ ಮಾರ್ಗಕ್ಕೆ150 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

ಅಮೃತ್ ಭಾರತ್ ಯೋಜನೆಯಡಿ ಅಭಿವೃದ್ಧಿ: 15 ರೈಲು ನಿಲ್ದಾಣಗಳಾದ ಚಾಮರಾಜನಗರ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ತಿಪಟೂರು, ಅರಸೀಕೆರೆ, ತಾಳಗುಪ್ಪ, ಹರಿಹರ, ರಾಣಿಬೆನ್ನೂರು, ಚಿತ್ರದುರ್ಗ, ಬಂಟ್ವಾಳ, ಹಾಸನ, ಸಾಗರ ಜಂಬೂಗಾರು, ಶಿವಮೊಗ್ಗ ನಗರ, ಚಿಕ್ಕಮಗಳೂರು ಮತ್ತು ದಾವಣಗೆರೆ ಮೂಲಕ ಮೈಸೂರು ವಿಭಾಗದ ಅಭಿವೃದ್ಧಿಗಾಗಿ ಅಮೃತ್ ಭಾರತ್ ನಿಲ್ದಾಣವನ್ನು ಗುರುತಿಸಲಾಗಿದೆ. ಪ್ರತಿ ನಿಲ್ದಾಣದಲ್ಲಿ 8 ರಿಂದ 10 ಕೋಟಿ ರೂ.ಗಳನ್ನು ಪ್ರಯಾಣಿಕರ ಸೌಕರ್ಯಗಳನ್ನು ಸುಧಾರಿಸಲು ವ್ಯಯಿಸಲಾಗುವುದು ಎಂದು ತಿಳಿಸಿದರು.

ಹಾಸನ-ಮಂಗಳೂರು ವಿದ್ಯುದ್ಧೀಕರಣ: ಹಾಸನ-ಮಂಗಳೂರು ನಡುವಿನ ರೈಲು ಮಾರ್ಗದ ವಿದ್ಯುದ್ಧೀಕರಣ ಕಾಮಗಾರಿಗೆ 134 ಕೊಟಿ ರೂ. ಅನುದಾನ ದೊರೆತಿದೆ. ಇದೇ ರೀತಿ ನೈರುತ್ಯ ರೈಲ್ವೆ ವಿಭಾಗದಲ್ಲಿ ಚಿತ್ರದುರ್ಗ-ಹುಬ್ಬಳ್ಳಿ(128 ಕೋಟಿ ರೂ.), ಬೆಂಗಳೂರು-ತಾಳಗುಪ್ಪ(500 ಕೋಟಿ ರೂ.)ನಡುವಿನ ವಿದ್ಯುತೀಕರಣ ಕಾಮಗಾರಿಗೆ ಅನುದಾನ ದೊರೆತಿದೆ ಎಂದು ತಿಳಿಸಿದರು.

ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‌ವಾಲ್, ವಾಣಿಜ್ಯ ವ್ಯವಸ್ಥಾಪಕ ಮಂಜುನಾಥ್ ಕನಮಡಿ, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ವಿನಾಯಕ್ ನಾಯಕ್ ಇತರರು ಹಾಜರಿದ್ದರು.


50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣಗಳಿಗೆ 5 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ರೈಲ್ವೆ ಮಾರ್ಗಗಳಿಗೆ ಸಂಪರ್ಕಿಸುವಂತಹ ಕಲ್ಪಿಸಲು ಸಮೀಕ್ಷೆ ಕಾರ್ಯವನ್ನು ನಡೆಸಲಾಗುವುದು. 3ನೇ ಹಂತದ ನಗರಗಳಾದ ಹಿರಿಯೂರು, ಕೊಳ್ಳೇಗಾಲ ಸೇರಿದಂತೆ ಮೊದಲಾದವು ರೈಲ್ವೆ ಸೇವೆಯನ್ನು ಭವಿಷ್ಯದಲ್ಲಿ ಪಡೆಯಲಿವೆ. 2 ವರ್ಷದಲ್ಲಿ ಸಮೀಕ್ಷೆ ಮುಗಿಯಲಿದ್ದು, ಡಿಪಿಆರ್ ಸಿದ್ಧಪಡಿಸಿ ಹೊಸ ಮಾರ್ಗಗಳಿಗೆ ಅನುದಾನ ಪಡೆಯಲಾಗುವುದು.

-ಇ.ವಿಜಯಾ, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!