Mysore
35
scattered clouds

Social Media

ಸೋಮವಾರ, 11 ಮೇ 2026
Light
Dark

ಕ್ಯಾಮೆರಾ ‘ಕಣ್ಣು’ಗಳಿಲ್ಲದ ದೇವಾಲಯಗಳೇ ಕಳ್ಳರ ‘ಗುರಿ

ಸೂಕ್ತ ಸಾಕ್ಷ್ಯಗಳು ಸಿಗದೇ ಪೊಲೀಸರ ತನಿಖಾ ಕಾರ್ಯಕ್ಕೆ ಸವಾಲಾಗಿರುವ ಪ್ರಕರಣಗಳು
ಚಿರಂಜೀವಿ ಸಿ.ಹುಲ್ಲಹಳ್ಳಿ
ಮೈಸೂರು: ಸೂಕ್ತ ರೀತಿಯ ರಕ್ಷಣಾ ವ್ಯವಸ್ಥೆ ಹೊಂದಿಲ್ಲದ ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುವ ಖದೀಮರು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರೂ, ಸಿಗುವ ಸಾಕ್ಷ್ಯಗಳ ಆಧಾರದಲ್ಲೇ ತನಿಖೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗುತ್ತಿದ್ದಾರೆ.
ಕಳೆದ ಐದು ವರ್ಷಗಳಿಂದ ಜಿಲ್ಲೆಯ ದೇವಸ್ಥಾನದಲ್ಲಿ ನಡೆದಿರುವ ಕಳವು ಪ್ರಕರಣಗಳಲ್ಲಿ ಲಕ್ಷಾಂತರ ರೂ. ನಗದು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದು, ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸ್ ಇಲಾಖೆ ಸಾಹಸ ಪಟ್ಟು ಕೆಲವು ಕಳ್ಳರಿಗೆ ಕಂಬಿ ಎಣಿಸುವಂತೆ ಮಾಡಿದರೆ, ಮತ್ತೆ ಕೆಲವರು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಸಾರ್ವಜನಿಕರು ಮತ್ತು ದೇವಾಲಯದ ಆಡಳಿತ ಮಂಡಳಿಯ ಆತಂಕಕ್ಕೆ ಕಾರಣವಾಗಿದ್ದಾರೆ.
ಗ್ರಾಮೀಣ ಮತ್ತು ಪಟ್ಟಣಗಳಲ್ಲಿ ಪುರಾತನ ಮತ್ತು ಹೆಚ್ಚಿನ ಆರ್ಥಿಕ ವಹಿವಾಟು ಹೊಂದಿರುವ ದೇವಾಲಯಗಳು, ದೇವರ ವಿಗ್ರಹದ ಮೇಲೆ ಹೆಚ್ಚಿನ ಚಿನ್ನಾಭರಣ ಹೊಂದಿರುವ ದೇವಸ್ಥಾನಗಳನ್ನು ಗುರಿಯಾಗಿಸಿ ಮಾಡುವ ಕಳ್ಳರು ಮೂರ್ನಾಲ್ಕು ದಿನ ಹೊಂಚು ಹಾಕಿ ತಮ್ಮ ಕೆಲಸವನ್ನು ಸಾಧಿಸಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣ ನಡೆದಿರುವ ಬಹುತೇಕ ದೇವಾಲಯಗಳಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದಿರುವುದು ಕಳ್ಳರಿಗೆ ವರದಾನವಾಗಿದೆ. ಕೆಲವೊಂದು ಕಡೆ ಕ್ಯಾಮೆರಾಗಳಿದ್ದರೂ ಕಳ್ಳರು ಬುದ್ಧಿವಂತಿಕೆಯಿಂದ ಕಳವು ಮಾಡಿದ್ದಾರೆ.


೨೫ ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು
ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ೯೦ ದೇವಾಲಯಗಳಲ್ಲಿ ಚಿನ್ನಾಭರಣ, ನಗದು, ಹುಂಡಿ ಹಣವನ್ನು ಖದೀಮರು ದೋಚಿದ್ದರು. ಇದರಲ್ಲಿ ಪ್ರಮುಖ ಮತ್ತು ತೀರಾ ಗಂಭೀರವಾದ ೨೫ ಪ್ರಕರಣಗಳನ್ನು ಪೊಲೀಸರು ಭೇದಿಸುವ ಮೂಲಕ ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆದಿರುವುದು ಅಂಕಿ-ಅಂಶಗಳು ಹೇಳುತ್ತಿವೆ.


ದೈವ ಭಕ್ತ ಕಳ್ಳರು!
ನಂಜನಗೂಡು ತಾಲ್ಲೂಕಿನ ಉಪ್ಪಿನಹಳ್ಳಿ ಗ್ರಾಮದ ದುರ್ಗಾಂಬ ದೇವಸ್ಥಾನದಲ್ಲಿ ದೇವರ ತಾಳಿಯನ್ನು ಕದ್ದು, ವಾಪಸ್ ತಂದಿಟ್ಟು ಜೊತೆಗೆ ೧೦೧ ರೂಪಾಯಿ ತಪ್ಪು ಕಾಣಿಕೆ ಇಟ್ಟು ಕಳ್ಳರು ತನ್ನ ದೈವ ಭಕ್ತಿಯನ್ನು ಮೆರೆದಿದ್ದಾರೆ. ದೇವರ ತಾಳಿ ಜತೆಗೆ ಅವರು ಹುಂಡಿಯಲ್ಲಿದ್ದ ಹಣವನ್ನು ಕದ್ದೊಯ್ದಿದ್ದರು.


ಸಿನಿಮಾ ಶೈಲಿಯಲ್ಲಿ ಕಳ್ಳರ ಸೆರೆ
ಈಚೆಗೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಪ್ರಸಿದ್ಧ ಮೂಗೂರು ತ್ರಿಪುರ ಸುಂದರಿ ದೇವಾಲಯದ ಕಳ್ಳತನ ಪ್ರಕರಣ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ವಿಶೇಷ ತಂಡ ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದಲ್ಲಿ ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ೫ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣವನ್ನು ಬೇಧಿಸಿದರು. ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿಗಳು ಜಿಲ್ಲೆಗಳ ಹಲವು ದೇಗುಲ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾ ಗಿದ್ದು, ಪೊಲೀಸರ ಸಾಹಸದ ಬಗ್ಗೆ ಶ್ಲಾಘನೆ ಮಾತುಗಳು ವ್ಯಕ್ತವಾದವು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!