Mysore
21
scattered clouds

Social Media

ಸೋಮವಾರ, 22 ಜೂನ್ 2026
Light
Dark

ಅರಮನೆ ಅಂಗಳದಲ್ಲಿ ಆಯುಧಪೂಜೆಯ ಸಂಭ್ರಮ

ಮೈಸೂರು: ಮೈಸೂರು ಅರಮನೆಯಲ್ಲಿ ಆಯುಧಪೂಜೆಯ ಪೂಜಾ ಕೈಂಕರ್ಯ ಆರಂಭವಾಗಿದ್ದು, ಆನೆಬಾಗಿಲು ಮೂಲಕ ಪಟ್ಟದ ಆನೆ, ಕುದುರೆ, ಹಸುಗಳು ಬಂದಿವೆ. ಪಾರಂಪರಿಕ ಆಯುಧ ಪಲ್ಲಕ್ಕಿಯನ್ನು ರಾಜವಂಶಸ್ಥರು, ಅರಮನೆ ಸಿಬ್ಬಂದಿ ನೇತೃತ್ವದಲ್ಲಿ ತರಲಾಯಿತು. ಕೋಡಿಸೋಮೇಶ್ವರ ದೇಗುಲದಲ್ಲಿ ಪಾರಂಪರಿಕ ಆಯುಧಗಳನ್ನು ಅಲಂಕರಿಸಿದ ರಾಜಪುರೋಹಿತರು ವಿಶೇಷ ಪೂಜೆ ನೆರವೇರಿಸಲಾಯಿತು.

ಅರಮನೆ ನಗರಿಯಲ್ಲಿ ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ಬೆಳಗ್ಗೆ 6 ಗಂಟೆಯಿಂದಲೇ ಚಂಡಿ ಹೋಮದ ವಿಧಿಗಳು ಆರಂಭವಾಗಿದ್ದು, 9 ಗಂಟೆಗೆ ಚಂಡಿಹೋಮ ಪೂರ್ಣಾಹುತಿ ನಡೆಯಿತು. 11.02ರಿಂದ 11.25ರ ಶುಭ ಮುಹೂರ್ತದಲ್ಲಿ ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಪೂಜೆ ಆಯುಧಗಳಿಗೆ ಪೂಜೆ ಸಲ್ಲಿಸಲಾಗುವುದು. ಇಂದು ರಾತ್ರಿ ಈ ವರ್ಷದ ಖಾಸಗಿ ದರ್ಬಾರ್​ನ ಕೊನೆಯ ದಿನ. ದರ್ಬಾರ್ ನಂತರ ಸಿಂಹಾಸನದ ಸಿಂಹ ವಿಸರ್ಜಿಸಲಾಗುವುದು. ರಾತ್ರಿ ದೇವರ ಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಂಕಣ ವಿಸರ್ಜನೆ ಮಾಡಲಿದ್ದಾರೆ.

ಆನೆಗಳಿಗೆ ಚಿತ್ತಾರ

ಮೈಸೂರು ಅರಮನೆಯ ಪಟ್ಟದ ಆನೆಗಳಾದ ಭೀಮ ಮತ್ತು ಧನಂಜಯ್​ಗೆ ಚಿತ್ತಾರದ ಅಲಂಕಾರ ಮಾಡಲಾಗಿದೆ. ಅರಮನೆಯ ಎರಡು ಹೆಣ್ಣು ಆನೆಗಳೂ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಆಗಮಿಸಿವೆ. ಪಟ್ಟದ ಆನೆಗಳ ಮೇಲೆ ಮೈಸೂರು ರಾಜಮನೆತನದ ಲಾಂಛನವಾದ ಗಂಡಬೇರುಂಡ, ಕಾಲುಗಳಿಗೆ ಎಲೆ ಬಳ್ಳಿ, ಕಿವಿಗಳಿಗೆ ಶಂಕು-ಚಕ್ರ, ಸೊಂಡಿಲಿಗೆ ಹೂ ಬಳ್ಳಿ ಚಿತ್ತಾರಗಳನ್ನು ಮೈಸೂರು ಮೂಲದ ಕಲಾವಿದ ರಾಜು ಬಿಡಿಸಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ  ವಿಜಯದಶಮಿಯಂದು (ಅ 5) ನಡೆಯಲಿದೆ. ಮೆರವಣಿಗೆ ಸಾಗುವ ರಸ್ತೆ, ಪ್ರಮುಖ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದರು.

ಲಕ್ಷಾಂತರ ಜನರು ಸೇರಬಹುದೆಂಬ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅರಮನೆಯಿಂದ ಜಂಬೂ ಸವಾರಿ ಹೊರಬರುವ ಬಲರಾಮ ಗೇಟ್ ಬಳಿ ಬಾಂಬ್ ಸ್ಕ್ವಾಡ್, ಶ್ವಾನದಳದಿಂದ ತಪಾಸಣೆ ನಡೆಸಲಾಗಿದೆ. ಕಸದ ಡಸ್ಟ್​ಬಿನ್ ಸೇರಿದಂತೆ ಪ್ರತಿಯೊಂದು ವಸ್ತುವನ್ನೂ ಅರಮನೆ ಮೈದಾನದಿಂದ ಬನ್ನಿಮಂಟಪವರೆಗೂ ತಪಾಸಣೆ ನಡೆಸಲಾಯಿತು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!