ಆಂದೋಲನ ಫಲಶ್ರುತಿ
ಹನೂರು: ತಾಲ್ಲೂಕಿನ ತೊಳಸೀಕೆರೆ ಗ್ರಾಮದಲ್ಲಿ ಕೆಟ್ಟು ನಿಂತಿದ್ದ ಸೋಲಾರ್ ಪ್ಲಾಂಟ್ ನ್ನು ಸೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಭಾನುವಾರ ದುರಸ್ತಿಪಡಿಸಿದ್ದಾರೆ.
ಮಲೆ ಮಹಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ಇದ್ದರಿಂದ ದೀನ್ ದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯಡಿ ಡಿಡಿಜಿ ಕಾರ್ಯಕ್ರಮದಡಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಮುಂಬೈನ ನವ್ಯ ಟೆಕ್ನಾಲಜೀಸ್ ಸಂಸ್ಥೆಯ ಮೂಲಕ ರಲ್ಲಿ ಗ್ರಾಮದ ನೂರ ಎಂಬತ್ತು ಕುಟುಂಬಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2 ಕೋಟಿ 28ಲಕ್ಷದ 48ಸಾವಿರ ರೂ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಸೌಕರ್ಯ ಕಲ್ಪಿಸಲಾಗಿತ್ತು. ಆದರೆ ಕಳೆದ ಹತ್ತು ದಿನಗಳಿಂದ ಸೋಲಾರ್ ಪ್ಲಾಂಟ್ ದುರಸ್ತಿಗೊಂಡಿದ್ದ ರಿಂದ ತೊಳಸೀಕೆರೆ ಗ್ರಾಮಸ್ಥರು ಕಗ್ಗತ್ತಲಿನಲ್ಲಿ ಕಾಲ ಕಳೆಯುವಂತಾಗಿತ್ತು.
ಈ ಹಿನ್ನೆಲೆ “ಕೆಟ್ಟ ಸೋಲಾರ್ ಪ್ಲಾಂಟ್ ಕಗ್ಗತ್ತಲಿನಲ್ಲಿ ತೊಳಸೀಕೆರೆ” ಎಂಬ ಶೀರ್ಷಿಕೆಯಡಿ ಆಂದೋಲನ ದಿನಪತ್ರಿಕೆಯಲ್ಲಿ ಅಕ್ಟೋಬರ್ 12ರಂದು ವರದಿ ಪ್ರಕಟಿಸಲಾಗಿತ್ತು.
ಎಚ್ಚೆತ್ತ ಸೆಸ್ಕಾಂ ಹಾಗೂ ಟೆಂಡರ್ ಪಡೆದಿದ್ದ ಏಜೆನ್ಸಿಯವರು ಭಾನುವಾರ ದುರಸ್ತಿಗೊಂಡಿದ್ದ ಐಸಿಯನ್ನು ಬದಲಾಯಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಟ್ಟಿದ್ದಾರೆ.

ಪತ್ರಿಕೆಯ ವರದಿ ಬಗ್ಗೆ ಮೆಚ್ಚುಗೆ : ಆಂದೋಲನ ದಿನಪತ್ರಿಕೆಯಲ್ಲಿ ತೊಳಸೀಕೆರೆ ಗ್ರಾಮದ ಬಗ್ಗೆ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿ,ವಿದ್ಯುತ್ ಕೊಡಿಸಿರುವುದಕ್ಕೆ ಗ್ರಾಪಂ ಅಧ್ಯಕ್ಷ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





