ಚಾಮರಾಜನಗರ : ಅಂಬೇಡ್ಕರ್ ವಾದಿ ದೃಷ್ಟಿಕೋನದಲ್ಲಿ ಸಾವರ್ಕರ್ ನೋಡಲು ಶುರುಮಾಡಿದ್ದೇನೆ ಎಂದು ಮಾಜಿ ಸಚಿವ ಹಾಗೂ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ತಿಳಿಸಿದರು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ನಡೆದ ಸಾವರ್ಕರ್ ರಥಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಾವರ್ಕರ್ ರಥಯಾತ್ರೆಯ ಮೂಲ ಉದ್ದೇಶವೆಂದರೆ ಅವರ ಜೀವನ, ಸಾಧನೆ ಮತ್ತು ಹೋರಾಟವನ್ನು ಜನಮಾನಸಕ್ಕೆ ತಿಳಿಸುವುದೇ ಆಗಿದೆ. ಈ ದೇಶದಲ್ಲಿ ಸಮಾನತೆಗಾಗಿ ಸಾಕಷ್ಟು ಜನ ಹೋರಾಟ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಸಾಗಿದ ಸಾವರ್ಕರ್ ಅವರ ನೈಜ ಜೀವನವನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದೇವೆ.
ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ ನಾನು ಅಂಬೇಡ್ಕರ್ ವಾದಿಯಾಗಿದ್ದು ಆ ದೃಷ್ಟಿಕೋನದಲ್ಲಿ ಸಾವರ್ಕರ್ ನೋಡಲು ಶುರುಮಾಡಿದ್ದೇನೆ. ೮೨ ವರ್ಷ ಬದುಕಿದ್ದ ಸಾವರ್ಕರ್ ಅವರು ೫೦ ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದರು. ಬ್ರಿಟೀಷರಿಗೆ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿದ್ದ ಕಾರಣಕ್ಕೆ ಅವರಿಗೆ ಅಷ್ಟೊಂದು ಶಿಕ್ಷೆ ವಿಧಿಸಲಾಯಿತು ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಹೋರಾಟದ ಘಟನೆಗಳು ಸಾವರ್ಕರ್ ಅವರಲ್ಲಿ ದೊಡ್ಡ ಪರಿವರ್ತನೆ ತಂದಿತು ಎಂಬುದು ನನ್ನ ಗ್ರಹಿಕೆಯಾಗಿದೆ. ವೇದೋಕ್ತ ನಿಷೇಧ, ಉದ್ಯೋಗ ನಿಷೇಧ, ಅಸ್ಪೃಶ್ಯತೆ, ಸಮುದ್ರ ಪರ್ಯಟನೆ ನಿಷೇಧ, ಶುದ್ಧಿ ನಿಷೇಧ, ಸಹಭೋಜನ ನಿಷೇಧ, ಅಂತರ್ಜಾತಿ ಮದುವೆ ನಿಷೇಧ ಎಂಬ ೭ ಸಂಕೋಲೆಗಳ ವಿರುದ್ಧ ಸಾವರ್ಕರ್ ಹೋರಾಟ ನಡೆಸಿದರು. ಇದರಿಂದ ನಾನು ಮುಕ್ತಿ ಹೊಂದದ ಹೊರತು ನಮಗೆ ಸ್ವಾತಂತ್ರ್ಯ ದಕ್ಕಿದರೂ ಪ್ರಯೋಜನವಿಲ್ಲ ಎಂದಿದ್ದರು. ಇದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ನಿಲುವು ಕೂಡ ಆಗಿತ್ತು, ಈ ೭ ಸಂಕೋಲೆಗಳಿಂದ ನಾವು ಬಿಡುಗಡೆಯಾಗಬೇಕಿದೆ ಹಿಂದೂ ಸಮಾಜವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ತಿಳಿಸಿದರು.
ಇದೆಲ್ಲವನ್ನೂ ಓರ್ವ ಅಂಬೇಡ್ಕರ್ ವಾದಿಯಾಗಿಯೇ ಹೇಳುತ್ತಿದ್ದೇನೆ, ಪ್ರತಿಯೊಂದು ಹೋರಾಟದ ಮಾರ್ಗದಲ್ಲೂ ಧನಾತ್ಮಕ ಹಾಗೂ ಋಣಾತ್ಮಕ ಚಿಂತನೆಗಳು ಇದೆ. ನಾನು ಧನಾತ್ಮಕ ಚಿಂತನೆಗಳನ್ನೇ ಮಾತನಾಡಲು ಶುರು ಮಾಡಿದ್ದೇನೆ. ಈ ನಿಟ್ಟಿನಲ್ಲಿ ನೋಡಿದ್ದೆ ಆದರೆ ಮೊದ ಮೊದಲು ಕ್ರಾಂತಿಕಾರಿಯಾಗಿದ್ದ ಸಾವರ್ಕರ್ ಬರಬರುತ್ತಾ ಸಮಾಜ ಸುಧಾರಕರಾದರು ಎಂದು ತಿಳಿಸಿದರು.