Mysore
29
overcast clouds

Social Media

ಶನಿವಾರ, 13 ಜೂನ್ 2026
Light
Dark

ನಾನು ಕನ್ನಡ ಶಾಲೆಯಲ್ಲಿ ಓದಿದವನು ಎಂದು ಹೇಳಿಕೊಳ್ಳಲು ಹೆಮ್ಮೆ : ನ್ಯಾ. ಅರಳಿ ನಾಗರಾಜ

ಹನೂರು :ಕನ್ನಡ ಮಾಧ್ಯಮದಲ್ಲಿ ಓದಿದವನು ಎಂದು ಹೇಳಲು ನನಗೆ ಬಹಳ ಹೆಮ್ಮೆ ಇದೆ. ಕರ್ನಾಟಕದ ಉಚ್ಚ ನ್ಯಾಯಾಲಯ ಸ್ಥಾಪಿತವಾಗಿ ಐವತ್ತಕ್ಕಿಂತ ಹೆಚ್ಚು ವರ್ಷಗಳ ಕಳೆದಿದ್ದರೂ, ಯಾವುದೇ ತೀರ್ಪು ಕನ್ನಡದಲ್ಲಿ ಇರುವುದಿಲ್ಲ. ಕನ್ನಡಿಗನಾದ ನಾನು ಕನ್ನಡದಲ್ಲೇ ನ್ಯಾಯಾಲಯದ ತೀರ್ಪುಗಳನ್ನು ನೀಡಿದ್ದೇನೆ ಎಂದು ನಿವೃತ್ತ ನ್ಯಾಯಾಧೀಶರಾದ ಸಂತಸ ವ್ಯಕ್ತಪಡಿಸಿದರು.

ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜೆ ಎಸ್ ಬಿ ಪ್ರತಿಷ್ಠಾನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ – ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು, ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿ, ಮಾತನಾಡಿದರು.

ಕನ್ನಡವನ್ನು ನಮ್ಮ ಉಸಿರಾಗಿಸಿಕೊಳ್ಳಬೇಕು. ಬೇರೆ ಭಾಷೆಗಳನ್ನು ಕಲಿಯಬೇಕು, ನಮ್ಮ ಭಾಷೆಯನ್ನು ಬಳಸಿ, ಬೆಳೆಸಬೇಕು. ನಾಡು-ನುಡಿಯ ಬಗ್ಗೆ ಪೂಜನೀಯ ಭಾವನೆಯನ್ನು ಹೊಂದಿರಬೇಕು. ಕನ್ನಡದ ಮೇಲೆ ಪ್ರೀತಿ ಇರಬೇಕು, ಅದು ಎಷ್ಟೆಂದರೆ, ನಮ್ಮ ತಾಯಿಯ ಪ್ರೀತಿಗಿಂತ ಹೆಚ್ಚಿರಬೇಕು. ಕವಿ ಮಹಾಲಿಂಗರಂಗರು, ನಮ್ಮ ಭಾಷೆ ಕಲಿಯುವುದು ಸುಲಿದ ಬಾಳೆಹಣ್ಣನ್ನು ತಿನ್ನಲು ಕೊಟ್ಟಹಾಗೆ, ಸಿಪ್ಪೆ ತೆಗೆದು ಕಬ್ಬನ್ನು ತಿನ್ನಲು ಕೊಟ್ಟಹಾಗೆ, ಕರೆದು ನೊರೆಹಾಲನ್ನು ನುಡಿಯಲು ಕೊಟ್ಟಂತೆ. ಎಂದು ಹೇಳಿದ್ದಾರೆ. ಅದನ್ನು ನಾವೆಲ್ಲರೂ ಅರ್ಥೈಸಬೇಕಿದೆ. ಕನ್ನಡ ಸಾಹಿತ್ಯವನ್ನು ಓದುವುದರಿಂದ ನಾವು ವಿಚಾರವಂತರಾಗುತ್ತೇವೆ ಎಂದು ತಿಳಿಸಿದರು.

ಜೆ ಎಸ್ ಬಿ ಪ್ರತಿಷ್ಠಾನದ ಶಶಿಕುಮಾರ್ ಗುರಿಯನ್ನು ಸಾಧಿಸಲು ಅಧ್ಯಯನ ಅಗತ್ಯ. ಅಧ್ಯಯನಕ್ಕೆ ಏಕಾಗ್ರತೆ ಬೇಕು, ಅದು ಬರಲು ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಇದು ಸಾಧ್ಯವಾಗುವುದು, ಕನ್ನಡವನ್ನು, ಕನ್ನಡತನವನ್ನು, ಕನ್ನಡದ ಸಂಸ್ಕಾರಗಳನ್ನು ಕಲಿಯುವುದರಿಂದ. ನಮ್ಮ ದೇಹವು ಸಮಾಜದ ಋಣದಿಂದ ಕೂಡಿದ್ದು, ಸಮಾಜದ ಋಣ ತೀರಿಸಲು ಬಸವಾದಿ ಶರಣರು ಹಾಕಕೊಟ್ಟ ಮಾರ್ಗದಲ್ಲಿ ನಡೆಯಬೇಕು. ನುಡಿದಂತೆ ನಡೆಯಬೇಕು. ಅದೇ ನಿಜವಾದ ಜೀವನ. ಇಂದು ಕನ್ನಡ ಶಾಲೆಗಳು ಮುಚ್ಚುತ್ತಿವೆ ಅದಕ್ಕೆ ಕಾರಣ ಹಲವು. ಸಾಹಿತ್ಯ ಪರಿಷತ್ತಿನಂತಹ ಕನ್ನಡ ಸಂಘಟನೆಗಳು ಕನ್ನಡ ಶಾಲೆಗಳ ಸ್ಥಿತಿ ಗತಿಗಳನ್ನು ಅಧ್ಯಾಯನ ಮಾಡಬೇಕು. ಮೂಲಭೂತ ಸೌಕರ್ಯ, ಕುಂದುಕೊರತೆಗಳನ್ನು ಪರಿಶೀಲನೆ ಮಾಡಿ, ಸ್ಥಳೀಯ ಸಂಸ್ಥೆಗಳ ಮೂಲಕ ಒದಗಿಸುವ ಕೆಲಸ ಮಾಡಬೇಕು. ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ, ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಹನೂರು ಘಟಕದ ಮಲ್ಲೇಶ ಮಾಲಿಂಕಟ್ಟೆ ವಹಿಸಿದ್ದರು .ದಿವ್ಯಸಾನಿಧ್ಯ ವಹಿಸಿದ್ದ ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಆರ್ಶಿವಚನ ನೀಡಿದರು.
ಕಾರ್ಯಕ್ರಮದಲ್ಲಿ ಮಹದೇವಪ್ರಭುಸ್ವಾಮಿ, ಸುರೇಶ, ಮಹೇಶ, ಜಗದೀಶ, ರಾಜು, ಅಯ್ಯೂ ನಾಯಕ, ಸಿಬ್ಬಂದಿ ವರ್ಗದವರು ಮತ್ತು ಮಕ್ಕಳಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!