Mysore
25
moderate rain

Social Media

ಶನಿವಾರ, 13 ಜೂನ್ 2026
Light
Dark

ಡಿ.3ರಂದು ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಪ್ರಶಸ್ತಿ, ಪ್ರತಿಭಾ ಪುರಸ್ಕಾರ ಪ್ರದಾನ

ಸುದ್ದಿಗೋಷ್ಠಿಯಲ್ಲಿ ವಿ.ಮಲ್ಲಿಕಾರ್ಜುನಸ್ವಾಮಿ ದುಗ್ಗಹಟ್ಟಿ ವಿವರಣೆ

ಚಾಮರಾಜನಗರ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿ, ಕೆ.ಸಿ.ಚಿಕ್ಕವೀರಯ್ಯ ಶಿಕ್ಷಕ ಪ್ರಶಸ್ತಿ, ಕೆ.ಸಿ.ಶಿವಪ್ಪ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭವನ್ನು ಡಿ.೩ ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‌ನ ಜಿಲ್ಲಾಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ ದುಗ್ಗಹಟ್ಟಿ ಅವರು ತಿಳಿಸಿದರು.
ಅಮೇರಿಕಾದದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ರವಿಕಾಗಲವಾಡಿ ಅವರು ತಮ್ಮ ತಂದೆ ಹಾಗೂ ತಾಲ್ಲೂಕಿನ ಕಾಗಲವಾಡಿ ಗ್ರಾಮದವರಾದ ಸಾಹಿತಿ ಕೆ.ಸಿ.ಶಿವಪ್ಪ ಹೆಸರಿನಲ್ಲಿ ದತ್ತಿಯನ್ನು ಸ್ಥಾಪಿಸಲು ಶರಣ ಸಾಹಿತ್ಯ ಪರಿಷತ್‌ಗೆ ೮ ಲಕ್ಷ ರೂ. ನೀಡಿದ್ದಾರೆ. ಇದರ ಬಡ್ಡಿ ಹಣದಿಂದ ೩ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿಯನ್ನು ಜಿಲ್ಲೆಯಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ. ಈ ಬಾರಿ ಪ್ರಶಸ್ತಿಗೆ ಬಡ ಮಕ್ಕಳ ಬಾಳಿಗೆ ಬೆಳಕಾಗಿರುವ ದೀನಬಂಧು ಸಂಸ್ಥೆಯ ಜಿ.ಎಸ್.ಜಯದೇವ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸಾಹಿತಿ ಕೆ.ಸಿ.ಶಿವಪ್ಪ ಅವರ ತಂದೆಯಾದ ಕೆ.ಪಿ.ಚಿಕ್ಕವೀರಯ್ಯ ಅವರು ಜಿಲ್ಲೆಯ ಶಾಲೆಗಳಲ್ಲಿ ೩೫ ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಹೆಸರಿನಲ್ಲಿ ಕೆ.ಸಿ.ಚಿಕ್ಕವೀರಯ್ಯ ಶಿಕ್ಷಕ ಪ್ರಶಸ್ತಿಯನ್ನು ಶಿವಪ್ಪ ಸ್ಥಾಪಿಸಿದ್ದಾರೆ. ೩ ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುವ ಹೊಂಗಳ್ಳಿ ಶಾಲೆಯ ಮುಖ್ಯ ಶಿಕ್ಷಕ ಬಿ.ಮಹದೇಶ್ವರಸ್ವಾಮಿ ಅವರನ್ನು ಈ ಪ್ರಶಸ್ತಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಶಾಲೆಗಳಲ್ಲಿ ಚೆನ್ನಾಗಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕೆ.ಸಿ.ಶಿವಪ್ಪ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ನೀಡಲಾಗುವುದು. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೧ ಅಂಕಗಳಿಸಿದ ಕಲ್ಪುರ ಗ್ರಾಮದ ವಿದ್ಯಾರ್ಥಿನಿ ಸ್ಪೂರ್ತಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಡಿ.೩ ರಂದು ಸಂಜೆ ೫ ಗಂಟೆಗೆ ನಗರದ ಜೆಎಸ್‌ಎಸ್ ಕಾಲೇಜು ಸಭಾಂಗಣದಲ್ಲಿ ಸಮಾರಂಭವು ನಡೆಯಲಿದ್ದು, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮುಕ್ತಿದಾನಂದಜಿ ಮಹರಾಜ್ ಸಾನಿಧ್ಯ ವಹಿಸುವರು. ಪರಿಷತ್‌ನ ಅಧ್ಯಕ್ಷ ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದರು.
ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಆಧ್ಯಾತ್ಮ ಚಿಂತಕ ಶಂಕರದೇವನೂರು ಅತಿಥಿಗಳಾಗಿ ಭಾಗವಹಿಸುವರು. ದತ್ತಿ ಪ್ರಾಯೋಜಕರಾದ ಕೆ.ಸಿ.ಶಿವಪ್ಪ ಉಪಸ್ಥಿತರಿರುವರು ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!