Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ಸಿಮ್ಸ್ ಆಸ್ಪತ್ರೆಯಿಂದ ಏಕಾಏಕಿ 10 ನೌಕರರ ವಜಾ

2 ತಿಂಗಳ ಸಂಬಳ ನೀಡದೆ ಸತಾಯಿಸುತ್ತಿರುವ ಏಜೆನ್ಸಿ; ಏಜೆನ್ಸಿ ಮಾಲೀಕನ ವಿರುದ್ಧ ಪೊಲೀಸರಿಗೆ ದೂರು

ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಚಾ.ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ಬೋಧನಾ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಡಿ.ದರ್ಜೆಯ 10 ನೌಕರರನ್ನು ಏಕಾಏಕಿ ವಜಾ ಮಾಡಿದ್ದಲ್ಲದೆ, ಅವರಿಗೆ 2 ತಿಂಗಳ ಸಂಬಳವನ್ನು ನೀಡದೆ ಸತಾಯಿಸಲಾಗುತ್ತಿದೆ.
ಹೊರಗುತ್ತಿಗೆ ಆಧಾರದ ಮೇಲೆ ವಿಘ್ನೇಶ್ವರ ಏಜೆನ್ಸಿಯಿಂದ ನೇಮಕ ಮಾಡಿಕೊಂಡಿದ್ದ ಪದ್ಮ, ಲಕ್ಷ್ಮಮ್ಮ, ಯಶೋಧಮ್ಮ, ಸವಿತಾ, ಜಯಮ್ಮ, ಮೀನಾ ಎಂಬುವರು ಸೇರಿದಂತೆ 10 ನೌಕರರನ್ನು ಕಳೆದ 4 ತಿಂಗಳ ಹಿಂದೆ ದಿಡಿಕ್ಷೀರನೆ ಕಿತ್ತು ಹಾಕಲಾಗಿದೆ. ಇವರಿಗೆ 2 ತಿಂಗಳ ಸಂಬಳವನ್ನು ನೀಡಿಲ್ಲ.
ಇವರ ಬದಲಿಗೆ ವಿಘ್ನೇಶ್ವರ ಏಜೆನ್ಸಿ ಮಾಲೀಕ ವಿಜೆಯೇಂದ್ರ ಎಂಬುವರು ಮಧ್ಯವರ್ತಿ ಮಹದೇವಸ್ವಾಮಿ ಎಂಬಾತನ ಮೂಲಕ 30-40  ಸಾವಿರ ರೂ. ನೀಡಿದ 25 ಮಂದಿಯಯನ್ನು ಡಿ.ದರ್ಜೆ ನೌಕರರರಾಗಿ ನೇಮಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
2 ತಿಂಗಳ ಬಾಕಿ ಸಂಬಳವನ್ನು ಕೇಳಿದರೆ ನೀಡುವುದಾಗಿ ಸಬೂಬು ಹೇಳುತ್ತ ಕಾಲ ಕಳೆಯುತ್ತಿದ್ದಾರೆ. ಏಜೆನ್ಸಿಅವಧಿ ಇನ್ನು2  ತಿಂಗಳಲ್ಲಿ ಮುಗಿಯಲಿದೆ. ನಮಗೆ ಯಾವಾಗ ಬಾಕಿ ಸಂಬಳ ನೀಡುವುದು ಎಂದು ಕೆಲಸ ಕಳೆದುಕೊಂಡಿರುವ ನೌಕರರು ಪ್ರಶ್ನಿಸಿದ್ದಾರೆ.
2016-17 ನೇ ಸಾಲಿನಿಂದಲೂ ನಾವು ಆಸ್ಪತ್ರೆಯಲ್ಲಿ ಹೊರ ಗುತ್ತಿಗೆಯಡಿ ಡಿ.ದರ್ಜೆ ನೌಕರರಾಗಿ ಕೆಲಸ ಮಾಡಿದ್ದೇವೆ. ಕೊರೊನಾ ಸಂದರ್ಭದಲ್ಲೂ ದುಡಿದಿದ್ದೇವೆ. ಆದರೂ ನಮ್ಮನ್ನು ಕಿತ್ತು ಹಾಕಿ ನಮ್ಮ ಬದಲಿಗೆ ಬೇರೆಯವರನ್ನು ಹಣ ಪಡೆದು ಏಜೆನ್ಸಿಯವರು ನೇಮಿಸಿಕೊಂಡಿದ್ದಾರೆ ಎಂದು ನೌಕರರು ದೂರಿದ್ದಾರೆ.
ಬಾಕಿ ಸಂಬಳ ನೀಡಬೇಕೆಂದು ಮತ್ತು ಮರು ನೇಮಕ ಮಾಡಿಕೊಳ್ಳಬೇಕೆಂದು ನಾವು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಸಿಮ್ಸ್ ಆಸ್ಪತ್ರೆಯ  ನಿರ್ದೇಶಕ ಡಾ.ಸಂಜೀವ್ ಅವರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಹಣ ವಸೂಲಿ ಮಾಡಿ ನೌಕರಿ
ಆಸ್ಪತ್ರೆಗೆ ಹೊರ ಗುತ್ತಿಗೆಯಡಿ ಡಿ.ದರ್ಜೆ ನೌಕರರನ್ನು ನೇಮಿಸಿಕೊಳ್ಳಲು ಮಧ್ಯವರ್ತಿ ಅಯ್ಯನಪುರ ಮಹದೇವಸ್ವಾಮಿ ಎಂಬಾತನ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ. ಒಬ್ಬರಿಂದ ಕನಿಷ್ಟ 30-40 ಸಾವಿರ ರೂ. ಪಡೆದು ಸೇರಿಸಿಕೊಳ್ಳಲಾಗುತ್ತಿದೆ. ಏಜೆನ್ಸಿಯವರು ಸರ್ಕಾರದಿಂದ ಕಮೀಷನ್ ಪಡೆಯುವ ಜೊತೆಗೆ ಜನರಿಂದ ಹಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.


ನಮಗೆ ಬಾಕಿ ಸಂಬಳ ನೀಡದಿರುವುದು ಮತ್ತು ನಮ್ಮ ಬದಲಿಗೆ ಹಣ ಪಡೆದು ನೇಮಕ ಮಾಡಿಕೊಂಡಿರುವ ಏಜೆನ್ಸಿ ಮಾಲೀಕರ ವಿರುದ್ಧ ನಗರದ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು.
– ಪದ್ಮ, ಕೆಲಸ ಕಳೆದುಕೊಂಡ ನೌಕರರು.


ಕೋವಿಡ್ ಮುಗಿದ ನಂತರ ಹೊರ ಗುತ್ತಿಗೆಯಡಿ ನೇಮಿಸಿಕೊಂಡಿದ್ದ ಹಲವು ಡಿ.ದರ್ಜೆ ನೌಕರರನ್ನು ರಾಜ್ಯ ಸರ್ಕಾರದ ನಿರ್ದೇಶನದಂತೆ ಏಜೆನ್ಸಿಯವರು ಕೆಲಸದಿಂದ ತೆಗೆದು ಹಾಕಿದ್ದಾರೆ. ಅವರಲ್ಲಿ ಈ 10 ಮಂದಿಯೂ ಸೇರಿದ್ದಾರೆ. ಇವರು ಹಳೆಯ ನೌಕರರು ಎಂಬುದು ಗಮನಕ್ಕೆ ಬರಲಿಲ್ಲ. ಈಗ ಸಿಮ್ಸ್ ಆಸ್ಪತ್ರೆಗೆ ಇನ್ನು ಹಲವು ಡಿ.ದರ್ಜೆ ನೌಕರರ ನೇಮಕಕ್ಕೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕಿದರೆ ಇವರನ್ನು ಪರಿಗಣಿಸಲಾಗುವುದು.
– ಡಾ.ಸಂಜೀವ್. ಸಿಮ್ಸ್, ನಿರ್ದೇಶಕ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!