Mysore
19
overcast clouds
Light
Dark

ಬಾಹ್ಯಾಕಾಶದಲ್ಲಿ ತಳಮಳ-ಸುನೀತಾ ವಿಲಿಯಮ್ಸ್ ಜೀವಕ್ಕೆ ಇಲ್ಲ ಆತಂಕ?

ಗಾಜಾ, ಉಕ್ರೇನ್, ಲಿಬಿಯಾ ಸೇರಿದಂತೆ ಜಗತ್ತಿನ ನಾನಾ ಭಾಗಗಳಲ್ಲಿ ಗನಡೆಯುತ್ತಿರುವ ಸಂಘರ್ಷ ಮತ್ತು ಹವಾಮಾನ ವೈಪರೀತ್ಯ ದಿಂದಾದ ಮಾನವ ದುರಂತದ ಮಧ್ಯೆ ಬಾಹ್ಯಾಕಾಶದಲ್ಲಿನ ಒಂದು ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ವಿಜ್ಞಾನಿಗಳಿಗೆ ಬಾಹ್ಯಾಕಾಶ ಹೊಸದಲ್ಲ. ಬಾಹ್ಯಾಕಾಶ ಪ್ರವಾಸದ ಪ್ರಯತ್ನಗಳು ನಡೆಯುತ್ತಲೇ ಇವೆ. ಈ ಕ್ಷೇತ್ರ ಖಾಸಗಿಯವರಿಗೆ ಬಾಗಿಲು ತೆರೆದಿದೆ. ಸ್ಪರ್ಧೆ ಆರಂಭವಾಗಿದೆ.

ಬಾಹ್ಯಾಕಾಶವನ್ನು ತಿಳಿಯಲು ಸತತವಾಗಿ ಪ್ರಯೋಗಗಳು ನಡೆಯುತ್ತಲೇ ಇವೆ. ಆದರೂ ತಿಳಿಯದಿದ್ದುದೇ ಹೆಚ್ಚು. ಈ ದಿಕ್ಕಿನಲ್ಲಿ ವಿಜ್ಞಾನಿಗಳ ಪ್ರಯೋಗಗಳು ಹಲವು ಬಾರಿ ಸಮಸ್ಯೆಯನ್ನು ಸೃಷ್ಟಿಸಿವೆ. ಸವಾಲುಗಳು ಎದುರಾಗಿವೆ. ಅಂಥ ಒಂದು ಸಮಸ್ಯೆ, ಸವಾಲು ಇದೀಗ ಸೃಷ್ಟಿಯಾಗಿದೆ.

ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ (ಐಎಸ್‌ಎಸ್) ಬೋಯಿಂಗ್ ಕಂಪೆನಿ ನಿರ್ಮಿಸಿದ ಸ್ಟಾರ್‌ಲೈನರ್ ನೌಕೆಯ ಮೂಲಕ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಅವರನ್ನು ಕಳೆದ ಜೂನ್ 5ರಂದು ಕಳುಹಿಸಲಾಗಿತ್ತು. ಅವರು ಪ್ರಯೋಗಗಳನ್ನು ಮಾಡಿ ಜೂನ್ 14ರಂದು ವಾಪಸ್ ಬರಬೇಕಿತ್ತು. ಆದರೆ ನೌಕೆಯಲ್ಲಿ ಕೆಲವು ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಹಿಂತಿರುಗುವ ದಿನವನ್ನು ಜೂನ್ 26ಕ್ಕೆ ಮುಂದಕ್ಕೆ ಹಾಕಲಾಗಿತ್ತು. ಆದರೆ ತಾಂತ್ರಿಕ ದೋಷಗಳನ್ನು ಸರಿಮಾಡಲು ಸಾಧ್ಯವಾಗದ ಕಾರಣ ಮತ್ತೆ ಅವರ ಮರು ಪ್ರಯಾಣವನ್ನು ಮುಂದೂಡಲಾಯಿತು. ಇದೀಗ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅವರು ವಾಪಸ್ ಬರುವರೆಂದು ಅಮೆರಿಕದ ನಾಸಾ (ನ್ಯಾಷನಲ್ ವಿರೊನಾಟಿಕ್ಸ್ ಅಂಡ್ ಸ್ಪೇಸ್ ಆರ್ಗನೈಜೇಷನ್) ಪ್ರಕಟಿಸಿದೆ.

ಸಹಜವಾಗಿಯೇ ಈ ಮುಂದೂಡಿಕೆ ಆತಂಕವನ್ನು ಸೃಷ್ಟಿಸಿದೆ. ಸ್ಟಾ‌ರ್ ಲೈನರ್ ನಲ್ಲಿ ವೇಗವರ್ಧಕ ಹೀಲಿಯಂ ಅನಿಲ ಸೋರಿಕೆ ಮತ್ತು ನೌಕೆಯನ್ನು ಭೂಮಿಗೆ ಇಳಿಸುವಲ್ಲಿ ಸಮತೋಲನ ಕಾಪಾಡುವ 28 ಎಂಜಿನ್‌ಗಳ ಪೈಕಿ (ಥರ್ಸ್ಟ) ಐದು ಎಂಜಿನ್‌ಗಳಲ್ಲಿ ದೋಷ ಕಂಡುಬಂದಿದೆ. ದೋಷಗಳಿಂದ ಕೂಡಿದ ನೌಕೆಯಲ್ಲಿಯೇ ಗಗನಯಾನಿಗಳಿಗೆ ಅಪಾಯ ಸಂಭವಿಸಬಹುದೊ ಎಂಬ ಆತಂಕ ನಾಸಾಕ್ಕೆ ಇದೆ. ಗುರುತ್ವಾಕರ್ಷಣೆ ಮತ್ತು ವಿಕಿರಣ ವಲಯದಲ್ಲಿ ಸಿಕ್ಕಿಕೊಂಡರೆ ಅವರು ದ್ರವವಾಗಿ ಆವಿಯಾಗಿ ಸಾಯಬಹುದು ಎಂದು ಹೇಳಲಾಗಿದೆ. ಅಥವಾ ನೌಕೆ ಸ್ಪೋಟಗೊಳ್ಳಬಹುದು. ಈಗ ಕಂಡುಬಂದಿರುವ ಲೋಪಗಳನ್ನು ಸರಿಪಡಿಸುವ ಪ್ರಯತ್ನ ಇದುವರೆಗೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ನಾಸಾ ತೊಂದರೆಗೆ ಸಿಕ್ಕಿಹಾಕಿಕೊಳ್ಳಲು ಸಿದ್ಧವಿಲ್ಲ. ಆದ್ದರಿಂದ ಈ ಗಗನಯಾತ್ರಿಗಳನ್ನು ಖ್ಯಾತ ಉದ್ಯಮಿ ಎಲನ್ ಮಾಸ್ಕ್ ಒಡೆತನದ ಕಂಪೆನಿಯ ಸ್ಪೇಸೆಕ್ಸ್ ನೌಕೆಯಲ್ಲಿ ವಾಪಸ್ ಕರೆತರಲು ನಾಸಾ ನಿರ್ಧರಿಸಿದೆ. ಆದರೆ ಸ್ಪೇಸೆಕ್ಸ್ ಇನ್ನೂ ಅಲ್ಲಿಗೆ ಹೋಗಬೇಕಿದೆ. ಈಗಿನ ಕಾರ್ಯಕ್ರಮದ ಪ್ರಕಾರ ಸ್ಪೇಸೆಕ್ಸ್ ಮುಂದಿನ ತಿಂಗಳು ಉಡಾವಣೆಯಾಗಲಿದೆ. ನಾಲ್ಕು ಮಂದಿ ಗಗನಯಾತ್ರಿ ಗಳು ಅದರಲ್ಲಿ ಇರುತ್ತಾರೆ. ಅವರು ಫೆಬ್ರವರಿವರೆಗೆ ಪ್ರಯೋಗಗಳನ್ನು ನಡೆಸಿ ನಂತರ ಹಿಂತಿರುಗಲಿದ್ದಾರೆ. ಅವರ ಜೊತೆ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಅವರನ್ನು ವಾಪಸ್ ಕರೆತರಲಾಗುವುದು ಎಂದು ಪ್ರಕಟಿಸಲಾಗಿದೆ. ಈ ವಿಚಾರದಲ್ಲಿ ಎಲನ್ ಮಾಸ್ಟ್ ಕಂಪೆನಿ ಮತ್ತು ಬೋಯಿಂಗ್ ಕಂಪೆನಿ ಜೊತೆ ಮಾತುಕತೆ ನಡೆಸಲಾಗಿದೆ ಎಂದು ನಾಸಾದ ಆಡಳಿತಾಧಿಕಾರಿ ನೆಲ್ಲನ್ ಪ್ರಕಟಿಸಿದ್ದಾರೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಸದ್ಯ ಐದು ಮಂದಿ ಗಗನಯಾತ್ರಿಗಳು ಪ್ರಯೋಗದಲ್ಲಿ ನಿರತರಾಗಿದ್ದಾರೆ. ಅವರ

ಜೊತೆಗೆ ಸುನೀತಾ ಮತ್ತು ಬುಚ್ ಅವರು ಕೂಡ ಕೆಲಸ ಮಾಡುತ್ತಿದ್ದಾರೆ. ಒಂದು ವಾರ ಇರಲು ಹೋದವರು ಎಂಟು ತಿಂಗಳ ಕಾಲ ಇರಬೇಕಾಗಿ ಬಂದರೆ ಅವರ ಆರೋಗ್ಯದ ಮೇಲೆ ಆಗಬಹುದಾದ ಕೆಟ್ಟ ಪರಿಣಾ ಪರಿಣಾಮ ಏನು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂತಹದ್ದೇನೂ ಆಗುವುದಿಲ್ಲ. ಅವರಿಗೆ ಬೇಕಾದ ಆಹಾರ ಸಾಮಗ್ರಿ ಮತ್ತಿತರ ವಸ್ತುಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ರಷ್ಯಾದ ಸೂಯಜ್ ಗಗನನೌಕೆಯ ಮೂಲಕ ಅಲ್ಲಿರುವ ಇತರೆ ಗಗನ ಯಾನಿಗಳಿಗಾಗಿ ಈಗಾಗಲೇ ಅಗತ್ಯ ಸಾಮಗ್ರಿ ಕಳುಹಿಸಲಾಗಿದೆ. ಅದನ್ನು ಬಳಸಬಹುದಾಗಿದೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ಅವರಿಗೆ ಯಾವುದೇ ತೊಂದರೆಯಾಗದು ಎಂದು ನಾಸಾ ಅಧಿಕಾರಿಗಳು ಹೇಳುತ್ತಿ ದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸುನೀತಾ ಮತ್ತು ಬುಚ್ ಅನುಭವಿ ಗಗನಯಾತ್ರಿಗಳು, ಸುನೀತಾ ವಿಲಿಯಮ್ಸ್ ಈ ಹಿಂದೆ ಎರಡು ಬಾರಿ (2006, 2007) ಗಗನಯಾನ ಮಾಡಿದ್ದಾರೆ. 2007ರಲ್ಲಿ ಗಗನ ನೌಕೆಯಲ್ಲಿ 195 ದಿನಗಳಿದ್ದು ಅನುಭವ ಪಡೆದಿದ್ದಾರೆ ಎನ್ನುವ ಸಮಜಾಯಿಷಿ ಬಂದಿದೆ. ಸುನೀತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಿರುವವರು ಭಾರತೀಯರು. ಅವರು ಭಾರತ

ಮೂಲದವರಾಗಿರುವುದೇ ಈ ಕಾಳಜಿಗೆ ಕಾರಣ ಇರಬಹುದು. ಸುನೀತಾ ವಿಲಿಯಮ್ಸ್ ತಂದೆ ದೀಪಕ್ ಪಾಂಡ್ಯಾ ಮೂಲತಃ ಗುಜರಾತಿನವರು. ನರರೋಗತಜ್ಞರಾದ ಅವರು ಅಮೆರಿಕಕ್ಕೆ ವಲಸೆ ಹೋಗಿ ನೆಲೆಸಿದ್ದಾರೆ. ಮದುವೆಯಾಗಿರುವುದು ಸ್ಥಾವಕಿಯಾ ಮೂಲದ ಬೋನಿ ಅವರನ್ನು ಅವರ ಮಗಳೇ ಸುನೀತಾ. ಅವರ ಬಗ್ಗೆ ಭಾರತೀಯರು ಕಾಳಜಿ ತೋರಿಸಲು ಮತ್ತೂ ಒಂದು ಕಾರಣವಿದೆ. ಪಂಜಾಬ್ ಮೂಲದ ಗಗನ ಯಾತ್ರಿ ಕಲ್ಪನಾ ಚಾವ್ಹಾ ಅವರ ದುರಂತ ಸಾವು ಭಾರತೀಯರ ನೆನಪಿನಿಂದ ಮರೆಯಾಗಿಲ್ಲ. ಬಾಹ್ಯಾಕಾಶ ಯಾನ ಮಾಡಿದ ಭಾರತ ಮೂಲದ ಮೊದಲ ಮಹಿಳೆ ಕಲ್ಪನಾ (1997). ಬಾಹ್ಯಾಕಾಶದಿಂದ ಕೊಲಂಬಿಯಾ ನೌಕೆ ಭೂಮಿಗೆ ಇಳಿಯುವಾಗ ಸ್ಫೋಟ ಸಂಭವಿಸಿತು. ಘಟನೆಯಲ್ಲಿ ಏಳುಮಂದಿ ಇತರ ಗಗನ ಯಾತ್ರಿಗಳ ಜೊತೆ ಕಲ್ಪನಾ ಚಾವ್ಹಾ ಕೂಡ ಸತ್ತರು. ಈ ದುರ್ಘಟನೆ ಭಾರತೀಯರನ್ನು ಕಾಡುತ್ತಿರುವುದರಿಂದ ಸುನೀತಾ ಅವರ ಬಗ್ಗೆ ಕಾಳಜಿ ಹೆಚ್ಚು ಕಂಡುಬರುತ್ತಿದೆ. ಅಮೆರಿಕ, ರಷ್ಯಾ, ಯೂರೋಪ್, ಕೆನಡಾ, ಜಪಾನ್ ದೇಶಗಳು ಸೇರಿ.

1998ರಲ್ಲಿ ಸ್ಥಾಪಿಸಲಾದ ಬಾಹ್ಯಾಕಾಶ ನಿಲ್ದಾಣ ಒಂದು ಫುಟ್‌ಬಾಲ್ ಕ್ರೀಡಾಂಗಣದಷ್ಟು ವಿಶಾಲವಾಗಿದೆ. ಅಲ್ಲಿ ಗಗನಯಾನಿ ವಿಜ್ಞಾನಿಗಳು ಪ್ರಯೋಗ ನಡೆಸಲು, ವಿಶ್ರಾಂತಿ ಪಡೆಯಲು ಮತ್ತು ಅಡುಗೆ ಮಾಡಿಕೊಳ್ಳಲು

ಸಾಕಷ್ಟು ಸ್ಥಳವಿದೆ. ಈ ನಿಲ್ದಾಣಕ್ಕೆ ಗಗನಯಾನಿಗಳು ಬಂದು ಪ್ರಯೋಗಗಳನ್ನು ಮಾಡಿ ವಾಪಸ್ ಹೋಗುತ್ತಾರೆ. ಸಾಮಾನ್ಯವಾಗಿ ಗರಿಷ್ಠ ಆರು ತಿಂಗಳ ಕಾಲ ಅಲ್ಲಿ ಇರುತ್ತಾರೆ. ವರ್ಷಗಟ್ಟಲೆ ಇದ್ದವರೂ ಇದ್ದಾರೆ. ಮುಖ್ಯವಾಗಿ ಗುರುತ್ತಾ ಕರ್ಷಣೆ ಇಲ್ಲದ ಮತ್ತು ಹೆಚ್ಚು ವಿಕಿರಣ ಇರುವ ಜಾಗದಲ್ಲಿನ ವೈಶಿಷ್ಟ್ಯಗಳನ್ನು ಮತ್ತು ಅಪಾಯಗಳನ್ನು ಪತ್ತೆ ಮಾಡುವುದೇ ವಿಜ್ಞಾನಿಗಳ ಉದ್ದೇಶ. ಬಾಹ್ಯಾಕಾಶ ಯಾನ ಈಗ ಶ್ರೀಮಂತರ ಆಕರ್ಷಣೆ. ಅದಕ್ಕೆ ಕೋಟಿಗಟ್ಟಲೆ ಹಣ ಬೇಕು, ಧೈರ್ಯಬೇಕು. ಇದಕ್ಕೆ ಸಿದ್ಧವಿರುವ ಹಲವಾರು ಶ್ರೀಮಂತರು ಬಾಹ್ಯಾಕಾಶ ಯಾನಕ್ಕೆ ಮುಂದೆ ಬಂದಿದ್ದಾರೆ. ಬೋಯಿಂಗ್ ಮತ್ತು ಎಲನ್ ಮಾಸ್ ಕಂಪೆನಿ ಪ್ರವಾಸ ಸಂಘಟಿಸಲು ಸಿದ್ಧತೆ ನಡೆಸಿವೆ. ಇನ್ನೂ ಐದು ಮಂದಿ ಶ್ರೀಮಂತರು ಆಸಕ್ತಿ ತೋರಿಸಿದ್ದಾರೆ. ಒಂದು ಟ್ರಿಪ್‌ಗೆ ಕನಿಷ್ಠ 25 ಮಿಲಿಯನ್ ಡಾಲರ್ ಆಗುತ್ತದೆ ಎನ್ನುವುದು ಅಂದಾಜು. ಬಾಹ್ಯಾಕಾಶ ನಡಿಗೆಗೆ ಬೇರೆ ಚಾರ್ಜ್. ಗಗನಯಾನಿಗಳನ್ನು ಐಎಸ್‌ಎಸ್ ನಿಲ್ದಾಣಕ್ಕೆ ಕೊಂಡೊಯ್ಯುವ ನೌಕೆಯನ್ನು ತಯಾರಿಸುವ ಕಂಟ್ರಾಕ್ಷನ್ನು ನಾಸಾ ಹಲವು ಕಂಪೆನಿಗಳಿಗೆ ನೀಡಿದೆ. ಈ ನೌಕೆಗಳನ್ನು ಖಾಸಗಿಯವರು ಪ್ರವಾಸಕ್ಕೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಂಥ ನೌಕೆಗಳನ್ನು ತಯಾರಿಸುವ ಮತ್ತು ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ನೌಕೆಗಳನ್ನು ನಿರ್ಮಿಸುವ ಕಂಟ್ರಾಕ್ಟನ್ನು ಬೋಯಿಂಗ್ ಮತ್ತು ಎಲನ್ ಮಾಸ್ಕ್ ಒಡೆತನದ ಕಂಪೆನಿಗಳು ಈಗಾಗಲೇ ಪಡೆದಿವೆ. ಎಲನ್ ಮಾಸ್ಕ್ ನೇತೃತ್ವದ ಕಂಪೆನಿ ಅಂಥ ನೌಕೆಯನ್ನು ತಯಾರಿಸಿ ಈಗಾಗಲೇ ಎಂಟು ಬಾರಿ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾನಿಗಳನ್ನು ಕರೆದೊಯ್ದಿದೆ. ಮುಂಬರುವ ಯಾನದಲ್ಲಿ ಬಾಹ್ಯಾಕಾಶದಲ್ಲಿ ನಡಿಗೆಯ ಮೊದಲ ಯತ್ನವನ್ನು ನಡೆಸಲಿದೆ. ಬೋಯಿಂಗ್ ಕಂಪೆನಿಯ ಯೋಜನೆ ಮೊದಲಿನಿಂದಲೂ ಸಮಸ್ಯೆಗೆ ಸಿಕ್ಕಿದೆ. ವಿಳಂಬವಾಗಿ ಕೊನೆಗೂ ಎರಡು ವರ್ಷಗಳ ಹಿಂದೆ ಸ್ಟಾರ್‌ಲೈನರ್ ನೌಕೆ ಮಾನವ ರಹಿತವಾಗಿ ಯಾವುದೇ ತೊಂದರೆಯಿಲ್ಲದೆ ಹೋಗಿ ಬಂತು. ಆದರೆ ಈ ಬಾರಿ ಇಬ್ಬರು ಗಗನಯಾನಿಗಳನ್ನು ಕೊಂಡೊಯ್ದಿದ್ದ ಸ್ಟಾರ್‌ಲೈನರ್ ತಾಂತ್ರಿಕ ದೋಷದಿಂದ ಸಮಸ್ಯೆಗೆ ಸಿಕ್ಕಿಕೊಂಡಿದೆ. ಈಗಾಗಲೇ ಬೋಯಿಂಗ್ ಕಂಪೆನಿ ಈ ಯೋಜನೆಯಿಂದ 1.6 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಬಾಹ್ಯಾಕಾಶ ನಿಲ್ದಾಣದಿಂದಗಗನಯಾನಿಗಳಿಲ್ಲದೆವಾಪಸ್ ಬಂದರೆ ಇಡೀಯೋಜನೆಯನ್ನೇ ಕೈಬಿಡಬೇಕಾದ ಪರಿಸ್ಥಿತಿ ಬರಬಹುದು. ಇಲ್ಲ, ಯೋಜನೆ ಕೈಬಿಡುವುದಿಲ್ಲ ಎಂದು ಬೋಯಿಂಗ್‌ನ ಹೊಸ ಆಡಳಿತಾಧಿಕಾರಿ ಇದೀಗ ಘೋಷಿಸಿದ್ದಾರೆ. ಯೋಜನೆ ಯಶಸ್ವಿಯಾಗಲು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ನಾಸಾ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ಆದರೆ ಈ ಸ್ಪರ್ಧಾತ್ಮಕ ಕಾಲದಲ್ಲಿ ಮುಂದೆ ಏನಾಗುತ್ತದೆ ಎನ್ನುವುದನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ.