Mysore
22
broken clouds

Social Media

ಗುರುವಾರ, 13 ಮಾರ್ಚ್ 2025
Light
Dark

ಸ್ವಾಯತ್ತತೆಯ ಭರವಸೆಯೂ ಕೇಂದ್ರೀಕರಣದ ಅಪಾಯವೂ

ನಾ.ದಿವಾಕರ

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರಿನಲ್ಲೇ ಉಳಿಸಲು ಹೋರಾಟಕ್ಕಾದರೂ ಸಜ್ಜಾಗಬೇಕಿದೆ.

ಮೈ ಸೂರಿನಲ್ಲಿರುವ, ಪ್ರತಿಷ್ಠಿತ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ (ಸಿಐಐಎಲ್) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ (ಶಾಸ್ತ್ರೀಯ ಕನ್ನಡ ಕೇಂದ್ರ) ತನ್ನ ಬೌದ್ಧಿಕ-ಶೈಕ್ಷಣಿಕ ಪಯಣದ ೧೫ ವರ್ಷಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ಸಂಸ್ಥೆಗೆ ಸ್ವಾಯತ್ತತೆ ನೀಡುವ ಭರವಸೆ ಕೇಂದ್ರ ಸಚಿವರಿಂದ ದೊರೆತಿರುವುದು ಸ್ವಾಗತಾರ್ಹ. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಮೂಲ ಸಂಸ್ಥೆ ಸಿಐಐಎಲ್ ನಿಂದ ಪ್ರತ್ಯೇಕಿಸುವುದಷ್ಟೇ ಅಲ್ಲದೆ, ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕು ಎನ್ನುವುದು ಮೈಸೂರಿನ ಸಾಹಿತಿ, ಕಲಾವಿದರ, ಕನ್ನಡ ಮನಸ್ಸುಗಳ ಆಶಯವೂ, ಕನಸೂ ಆಗಿತ್ತು.

ಕೇಂದ್ರ ಸರ್ಕಾರದ ಈ ತೀರ್ಮಾನದ ಹಿಂದೆ ಹೋರಾಟಗಾರರ ಪರಿಶ್ರಮವಷ್ಟೇ ಅಲ್ಲದೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರ ವೈಯಕ್ತಿಕ ಆಸಕ್ತಿ, ಕಾಳಜಿ ಮತ್ತು ಸ್ವಪ್ರಯತ್ನಗಳೂ ಇರುವುದನ್ನು ಅಭಿಮಾನಪೂರ್ವಕವಾಗಿ ನೆನೆಯಬೇಕಿದೆ. ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರ ಸತತ ಪ್ರಯತ್ನಗಳ ಫಲವಾಗಿ, ಮೈಸೂರಿನ ಹೋರಾಟಗಾರರ ಆಶಯಗಳಿಗೆ ಪೂರಕವಾಗಿ ಒಂದು ಅಂತಿಮ ಘಟ್ಟ ತಲುಪಿದೆ. ಆದರೆ ಸ್ವಾಯತ್ತತೆಯನ್ನು ನೀಡುವ ಭರವಸೆ ನೀಡುತ್ತಲೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಂಸ್ಥೆಯನ್ನು ಬೆಂಗಳೂರಿಗೆ ವರ್ಗಾಯಿಸುವ ಇಂಗಿತ ವ್ಯಕ್ತಪಡಿಸಿರುವುದು ಆತಂಕಕಾರಿಯಾಗಿ ಕಾಣುತ್ತದೆ. ಹಾಗೆಯೇ ಸ್ವಾಯತ್ತತೆ ಪಡೆದ ನಂತರ ಸಂಸ್ಥೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ ಒಪ್ಪಿಸಲು ಕೇಂದ್ರ ಸಚಿವರು ನಿರಾಕರಿಸಿರುವುದೂ ಕೂಡ ಒಪ್ಪುವಂತಹುದಲ್ಲ.

ಹೋರಾಟಗಳ ಫಲಶ್ರುತಿ: ಪ್ರಾಚೀನ ಕನ್ನಡ ಶಾಸ್ತ್ರೀಯ ಸಾಹಿತ್ಯದ ಮೂಲ ಬೇರುಗಳನ್ನು ಶೋಧಿಸಿ, ಮರುಶೋಧಿಸಿ, ಸಂಶೋಧನೆ ಮತ್ತು ಅಧ್ಯಯನ ಗಳ ಮೂಲಕ, ಹೊಸ ಪೀಳಿಗೆಯಲ್ಲಿ ಸಾಹಿತ್ಯಾಧ್ಯಯನ ಮತ್ತು ಸಾಹಿತ್ಯ ಸಂಶೋಧನೆಯನ್ನು ಉತ್ತೇಜಿಸುವ ಮಹತ್ತರ ಆಶಯದೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸಮಕಾಲೀನ ಸಾಹಿತ್ಯದಲ್ಲೇ ಆಸಕ್ತಿ ತೋರದ ಒಂದು ಬೃಹತ್ ಯುವ ಪೀಳಿಗೆಯ ನಡುವೆ, ಶಾಸ್ತ್ರೀಯ ಸಾಹಿತ್ಯವನ್ನು ಕೊಂಡೊಯ್ಯಲು ಹೊಸ ಮಾದರಿಗಳನ್ನು, ವಿಧಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯೂ ಇದೆ. ಈ ಪ್ರಯತ್ನಗಳಿಗೆ ಒಂದು ಸಾಂಸ್ಥಿಕ ಸ್ವರೂಪ ನೀಡುವುದು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ತಮಿಳು ಶಾಸ್ತ್ರೀಯ ಕೇಂದ್ರಕ್ಕೆ ಸ್ವಾಯತ್ತತೆ ಪಡೆಯುವಲ್ಲಿ ಅಲ್ಲಿನ ರಾಜಕೀಯ ಪಕ್ಷಗಳು ಒಗ್ಗೂಡಿ, ಕೇಂದ್ರದ ಮೇಲೆ ಒತ್ತಡ ಹೇರಿದ್ದವೂ. ಆ ರೀತಿಯ ಸಾಹಿತ್ಯಕ ಸ್ಪಂದನೆ ಕರ್ನಾಟಕದ ರಾಜಕಾರಣಿಗಳಿಂದ ಅಥವಾ ಸರ್ಕಾರಗಳಿಂದ ಈವರೆಗೂ ಕಂಡುಬಂದಿಲ್ಲ. ಇದು ಯೋಚಿಸಬೇಕಾದ ವಿಚಾರ.

ಆದಾಗ್ಯೂ ಕರ್ನಾಟಕದ ಜನತೆಯ, ವಿಶೇಷವಾಗಿ ಮೈಸೂರಿನ ಸಾಹಿತ್ಯ ಬಳಗದ ಒತ್ತಾಸೆ ಮತ್ತು ಹಲವು ವರ್ಷಗಳ ಪರಿಶ್ರಮ ಹಾಗೂ ನಿರಂತರ ಹೋರಾಟದ ಫಲವಾಗಿ ೨೦೦೮ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕಿತು. ೧೯೯೦ರಿಂದಲೇ ಮೈಸೂರಿನಲ್ಲಿ ಈ ಆಗ್ರಹ ಕೇಳಿಬಂದಿತ್ತು. ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದ ಹಿನ್ನೆಲೆಯಲ್ಲಿ ಕನ್ನಡ ಭಾಷೆಗೂ ಈ ಸಮ್ಮಾನ ದೊರೆಯಬೇಕು ಎಂದು ಒತ್ತಾಯಿಸುವ ಮೂಲಕ ಕನ್ನಡದ ಹಿರಿಯ ಸಾಹಿತಿ-ಕಲಾವಿದರು, ಕನ್ನಡ ಪರ ಹೋರಾಟಗಾರರು ಹಾಗೂ ಸಮಾನ ಮನಸ್ಕರು ವರ್ಷಗಟ್ಟಲೆ ನಡೆಸಿದ ಹೋರಾಟದ ಪರಿಣಾಮ ಈ ಬೇಡಿಕೆ ಈಡೇರಿತ್ತು. ೨೦೦೮ರಲ್ಲಿ ಮೈಸೂರಿನಲ್ಲಿರುವ ಸಿಐಐಎಲ್ ಆವರಣದಲ್ಲಿ ಮತ್ತು ಆಡಳಿತಾತ್ಮಕವಾಗಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಸ್ಥಾಪನೆಯಾಗಿದೆ. ತಮಿಳು ಶಾಸ್ತ್ರೀಯ ಕೇಂದ್ರವನ್ನು ವರ್ಗಾಯಿಸಿದ ಒಂದೇ ವರ್ಷದಲ್ಲಿ ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಪಕ್ಷಭೇದವನ್ನು ಮರೆತು, ದೆಹಲಿಗೆ ನಿಯೋಗಗಳನ್ನು ಕಳುಹಿಸುವ ಮೂಲಕ, ಒಕ್ಕೊರಲಿನಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ತಮಿಳು ಶಾಸ್ತ್ರೀಯ ಕೇಂದ್ರಕ್ಕೆ ಸ್ವಾಯತ್ತತೆಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು.

ರಾಜಧಾನಿ ಕೇಂದ್ರಿತ ರಾಜಕಾರಣ: ಇಷ್ಟರ ನಡುವೆ ರಾಜಧಾನಿ ಬೆಂಗಳೂರು ಕೇಂದ್ರಿತ ಆಳ್ವಿಕೆಯ ಒಂದು ಭಾಗವಾಗಿ ೨೦೧೩ರಲ್ಲಿ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ ಈ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವ ಪ್ರಯತ್ನ ಗಳು ನಡೆದಿದ್ದವು. ಆ ಸಂದರ್ಭದಲ್ಲಿ ಇಲ್ಲಿನ ಜನಪ್ರತಿನಿಽಗಳಿಗಿಂತಲೂ, ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಮೈಸೂರಿನಲ್ಲೇ ಉಳಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಿದ್ದು ಮೈಸೂರಿನ ಸಾಹಿತಿ-ಕಲಾವಿದರು ಮತ್ತು ಕನ್ನಡ ಪರ ಹೋರಾಟಗಾರರು ಎನ್ನುವುದನ್ನು ಸ್ಮರಿಸಬೇಕಿದೆ. ಈ ಒತ್ತಡಕ್ಕೆ ಮಣಿದು ಸರ್ಕಾರ ಸಂಸ್ಥೆಯನ್ನು ಮೈಸೂರಿನಲ್ಲೇ ಉಳಿಸಲು ಒಪ್ಪಿತ್ತು. ತದನಂತರ ಕಳೆದ ನಾಲ್ಕೆ ದು ವರ್ಷಗಳಿಂದ ಮೈಸೂರಿನ ಸಾಹಿತ್ಯ ವಲಯದ ಆಸಕ್ತ ಮನಸುಗಳು ಒಂದಾಗಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸ್ವಾಯತ್ತತೆಗಾಗಿ ಹೋರಾಟಗಳಲ್ಲಿ ತೊಡಗಿದ್ದವು. ಸಂಸ್ಥೆಯ ಸ್ವಂತ ಕಟ್ಟಡ ನಿರ್ಮಾಣ ಮಾಡಲು ೪.೨ ಎಕರೆ ಭೂಮಿಯನ್ನು ನೀಡುವುದಾಗಿ ಮೈಸೂರು ವಿಶ್ವವಿದ್ಯಾನಿಲಯವೂ ತಾತ್ವಿಕ ಒಪ್ಪಿಗೆ ನೀಡಿದೆ.

ಕನ್ನಡದ ಶಾಸ್ತ್ರೀಯ ಸಾಹಿತ್ಯದಲ್ಲಿನ ಅಮೂಲ್ಯ ಕೃತಿಗಳನ್ನು ಮುಂದಿನ ಪೀಳಿಗೆಗಾಗಿ ಕಾಪಿಟ್ಟುಕೊಳ್ಳುವ ಉದ್ದೇಶದಿಂದ, ಸಂಶೋಧನೆ, ಅಧ್ಯಯನ ಮತ್ತು ಸಾಹಿತ್ಯಕ ಉತ್ಖನನದ ಪ್ರಕ್ರಿಯೆಯ ಮೂಲಕ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನೂ, ಚಾರಿತ್ರಿಕ ಹೆಜ್ಜೆಗಳನ್ನೂ ಗುರುತಿಸುವ ಒಂದು ಬೌದ್ಧಿಕ ಕೇಂದ್ರವಾಗಿ ಪೂರ್ಣ ಸ್ವಾಯತ್ತತೆಯೊಂದಿಗೆ ಈ ಕೇಂದ್ರ ರೂಪುಗೊಳ್ಳ ಬೇಕಿರುವುದು ವರ್ತಮಾನದ ತುರ್ತು. ಈ ಸಂಸ್ಥೆಯನ್ನು ಒಂದು ಅಧ್ಯಯನ ಪೀಠದಂತೆ ಅಥವಾ ಸಂಶೋಧನಾ ಕೇಂದ್ರದಂತೆ ಪರಿಗಣಿಸುವುದೇ ಅಕ್ಷಮ್ಯ. ಶಾಸ್ತ್ರೀಯ ಸಾಹಿತ್ಯ ಸಂಶೋಧನೆ, ವಿಚಾರಸಂಕಿರಣಗಳು, ಅಧ್ಯಯನ ಶಿಬಿರಗಳು ಮತ್ತು ಕಾರ್ಯಾಗಾರಗಳ ಮೂಲಕ ಶಾಸ್ತ್ರೀಯ ಸಾಹಿತ್ಯದ ವಿಭಿನ್ನ ಮಜಲುಗಳನ್ನು ಮುಕ್ತ ಸಂವಾದದ ಮೂಲಕ ಚರ್ಚೆಗೊಳಪಡಿಸುವ ನಿಟ್ಟಿನಲ್ಲಿ ಒಂದು ಕ್ರಿಯಾಶೀಲ ಸಂಸ್ಥೆಯಾಗಿ ಈ ಕೇಂದ್ರವನ್ನು ಬೆಳೆಸುವುದು ನಮ್ಮ ಆದ್ಯತೆಯಾಗಬೇಕಿದೆ. ಸ್ವಾಯತ್ತತೆ ನೀಡುವ ನಿರ್ಧಾರ ಈ ನಿಟ್ಟಿನಲ್ಲಿ ಒಂದು ಸಕಾರಾತ್ಮಕ ಹೆಜ್ಜೆಯಾಗಲಿದೆ.

ಸ್ವಾಯತ್ತತೆಯ ಆಶಯ ಮತ್ತು ಉದ್ದೇಶ : ಈಗ ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಇತರ ಭಾಷಿಕ ಶಾಸ್ತ್ರೀಯ ಕೇಂದ್ರಗಳಂತೆಯೇ ಸಿಐಐಎಲ್‌ನಿಂದ ಪ್ರತ್ಯೇಕಿಸುವ ಭರವಸೆ ದೊರಕಿರುವುದು ಸ್ವಾಗತಾರ್ಹವೇ ಆದರೂ, ಯಾವ ಕೇಂದ್ರವನ್ನೂ ರಾಜ್ಯ ಸರ್ಕಾರಕ್ಕೆ ಒಪ್ಪಿಸದಿರುವ ಕೇಂದ್ರ ಸಚಿವರ ನಿರ್ಧಾರವನ್ನು ವಿರೋಧಿಸಬೇಕಿದೆ. ಸರ್ಕಾರದ ಅನುದಾನದ ಮೂಲಕವೇ ನಿರ್ವಹಿಸ ಬೇಕಾಗುವ ಒಂದು ಸಾಹಿತ್ಯಕ ಸಂಸ್ಥೆಗೆ ಸ್ವಾಯತ್ತತೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗುವುದು, ಆ ಭಾಷಾ ಸಂಸ್ಥೆಯು ಪ್ರತಿನಿಧಿಸುವ ಪ್ರದೇಶದ ಅಸ್ಮಿತೆ ಮತ್ತು ಅಸ್ತಿತ್ವ. ಸ್ವಾಯತ್ತ ಶೈಕ್ಷಣಿಕ ಹಾಗೂ ಸಂಶೋಧಕ ಸಂಸ್ಥೆಗಳು ಆಯಾ ರಾಜ್ಯದ ನಿರ್ವಹಣೆಗೆ ಒಳಪಡುವುದು ಪ್ರಜಾಸತ್ತಾತ್ಮಕ ಲಕ್ಷಣವಾಗಿ ಕಾಣಬೇಕಿದೆ. ಹಾಗಾದಲ್ಲಿ ಮಾತ್ರ ಅದರ ಸಾಂಸ್ಥಿಕ ಅಗತ್ಯತೆಗಳು ಹಾಗೂ ಬೌದ್ಧಿಕ ಪ್ರಕ್ರಿಯೆಗಳನ್ನು ಕ್ರಿಯಾಶೀಲವಾಗಿ ಮುಂದುವರಿಸಲು ಸಾಧ್ಯವಾಗುತ್ತದೆ. ಕೇಂದ್ರ ಎನ್‌ಡಿಎ ಸರ್ಕಾರ ಶಿಕ್ಷಣವನ್ನೂ ಕೇಂದ್ರೀಕರಣಗೊಳಿಸುವ ಪ್ರಯತ್ನದಲ್ಲಿದೆ. ಇದೇ ಸೂತ್ರದಡಿಯೇ ಶಾಸ್ತ್ರೀಯ ಭಾಷಾ ಕೇಂದ್ರಗಳನ್ನೂ ತನ್ನ ನಿಯಂತ್ರಣದಲ್ಲೇ ಉಳಿಸಿಕೊಳ್ಳಲು ಯೋಚಿಸುತ್ತಿದೆ.

ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಹೀಗೆ ಕೇಂದ್ರಾಡಳಿತದ ಸುಪರ್ದಿಗೆ ಒಳಪಡಿಸುವುದು ವಿಕೇಂದ್ರೀಕರಣ ನೀತಿಗೆ ವಿರುದ್ಧವಾಗಿದೆ. ಈಗ ಮೈಸೂರಿನಲ್ಲಿರುವ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವ ಆಲೋಚನೆಯೂ ಇದರ ಮತ್ತೊಂದು ಸ್ವರೂಪವಾಗಿ ಕಾಣುತ್ತದೆ. ಈಗಾಗಲೇ ರಾಜಧಾನಿ ಬೆಂಗಳೂರು ಕನ್ನಡದ ಎಲ್ಲ ಸಾಂಸ್ಕ ತಿಕ ಸಂಸ್ಥೆಗಳನ್ನೂ, ಅಕಾಡೆಮಿ, ಪ್ರಾಧಿಕಾರಗಳನ್ನೂ ತನ್ನೊಳಗೆ ಸೇರಿಸಿಕೊಂಡಿದ್ದು, ಬೌದ್ಧಿಕವಾಗಿ ಪ್ರಾದೇಶಿಕ ಅಸಮತೋಲನ ಮತ್ತು ತಾರತಮ್ಯಗಳಿಗೆ ಕಾರಣವಾಗಿದೆ. ಶಾಸ್ತ್ರೀಯ ಕನ್ನಡದ ಅಂತಾರಾಷ್ಟ್ರೀಯ ಬೆಳವಣಿಗೆಗೆ ಸಾಂಸ್ಥಿಕ ನೆಲೆ ಮುಖ್ಯವಾಗುವುದಿಲ್ಲ. ಅದರ ಕ್ರಿಯಾಶೀಲ ಕಾರ್ಯವ್ಯಾಪ್ತಿ ಮತ್ತು ಸೃಜನಶೀಲ ಕಾರ್ಯವೈಖರಿ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಭೌತಿಕವಾಗಿ ರಾಜ್ಯ ರಾಜಧಾನಿ, ಬೌದ್ಧಿಕವಾಗಿ ದೇಶದ ರಾಜಧಾನಿಯನ್ನು ಅವಲಂಬಿಸುವುದು, ಸ್ವಾಯತ್ತತೆಯನ್ನು ಅರ್ಥಹೀನಗೊಳಿಸುತ್ತದೆ.

ಈ ದೃಷ್ಟಿಯಿಂದ ಕೇಂದ್ರ ಸರ್ಕಾರವು ಕನ್ನಡ ಶಾಸ್ತ್ರೀಯ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವ ಮತ್ತು ಅದರ ನಿರ್ವಹಣೆಯನ್ನು ರಾಜ್ಯಕ್ಕೆ ವಹಿಸದಿರುವ ನಿರ್ಧಾರದಿಂದ ಹಿಂದೆ ಸರಿಯಬೇಕಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳ ನೆಲೆಯಲ್ಲಿ ಅಪ್ಯಾಯಮಾನವೆನಿಸುತ್ತದೆ. ಸಾಂಸ್ಥಿಕ ಸ್ವಾಯತ್ತತೆ ಮೌಲಿಕವಾಗಿ ಪ್ರಜಾಸತ್ತಾತ್ಮಕ ಲಕ್ಷಣ. ಆದರೆ ಸಾಂಸ್ಥಿಕ ನಿರ್ವಹಣೆಯ ಕೇಂದ್ರೀಕರಣ ಈ ಮೌಲ್ಯಗಳಿಗೆ ತದ್ವಿರುದ್ಧವಾದುದು. ಕರ್ನಾಟಕ ಸರ್ಕಾರ ಸ್ವಾಯತ್ತತೆ ಪಡೆಯುವ ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಮೈಸೂರಿನಲ್ಲೇ ಉಳಿಸಿ, ಅದರ ನಿರ್ವಹಣೆಯನ್ನು ತಮಿಳುನಾಡು ಮಾದರಿಯಲ್ಲಿ ತಾನೇ ವಹಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಇದು ಕಾಂಗ್ರೆಸ್ ಸರ್ಕಾರದ ನೈತಿಕತೆ ಮತ್ತು ಭಾಷಾ ಬದ್ಧತೆಯ ಪ್ರಶ್ನೆ ಎನ್ನುವುದನ್ನು ಸಿದ್ಧರಾಮಯ್ಯ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಽಗಳು ಮನಗಾಣಬೇಕಿದೆ.

” ಕನ್ನಡದ ಶಾಸ್ತ್ರೀಯ ಸಾಹಿತ್ಯದಲ್ಲಿನ ಅಮೂಲ್ಯ ಕೃತಿಗಳನ್ನು ಮುಂದಿನ ಪೀಳಿಗೆಗಾಗಿ ಕಾಪಿಟ್ಟುಕೊಳ್ಳುವ ಉದ್ದೇಶದಿಂದ, ಸಂಶೋಧನೆ, ಅಧ್ಯಯನ ಮತ್ತು ಸಾಹಿತ್ಯಕ ಉತ್ಖನನದ ಪ್ರಕ್ರಿಯೆಯ ಮೂಲಕ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನೂ, ಚಾರಿತ್ರಿಕ ಹೆಜ್ಜೆಗಳನ್ನೂ ಗುರುತಿಸುವ ಒಂದು ಬೌದ್ಧಿಕ ಕೇಂದ್ರವಾಗಿ ಪೂರ್ಣ ಸ್ವಾಯತ್ತತೆಯೊಂದಿಗೆ ಶಾಸೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ರೂಪುಗೊಳ್ಳುವುದು ವರ್ತಮಾನದ ತುರ್ತು. ಶಾಸೀಯ ಕನ್ನಡ ಅತ್ಯುನ್ನತ ಅಧ್ಯಯನ ಸಂಸ್ಥೆಯನ್ನು ಒಂದು ಅಧ್ಯಯನ ಪೀಠದಂತೆ ಅಥವಾ ಸಂಶೋಧನಾ ಕೇಂದ್ರದಂತೆ ಪರಿಗಣಿಸುವುದೇ ಅಕ್ಷಮ್ಯ. ಶಾಸ್ತ್ರೀಯ ಸಾಹಿತ್ಯ ಸಂಶೋಧನೆಯ ಮೂಲಕ, ವಿಚಾರ ಸಂಕಿರಣಗಳು, ಅಧ್ಯಯನ ಶಿಬಿರಗಳು ಮತ್ತು ಕಾರ್ಯಾಗಾರಗಳ ಮೂಲಕ ಶಾಸ್ತ್ರೀಯ ಸಾಹಿತ್ಯದ ವಿಭಿನ್ನ ಮಜಲುಗಳನ್ನು ಮುಕ್ತ ಸಂವಾದದ ಮೂಲಕ ಚರ್ಚೆಗೊಳಪಡಿಸುವ ನಿಟ್ಟಿನಲ್ಲಿ ಒಂದು ಕ್ರಿಯಾಶೀಲ ಸಂಸ್ಥೆಯಾಗಿ ಈ ಕೇಂದ್ರವನ್ನು ಬೆಳೆಸುವುದು ನಮ್ಮ ಆದ್ಯತೆಯಾಗಬೇಕಿದೆ.”

Tags: