* ದೇಶದ ರೈತರಿಗೆ ವಾರ್ಷಿಕ ೬,೦೦೦ ರು. ಸಹಾಯಧನವನ್ನು ಒದಗಿಸುವ ಪಿಎಂ ಕಿಸಾನ್ ಯೋಜನೆ
* ಕೆವೈಸಿ ಮಾಡಿಸಿಕೊಳ್ಳುವ ಅಂತಿಮ ಗಡುವನ್ನು ಕೇಂದ್ರ ಸರ್ಕಾರ ಜು. ೩೧ರವರೆಗೆ ವಿಸ್ತರಿಸಿದೆ
* ಇ-ಕೆವೈಸಿ ಒಟಿಪಿ ಆಧಾರಿತವಾಗಿರುತ್ತದೆ
ದೇಶದ ರೈತರಿಗೆ ವಾರ್ಷಿಕ ೬,೦೦೦ ರು. ಸಹಾಯಧನವನ್ನು ಒದಗಿಸುವ ಪಿಎಂ ಕಿಸಾನ್ ಯೋಜನೆಯ ಕೆವೈಸಿ ಮಾಡಿಸಿಕೊಳ್ಳುವ ಅಂತಿಮ ಗಡುವನ್ನು ಕೇಂದ್ರ ಸರ್ಕಾರ ಜು. ೩೧ರವರೆಗೆ ವಿಸ್ತರಿಸಿದೆ. ಕೇಂದ್ರ ಸರ್ಕಾರ ಪಿಎಂ ಕಿಸಾನ್ನ ೧೧ನೇ ಕಂತಿನಲ್ಲಿ ೧೦ ಕೋಟಿ ರೈತರಿಗಾಗಿ ೨೧,೦೦೦ ಕೋಟಿ ರು. ಸಹಾಯಧನ ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ರೈತರು ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇ-ಕೆವೈಸಿ ಒಟಿಪಿ ಆಧಾರಿತವಾಗಿರುತ್ತದೆ.
ಕೆವೈಸಿ ಮಾಡಿಸಿಕೊಳ್ಳುವ ಅಂತಿಮ ಗಡುವು ಮೇ ೩೧ ರಿಂದ ಜು. ೩೧ಕ್ಕೆ ವಿಸ್ತರಿಸಲಾಗಿದೆ ಎಂದು ಪಿಎಂ ಕಿಸಾನ್ ಪೋರ್ಟಲ್ ತಿಳಿಸಿದೆ.
ಪಿಎಂ ಕಿಸಾನ್ ಸಮ್ಮಾನ್
ಪಿಎಂ-ಕಿಸಾನ್ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಇದು ಫೆಬ್ರವರಿ ೨೪, ೨೦೧೯ ರಂದು ಪ್ರಾರಂಭವಾಯಿತು. ಯೋಜನೆಯು ಆರಂಭದಲ್ಲಿ ೨ ಹೆಕ್ಟೇರ್ವರೆಗೆ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆಉದ್ದೇಶಿಸಲಾಗಿತ್ತು, ಆದರೆ ೦೧.೦೬.೨೦೧೯ ರಿಂದ ಜಾರಿಗೆ ಬರುವಂತೆ, ಎಲ್ಲಾ ಭೂಹಿಡುವಳಿ ರೈತರನ್ನು ಒಳಗೊಳ್ಳಲು ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಯೋಜನೆಯ ಪ್ರಕಾರ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ರೂ.೬೦೦೦ ಆರ್ಥಿಕ ಲಾಭವನ್ನು ನೇರ ಲಾಭ ವರ್ಗಾವಣೆ ಮೂಲಕ ದೇಶಾದ್ಯಂತದ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಫಲಾನುಭವಿಗಳ ಪಟ್ಟಿ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತ್ ಗಳ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟಿಸಲಾಗುತ್ತದೆ. ಹೀಗಾಗಿ ಈ ಯೋಜನೆಯ ಪ್ರೋಂಜನ ಪಡೆಯುವ ರೈತ ಕುಟುಂಬಗಳು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಪರಿಶೀಲಿಸಬಹುದು. ಇಲ್ಲವೇ ಆನ್ ಲೈನ್ ನಲ್ಲಿ ಕೂಡ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಬಹುದು. ಇವೆರಡರ ಹೊರತಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೂಡ ಅರ್ಹ ರೈತರಿಗೆ ಎಸ್ಎಂಎಸ್ ಅಲರ್ಟ್ ಕಳುಹಿಸುತ್ತವೆ. ಈ ಕುರಿತು ಆನ್ ಲೈನ್ ನಲ್ಲಿ ಪರಿಶೀಲಿಸಬಹುದು.