Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹಳೆಯ ಬಾಂಧವ್ಯಗಳನ್ನು ಜತನವಾಗಿಟ್ಟುಕೊಳ್ಳುವ ಕಲೆ

• ಹನಿ ಉತ್ತಪ್ಪ
ಮನೆಮಕ್ಕಳು ನಮ್ಮೊಂದಿಗಿಲ್ಲ ಎಂಬ ಚಿಂತೆಯಿಲ್ಲದೆ, ಬದುಕನ್ನು ಪ್ರಾಕ್ಟಿಕಲ್ ಎಂಬಂತೆ ಸ್ವೀಕರಿಸುವ ಹಿರಿಯ ಜೀವಗಳು ನಮ್ಮಲ್ಲೇ ಎಷ್ಟಿಲ್ಲ! ಯಾವ ಗೊಡವೆಯೂ ಇಲ್ಲದೆ, ಅಕ್ಕಪಕ್ಕದವರನ್ನು ಮಾತಾಡಿಸುತ್ತಾ, ಸಂತೋಷದಿಂದ ಜೀವಿಸುತ್ತಿದ್ದಾರೆ. ಅವರ ಬಳಿ ಹೋಗಿ, ‘ಹೇಗಿದ್ದೀರಾ?’ ಎಂದರೆ ‘ಬಿಂದಾಸ್’ ಎಂಬುದೇ ಉತ್ತರ. ಬದುಕೆಂದರೆ ಬರೀ ನಶ್ವರ, ಎಲ್ಲ ಭಾವಗಳನ್ನು ಅನುಭವಿಸಿಯಾಯಿತು ಎಂಬ ಸಿದ್ಧಾಂತಗಳು ತಪ್ಪಿಯೂ ಅವರ ಬಳಿ ಸುಳಿಯುವುದಿಲ್ಲ. ಈಗಿನ ಹಿರಿಯರಂತೂ ಪ್ರತಿ ದಿನವೂ ನಮ್ಮದು, ಅನುಕ್ಷಣವನ್ನೂ ಆಸ್ವಾದಿಸಬೇಕು ಎಂಬ ತತ್ವಕ್ಕೆ ಬದ್ಧರಾದವರು.

ಸಹಜ ಒಂಟಿತನದ ಯಾತನೆ ಇದ್ದರೂ, ಅಕ್ಕಪಕ್ಕದ ಮನೆಯವರೊಂದಿಗೆ ಬೆರೆಯುವುದು, ಸಮಾನ ಮನಸ್ಕರನ್ನು ಜೊತೆಮಾಡಿಕೊಂಡು ಒಂದಷ್ಟು ನಗುತ್ತಾ ಸಮಯ ಕಳೆಯುವುದು, ಸಾಹಿತ್ಯ ಕೃತಿಗಳನ್ನು ಓದುವುದು, ಇವುಗಳಲ್ಲದೆ ಕೆಲ ಹಿರಿಯರು ತಮ್ಮಿಷ್ಟದ ಕೆಲಸಗಳನ್ನು ಮಾಡುತ್ತಾ ಬದುಕಿನ ಖರ್ಚುಗಳನ್ನು ಹೊಂದಿಸಿ ಕೊಳ್ಳುವುದಕ್ಕೆ ಆದಾಯದ ಮಾರ್ಗಗಳನ್ನು
ಅನುಸರಿಸಿರುವ ಉದಾಹರಣೆಗಳು ಬೇಕಾದ ಷ್ಟಿವೆ. ಗೋಧಿ ಹಲ್ವ, ಖಾರ ಗೋಡಂಬಿ, ಡೈ ಪೂಟ್ಸ್ ಲಾಡು ಅಂತೆಲ್ಲ ವೃತ್ತಿ ಆರಂಭಿಸಿದ ಮಹಿಳೆ ಯೊಬ್ಬರು, ಗ್ರಾಹಕರಿಗೆ ಆರ್ಡರ್ ನೀಡುವಾಗ ಅದರೊಂದಿಗೆ ಒಂದಷ್ಟು ಹೂಗಳನ್ನು ಜೊತೆಗಿಟ್ಟೇ ಕೊಡುವ ರೂಢಿಯನ್ನು ಮಾಡಿಕೊಂಡಿದ್ದಾರೆ.

ಒಂದೂವರೆ ದಶಕದ ಹಿಂದೆ ಬಂದ ‘ಈ ಬಂಧನ’ ಚಿತ್ರ ನೋಡುತ್ತಿದ್ದೆ. ಮಕ್ಕಳು ತಂದೆ-ತಾಯಿಯನ್ನು ಬೇರ್ಪಡಿಸಬೇಕೆಂದು ಎಷ್ಟು ಪಣ ತೊಟ್ಟರೂ ಭಾವನಾತ್ಮಕವಾಗಿ ಬೆಸೆದುಕೊಂಡ ಹಿರಿಯರ ದಾಂಪತ್ಯ ಕತೆಯನ್ನು ಹೆಣೆದ ಚಿತ್ರವದು. ದೂರವಿದ್ದರೇನಂತೆ ತನ್ನ ಹೆಂಡತಿಯೊಂದಿಗೆ ಕಳೆದ ನೆನಪುಗಳನ್ನು ಬರೆದಿಡಬಹುದಲ್ಲಾ ಎಂದುಕೊಂಡು, ಡೈರಿಯಲ್ಲಿ ದಾಖಲಿಸಿಡುತ್ತಾನೆ. ಇದರ ಪರಿಣಾಮ, ಆತನ ಬದುಕು ಬೆರೆಯದೇ ತಿರುವನ್ನು ಪಡೆದುಕೊಳ್ಳುತ್ತದೆ. ಮಕ್ಕಳಿಂದ
ಹೊರದೂಡಲ್ಪಟ್ಟಿದ್ದರೂ ಜಗತ್ತಿಗೆ ನಿಷ್ಕಲ್ಮಶ ಪ್ರೇಮ ಸಂದೇಶವನ್ನು ಕೊಡುವ ತಂದೆಯ ಪಾತ್ರದಲ್ಲಿ ವಿಷ್ಣುವರ್ಧನ್ ಅವರು ಅಭಿನಯದ ಭಾಗವಂತೂ ಅದ್ಭುತವೇ ಸರಿ.

ಸಾಹಿತ್ಯ ಭಾಗದಲ್ಲೂ ಲಲಿತಾ ಸಿದ್ದಬಸವಯ್ಯ ಅವರ ಒಂದು ಹೂ ಹೆಚ್ಚಿಗೆ ಇಡುತೀನಿ’ ಕಥನ ಕವಿತೆಯಲ್ಲಿ ಇಂತಹದೇ ಭಾವದೆಳೆಯನ್ನು ಕಾಣಬಹುದು. ದೊಡ್ಡ ಮಗನ ಜೊತೆಯಲ್ಲಿ ಇರುವ ತಾಯಿ, ಸಣ್ಣ ಮಗನೊಂದಿಗೆ ದೂರದ ಅಸ್ಸಾಮಿನಲ್ಲಿ ಇರುವ ತಂದೆಯ ನಡುವಿನ ಪರಸ್ಪರ ತಹತಹಿಕೆಯನ್ನು ಕವಿತೆ ನಿರೂಪಿಸುತ್ತದೆ. ಮುದುಕಿಯ ಮನೆಯಲ್ಲಿ ಝಣಗುಡುವ ಫೋನ್ ರಿಂಗ್‌ನಿಂದ ಆರಂಭವಾಗುವ ಕವಿತೆ ಪಡೆವ ಸ್ಥಿತ್ಯಂತರಗಳೇ ಬೇರೆ. ಮಗನ ಮನೆಯಾದರೂ ಸ್ವಾತಂತ್ರ್ಯವಿಲ್ಲದ ತಾಯಿಗೆ, ತನ್ನ ಗಂಡನೇನಾದರೂ ಪೋನ್ ಮಾಡಿರಬಹುದೇ? ಎಂಬುದೊಂದೇ ಆತಂಕ. ಮೊಮ್ಮಗಳು ರಾಂಗ್ ನಂಬರ್ ಎಂದು ಹೇಳಿದಾಗಲಂತೂ ಜೀವದ ಒಳಸಂಕಟಗಳ ತೀವ್ರತೆಯೇ ಬೇರೆ.

ಅಸ್ಸಾಮಿನಲ್ಲಿದ್ದು, ಭಾಷೆಯನ್ನು ಮಾತಾಡುವುದಕ್ಕಾಗಿ ಗಂಡ ಎಷ್ಟು ಪರದಾಡುತ್ತಿರಬಹುದು ಎಂಬುದನ್ನು ಬಲ್ಲ ಮಡದಿ ಫೋನ್ ಎತ್ತುವುದಕ್ಕಾಗಿ ಪರಿತಪಿಸುತ್ತಾ, ‘ಒಂದು ಹೂವು ಹೆಚ್ಚಿಗೆ ಇಡುತೀನಿ’ ಎಂದು ಗುಡ್ಡೆಮಲ್ಲಪ್ಪನಿಗೆ ಪ್ರಾರ್ಥನೆ ಇಡುತ್ತಾಳೆ.

ಮಗನ ಕಾರು ಸ್ಟಾರ್ಟಾಯಿತು ಹಿಂದೆಯೇ ಮೊಮ್ಮಗಳ ಸೂಟಿ ಮೊಮ್ಮಗನ ವ್ಯಾನೂ ಬಂದಾಯಿತು; ಸೊಸೆಯೊಬ್ಬಳಿಗೆ ಈ ಹೊತ್ತು ದೇವರೇ ಹೊರಗಿನ ಕೆಲಸ ಸಮ್ಮಿಲಿಸಲಿ, ಅಷ್ಟು ಮಾಡಪ್ಪ ನನ್ನಪ್ಪ ಗುಟ್ಟೆಮಲ್ಲಪ್ಪ ಒಂದು ಹೂ ಹೆಚ್ಚಿಗೆ ಇಡುತೀನಿ ನಿನ್ನ ಗಟ್ಟಿಪಾದಕ್ಕೆ ಇವರೆಲ್ಲ ಹೊರಟರೆ ಆಚೆಗೆ ಒಂದಿಷ್ಟು ಹೊತ್ತು ನಿರಾಳ ಮಾತಾಡುತ್ತೇನೆ ನನ್ನ ಮುದುಕನ ಕೂಡ’ ಏನಿದ್ದರೂ ಹಿರಿಯ ಜೀವಗಳು ಪರಸ್ಪರ ಬೆಸೆದ ಬಾಂಧವ್ಯವನ್ನು ಜತನವಾಗಿಟ್ಟುಕೊಳ್ಳುವ ಕಲೆ ಯನ್ನು ಅವರಿಂದಲೇ ಕಲಿಯಬೇಕು. ಅಕ್ಕಪಕ್ಕ ದವರೊಂದಿಗೆ ಮಾತಿನಲ್ಲಿ ಬೆರೆತು, ಕಲೆವ ಬಗೆ ಈಗಿನವರಿಗೆಲ್ಲ ಸದಾ ಅನುಸರಣೀಯವೇ ಹೌದು.

Tags: