Mysore
32
scattered clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಸಂಕ್ರಾತಿಯ ಚಳಿಗೆ ಆಹಾರವೇ ಔಷಧಿ

• ಡಾ.ಚೈತ್ರ ಸುಖೇಶ್

ಆಯುರ್ವೇದವು ಒಂದು ವರ್ಷವನ್ನು 6 ಋತುಗಳಾಗಿ ಮತ್ತು 2 ಅಯನಗಳಾಗಿ ವಿಂಗಡಿಸಿದೆ. ಉತ್ತರಾಯಣವನ್ನು ಆದಾನ ಕಾಲವೆಂದು, ದಕ್ಷಿಣಾಯನವನ್ನು ವಿಸರ್ಗ ಕಾಲವೆಂದು ಹೇಳಲಾಗಿದೆ.

ಅದಾನವೆಂದರೆ ಮನುಷ್ಯನ ದೇಹದ ಬಲವನ್ನು ಎಳೆದುಕೊಳ್ಳುವುದು ಎಂದರ್ಥ. ಅಂದರೆ ಈ ಶಿಶಿರ, ವಸಂತ, ಗ್ರೀಷ್ಮ ಋತುಗಳಲ್ಲಿ ದೇಹದ ಬಲವು ಕುಂದಿರುತ್ತದೆ. ವರ್ಷ, ಶರದ್, ಹೇಮಂತ ಋತುಗಳು ದೇಹದ ಬಲವರ್ಧನೆಗೆ ಉತ್ತಮ ಕಾಲ. ಆದ್ದರಿಂದ ಈ ಕಾಲಗಳಲ್ಲಿ ಬರುವ ಸಂಕ್ರಾಂತಿ ಹಬ್ಬದ-ಆಹಾರ ಸೇವನೆ ತನ್ನದೇ ಆದ ಮಹತ್ವ ಹೊಂದಿದೆ.

ಈ ಹಬ್ಬದಲ್ಲಿ ಎಳ್ಳು, ಬೆಲ್ಲ, ಕಬ್ಬು, ನೆಲಗಡಲೆ, ತುಪ್ಪ ಮುಂತಾದ ಆಹಾರಗಳ ಬಳಕೆ ಮಾಡುತ್ತೇವೆ. ಅಂದರೆ ಮಧುರ, ಆಮ್ಲ ಮತ್ತು ಲವಣಯುಕ್ತ ಆಹಾರ ಸೇವನೆ ಈ ಕಾಲದಲ್ಲಿ ಸೂಕ್ತವಾಗಿರುತ್ತದೆ.

ಸಂಕ್ರಾಂತಿ ಹಬ್ಬದಂದು ಸೇವಿಸುವ ಎಳ್ಳನ್ನು ಆಯುರ್ವೇದದಲ್ಲಿ ‘ತಿಲ’ ಎಂದು ಕರೆಯುತ್ತಾರೆ. ಇದು ವಾತಶಮನವಾಗಿದೆ. ಎಳ್ಳನ್ನು ಸೇವಿಸಿದಾಗ ಅದು ದೇಹಕ್ಕೆ ಸೇರಿ ಮಧುರ ರಸವಾಗಿ ಮಾರ್ಪಾಟು ಹೊಂದುತ್ತದೆ. ಇದರಿಂದ ದೇಹಕ್ಕೆ ಬಲ, ಪುಷ್ಟಿಯನ್ನು ನೀಡುತ್ತದೆ. ಕಬ್ಬಿನ ರಸವೂ ಸಿಹಿಯಾಗಿದ್ದು, ದೇಹದ ಬಲವರ್ಧನೆಗೆ ಸಹಾಯಕಾರಿಯಾಗುತ್ತದೆ. ಚಳಿಗಾಲದಲ್ಲಿ ತಿಲತೈಲ ಅಥವಾ ಎಳ್ಳೆಣ್ಣೆಯ ಪ್ರಯೋಗವೂ ಉತ್ತಮ. ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡುವುದು ಒಡೆದ ಚರ್ಮಕ್ಕೆ ಹಿತಕರವಾಗಿರುತ್ತದೆ. ಈ ಶಿಶಿರ ಋತುವಿನ ಕಾಲ ದಲ್ಲಿ ದೇಹದಲ್ಲಿ ಜೀರ್ಣಕ್ರಿಯೆಯು ಮಂದವಾಗಿ ರುತ್ತದೆ, ಕಫ ದೋಷವೂ ಹೆಚ್ಚಾಗಿರುತ್ತದೆ. ಆದ್ದರಿಂದ ನೆಲ್ಲಿಕಾಯಿ, ಹರೀತಕೀ, ಅಶ್ವಗಂಧ, ಹಿಪ್ಪಲಿ ಮುಂತಾದ ಆಹಾರಗಳು ಆರೋಗ್ಯಕ್ಕೆ ಯೋಗ್ಯ.

ಎಳ್ಳಿನಿಂದ ಮಾಡಿದ ಉಂಡೆ, ನೆಲಗಡಲೆ, ಬೆಲ್ಲದಿಂದ ಮಾಡಿದ ಉಂಡೆ (ಚಿಕ್ಕ, ಕಡಲೆಕಾಯಿ, ಎಳ್ಳಿನ ಚಟ್ಟಿಪುಡಿಗಳ ಬಳಕೆ, ಒಣಖರ್ಜೂರದಿಂದ ಮಾಡಿದ ಪಾಯಸ, ಕಬ್ಬಿನ ಜ್ಯೂಸ್, ಹೆಸರು ಬೇಳೆಯಿಂದ ತಯಾರಿಸುವ ಕಿಚಡಿ, ಪೊಂಗಲ್, ಹುಗ್ಗಿ, ತುಪ್ಪದ ಸೇವನೆ, ಬಾಜ್ರಾ ರೊಟ್ಟಿ ಈ ಎಲ್ಲ ಆಹಾರಗಳನ್ನು ದಿನನಿತ್ಯ ಬಳಸುವುದರಿಂದ ವಾತ, ಪಿತ್ತ, ಕಫ ತ್ರಿದೋಷಗಳ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಜಠರಾಗ್ನಿಯು ಉತ್ತಮವಾಗಿದ್ದು, ಅಜೀರ್ಣ ಮುಂತಾದ ಹೊಟ್ಟೆಯ ಸಮಸ್ಯೆಗಳು ಬಾರದಂತೆ ತಡೆಯಬಹುದು. ಈ ಆಹಾರಗಳು ವಾತ ಮತ್ತು ಕಫವನ್ನು ಶಾಂತಗೊಳಿಸಿ, ಪಿತ್ತವನ್ನು (ಶಾಖ) ಹೆಚ್ಚಿಸುತ್ತದೆ. ದೇಹದ ಮೂಳೆಗಳನ್ನು ಬಲಪಡಿಸುತ್ತದೆ. ಚರ್ಮಕ್ಕೆ ಹೊಳಪು, ಕೂದಲಿನ ಪೋಷಣೆಗೂ ಅನುಕೂಲಕರವಾಗಿರುತ್ತದೆ. ಹೀಗಾಗಿ ಈ ಎಳ್ಳು, ನೆಲಗಡಲೆ, ಕಬ್ಬು, ಬಾಜ್ರಾ, ನೆಲಗಡಲೆ ಮತ್ತು ಹೆಸರುಬೇಳೆ, ಒಣಖರ್ಜೂರ, ತುಪ್ಪ ಇವುಗಳನ್ನು ಚಳಿಗಾಲದ ಸೂಪರ್ ಫುಡ್ ಎಂದೇ ಕರೆಯಬಹುದು. ಎಳ್ಳಿನಿಂದ ಹಿಂಡಿ ತೆಗೆಯಲಾದ ಎಣ್ಣೆಯನ್ನು ‘ಎಣ್ಣೆಗಳ ರಾಣಿ’ ಎಂದೇ ಕರೆಯುತ್ತಾರೆ. ಎಳ್ಳೆಣ್ಣೆಯು ದೇಹವನ್ನು ನೈಸರ್ಗಿಕವಾಗಿ ಬೆಚ್ಚಗಿಡುತ್ತದೆ ಮತ್ತು ಇದರಲ್ಲಿ ಉತ್ತಮ ಕೊಬ್ಬಿನಾಂಶವಿರುತ್ತದೆ. ಎಣ್ಣೆಯನ್ನು ವಾರಕ್ಕೊಮ್ಮೆಯಾದರೂ ಹಚ್ಚಿ ಸ್ನಾನ ಮಾಡು ವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಇದರಲ್ಲಿ ಕ್ಯಾಲ್ಸಿಯಂ ಅಂಶವೂ ಇರುತ್ತದೆ. ಎಳ್ಳೆಣ್ಣೆಯಲ್ಲಿ Tyrosine ಎಂಬ ಅಮೈನೊ ಆಮ್ಲವಿರುತ್ತದೆ. ಇದು ದೀರ್ಘಕಾಲದ ಒತ್ತಡವನ್ನು ನಿವಾರಿಸಲು ಸಹಕಾರಿ.

ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯಲು ಅನುಕೂಲ. ಎಳ್ಳೆಣ್ಣೆಯನ್ನು `Oil Pulling’ ಕೂಡ ಮಾಡಬಹುದು. ಹಲ್ಲು ಮತ್ತು ವಸಡಿನ ಆರೋಗ್ಯಕ್ಕೆ, ಬಾಯಿಯ ದುರ್ವಾಸನೆ ದೂರ ಮಾಡಲು ಕೂಡ ಅನುಕೂಲಕಾರಿ.

ಎಳ್ಳೆಣ್ಣೆಗೆ ಕರಿಬೇವನ್ನು ಹಾಕಿ ಕುದಿಸಿ ಎಣ್ಣೆ ಮಾಡಿಕೊಂಡು ಬಳಸುವುದು ಕೂದಲ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಮ್ಮ ಪುರಾತನ ಆಯುರ್ವೇದ ಪದ್ಧತಿಯು ಸಮಯೋಚಿತ ಪ್ರಯೋಗ, ಆಯುರ್ವೇದ ಮಾರ್ಗದರ್ಶನ ಮತ್ತು ಸ್ಥಳೀಯ ಆಹಾರಗಳಿಂದ ಚಳಿಗಾಲದಲ್ಲೂ ಫಿಟ್ ಆಗಿ, ಆರೋಗ್ಯವಾಗಿರಬಹುದು.
chaitrasukesh18@gmail.com

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!