ಪ್ರೊ.ಆರ್.ಎಂ.ಚಿಂತಾಮಣಿ
ಇದೇ ತಿಂಗಳಲ್ಲಿ ಬ್ರೆಝಿಲ್ ದೇಶದ ಬೆಲೆನ್ ನಗರದಲ್ಲಿ ೩೦ನೇ ಪರಿಸರ ರಕ್ಷಣೆಗೆ ಸಂಬಂಧಪಟ್ಟವರ (Conference Of
Parties) ಸಮ್ಮೇಳನ ನಡೆಯಲಿದೆ. ಮತ್ತೊಮ್ಮೆ ಜಗತ್ತಿನ ಎಲ್ಲ ದೇಶಗಳ ಸರ್ಕಾರಗಳ ಪ್ರತಿನಿಧಿಗಳು , ವಿಷಯ ಪರಿಣತರು, ಆರ್ಥಿಕ-ಸಾಮಾಜಿಕ ತಜ್ಞರು ಮತ್ತು ಆಸಕ್ತರು ಸೇರಿ ಚರ್ಚಿಸಲಿದ್ದಾರೆ.
ಹಿಂದಿನ ಎಲ್ಲ ಸಮ್ಮೇಳನಗಳಲ್ಲಿಯೂ ವಿವರವಾದ ಚರ್ಚೆಗಳಾಗಿ ನಿರ್ಣಯಗಳಾಗಿವೆ. ವಿಶ್ವ ಸಂಸ್ಥೆಯ (United Nations
Organisation ಯು.ಎನ್.ಓ) ಆಶ್ರಯದಲ್ಲಿ ಈ ಸಮ್ಮೇಳನಗಳು ನಡೆಯುತ್ತಿರು ವುದರಿಂದ ಇವುಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗುತ್ತದೆ. ೨೦೦೨ರಲ್ಲಿ ಎಂಟನೆಯ ಸಮ್ಮೇಳನ ದೆಹಲಿಯಲ್ಲಿ ನಡೆದಿತ್ತು. ಮೊದಲ ಸಭೆ ೧೯೯೫ರಲ್ಲಿ ಜರ್ಮನಿಯ ಬರ್ಲಿನ್ನಲ್ಲಿ ನಡೆದಿತ್ತು.
ಈ ಸಮ್ಮೇಳನಗಳಲ್ಲಿ ಕೈಗಾರಿಕಾ ಬೆಳವಣಿಗೆ, ಇತರ ಆರ್ಥಿಕ ಚಟುವಟಿಕೆಗಳು ಮತ್ತು ಬೇರೆ ಸಾಮಾಜಿಕ ಚಟುವಟಿಕೆಗಳಿಂದ ಪರಿಸರ ಮತ್ತು ಹವಾಮಾನದ ಮೇಲೆ ಉಂಟಾಗುವ ಹಾನಿ ಮತ್ತು ಇತರ ಪರಿಣಾಮಗಳನ್ನು ವಿವರವಾಗಿ ಚರ್ಚಿಸಲಾಗುತ್ತದೆ. ಅವುಗಳನ್ನು ಸರಿಪಡಿಸುವ ವಿಧಾನಗಳ ಬಗ್ಗೆಯೂ ಚರ್ಚಿಸಿ ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ. ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಂಬಂಧಪಟ್ಟವರಿಗೆ ಸಲಹೆಗಳನ್ನು ಕೊಡಲಾಗುತ್ತದೆ. ಒಂದು ಉದಾಹರಣೆಯನ್ನು ಇಲ್ಲಿ ಪ್ರಸ್ತಾಪಿಸುವುದಾದರೆ ಕೈಗಾರಿಕೆಗಳು ತಮ್ಮ ಚಟುವಟಿಕೆಗಳಿಂದ ಹೊರ ಹಾಕಿ ವಾತಾವರಣದಲ್ಲಿ ಸೇರಿಸುವ ಕಾರ್ಬನ್ನಿಂದ ವಾತಾವರಣದಲ್ಲಿ ಅತಿಯಾದ ಕಾರ್ಬನ್ನಿಂದ ಮಾಲಿನ್ಯತೆ ಉಂಟಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳು ಹೆಚ್ಚು ಕಾರ್ಬನ್ ವಾತಾವರಣದಲ್ಲಿ ಸೇರಿಸುತ್ತವೆ. ಇದು ವಾತಾವರಣದ ಸಮ ತೋಲನಕ್ಕೆ ಹಾನಿ ಉಂಟು ಮಾಡುತ್ತದೆ. ಇತರ ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳಿಗೆ ಇದರಿಂದ ತೊಂದರೆಗಳಾಗಬಹುದು. ಇದರ ಬೆಲೆಯನ್ನು ಶ್ರೀಮಂತ ದೇಶಗಳು ತೆರಬೇಕಾಗುತ್ತದೆ. ತೊಂದರೆ ಅನುಭವಿಸುವ ದೇಶಗಳಿಗೆ ಪರಿಹಾರವನ್ನು ಒದಗಿಸಬೇಕಾಗುತ್ತದೆ. ಸಮತೋಲನದ ಜವಾಬ್ದಾರಿಯೂ ಇದೆ.
ಪ್ರಮುಖ ನಿರ್ಣಯಗಳು:
ಮೊದಲನೇ ಸಭೆಯಲ್ಲಿ ಪರಿಸರ ಮಾಲಿನ್ಯದ ಕಾರಣಗಳನ್ನು ಪರಿಶೀಲಿಸಲಾಯಿತು. ಮತ್ತು ಅವುಗಳ ಪರಿಣಾಮಗಳು, ವಿವಿಧ ವಲಯಗಳ ಮೇಲೆ ಹೇಗಾಗುತ್ತದೆ ಎಂಬುದನ್ನು ಚರ್ಚಿಸಲಾಯಿತು. ಹೊಣೆಗಾರಿಕೆಗಳನ್ನೂ ನಿಗದಿಮಾಡಲಾಯಿತು. ಮೂರನೇ ಸಮ್ಮೇಳನದಲ್ಲಿ (೧೯೯೭)‘ಕ್ಯೊಟೋ ಘೋಷಣೆ’ ಎಂದು ಹೆಸರಾಗಿರುವ ನಿರ್ಣಯದಂತೆ ‘೧೯೯೦ರ ಮಟ್ಟಕ್ಕಿಂತ ಕನಿಷ್ಠ ಶೇ.೫ರಷ್ಟನ್ನಾದರೂ ಕಡಿಮೆ ಮಾಡಬೇಕು. ಮತ್ತು ಕಾರ್ಬನ್ ಪೇಟೆ ಅಸ್ತಿತ್ವಕ್ಕೆ ತರಲಾಯಿತು. ೨೦೦೦ನೇ ಇಸವಿಯಲ್ಲಿ ನಡೆದ ಸಭೆಯಲ್ಲಿ ‘ಕಾರ್ಬನ್ ಕ್ರೆಡಿಟ್’ ಪರಿಕಲ್ಪನೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಇದನ್ನು ಒಪ್ಪದ ಅಮೆರಿಕ ಸಭಾತ್ಯಾಗ ಮಾಡಿತ್ತು.
ದೆಹಲಿಯಲ್ಲಿ (೨೦೦೨) ಅಂಗೀಕರಿಸಲಾದ ನಿರ್ಣಯದಂತೆ ‘ಟೆಕ್ ಟ್ರಾನ್ಸ್ಫರ್’(ತಂತ್ರಜ್ಞಾನ ವರ್ಗಾವಣೆ) ಪರಿಕಲ್ಪನೆಯನ್ನು ಜಾರಿಗೆ ತರಲಾಯಿತು. ಅಲ್ಲದೆ ಪರಿಸರ ಸಂರಕ್ಷಣೆಗಾಗಿ ಪರಿಸರ ಮಾಲಿನ್ಯದ ಕೆಟ್ಟ ಪರಿಣಾಮಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಅವಶ್ಯಕತೆಯ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಯಿತು. ೨೦೦೫ರ ಮಾಂಟ್ರಿಯಲ್ ನಿರ್ಣಯದಂತೆ ‘ಕ್ಯೊಟೋ ಘೋಷಣೆ’ಯ ಪ್ರಮುಖ ಅಂಶವಾದ ಪ್ರತಿವರ್ಷ ಶೇ.೫ರಷ್ಟು ಕಾರ್ಬನ್ ಪ್ರಮಾಣ ಕಡಿಮೆ ಮಾಡುವ ತೀರ್ಮಾನವನ್ನು ೨೦೧೨ರ ನಂತರವೂ ಮುಂದುವರಿಸುವುದು ಮಹತ್ವದ ನಿರ್ಣಯ.
ಕೋಪನ್ ಹೇಗನ್ನಲ್ಲಿ ನಡೆದ ಸಮ್ಮೇಳನದಲ್ಲಿ ಒಮ್ಮತ ಮೂಡಿಸುವುದು ಅಸಾಧ್ಯವಾದದ್ದರಿಂದ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಶ್ರೀಮಂತ ದೇಶಗಳು ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿಯ ಮುಂದುವರಿದ ಭಿನ್ನಮತ ಇದಕ್ಕೆ ಅಡ್ಡಿಯಾಯಿತು. ೨೦೧೦ರಲ್ಲಿ ಅಂಗೀಕರಿಸಿದ ಮಹತ್ವದ ನಿರ್ಣಯದಂತೆ ೫೦೦ ಬಿಲಿಯನ್ ಡಾಲರ್ಗಳ ‘ಹಸಿರು ವಾತಾವರಣ ನಿಧಿ’ಯನ್ನು ಸ್ಥಾಪಿಸಲಾಯಿತು. ಮತ್ತು ‘ಜಾಗತಿಕ ತಂತ್ರಜ್ಞಾನ ವ್ಯವಸ್ಥೆ’(Global Tech Network) ಆರಂಭವಾ ಯಿತು.
೨೦೧೪ರಲ್ಲಿ ಲಿಮಾ ಸಮ್ಮೇಳನದಲ್ಲಿ ಕಾರ್ಬನ್ ಪ್ರಮಾಣದ ವಿಷಯದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದೇ ಇದ್ದುದರಿಂದ ಯಾವುದೇ ತೀರ್ಮಾನವಿಲ್ಲದೇ ಸಭೆ ಮುಕ್ತಾಯವಾಯಿತು. ೨೦೧೫ರಲ್ಲಿ ‘ಪ್ಯಾರಿಸ್ ಒಪ್ಪಂದ’ವೆಂದೇ ಪ್ರಸಿದ್ಧವಾಗಿರುವ ನಿರ್ಣಯದಂತೆ ಜಾಗತಿಕ ತಾಪಮಾನವನ್ನು ಎರಡು ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಮಟ್ಟಕ್ಕೆ ತರಬೇಕೆಂದು ಒಪ್ಪಿಕೊಳ್ಳಲಾಯಿತು. ೨೦೧೯ರಲ್ಲಿ ಪ್ಯಾರಿಸ್ ಒಪ್ಪಂದದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದ ಅಮೆರಿಕ ಹೊರ ಹೋಯಿತು. ಮತ್ತು ಚೀನಾ ಒಳಸೇರಿಕೊಂಡಿತು. ೨೦೨೧ರಲ್ಲಿ ಗ್ಲಾಸ್ಗೊ ಸಮ್ಮೇಳನದಲ್ಲಿ ಮಹತ್ವದ ಬೆಳವಣಿಗೆಯೊಂದರಂತೆ ಮಾಲಿನ್ಯಕ್ಕೆ ವಿಶ್ವಾದ್ಯಂತ ಕಾರಣವಾಗಿರುವ ಕಲ್ಲಿದ್ದಲು ಬಳಕೆಯನ್ನು ನಿಧಾನವಾಗಿ ವಿದ್ಯುತ್ ಉತ್ಪಾದನೆಯಲ್ಲಿ ಮತ್ತು ಇತರ ಆರ್ಥಿಕ ಚಟುವಟಿಕೆಗಳಲ್ಲಿ ಶಕ್ತಿ ಮೂಲವಾಗಿ ಬಳಸುವುದನ್ನು ಕಡಿಮೆ ಮಾಡಬೇಕೆಂದು ನಿರ್ಣಯಿಸಲಾಯಿತು.
ಈ ಎಲ್ಲ ನಿರ್ಣಯಗಳನ್ನು ಸ್ವೀಕರಿಸಿ ಜಾರಿಗೊಳಿಸುವ ಅಥವಾ ಸ್ವೀಕರಿಸದೇ ಇರುವ ಹಕ್ಕು ಮತ್ತು ಅಽಕಾರ ಸದಸ್ಯ ರಾಷ್ಟ್ರಗಳಿಗಿದೆ. ಇವುಗಳನ್ನು ಸಲಹೆಗಳು ಎಂದೇ ಹೇಳಬೇಕಾಗುತ್ತದೆ. ಜವಾಬ್ದಾರಿಗಳು ಮತ್ತು ಅಂಗೀಕರಿಸಿ ಜಾರಿಗೊಳಿಸಲೇಬೇಕು ಎನ್ನುವುದಾದರೆ ಅಂತರರಾಷ್ಟ್ರೀಯ ಕಾನೂನು ಚೌಕಟ್ಟಿನಲ್ಲಿ ಈ ಸಮ್ಮೇಳನಗಳನ್ನು ಮತ್ತು ಅವುಗಳ ನಿರ್ಣಯಗಳನ್ನು ತರಬೇಕಾಗುತ್ತದೆ. ಅದು ಒತ್ತಾಯದ ಮಾಘ ಸ್ನಾನವಾಗುತ್ತದೆ. ಒತ್ತಾಯದಿಂದ ಹೇರಿದ್ದು ಯಾವಾಗಲೂ ಒಳ್ಳೆಯದಲ್ಲ. ಮಾನವಾಭಿವೃದ್ಧಿಗೆ ಅವಶ್ಯವಿರುವ ನೈಸರ್ಗಿಕ ಸಂಪನ್ಮೂಲಗಳೆಲ್ಲ ಪರಿಸರದ ಅಂಗಗಳೇ. ಪರಿಸರವು ಸುಸ್ಥಿರವಾಗಿದ್ದರೆ (Sustainable) ನೈಸರ್ಗಿಕ ಸಂಪನ್ಮೂಲಗಳೂ ಹೆಚ್ಚಾಗಿ ಲಭ್ಯವಾಗುತ್ತವೆ. ಆದ್ದರಿಂದ ಪರಿಸರಕ್ಕೆ ಹಾನಿಮಾಡದಿದ್ದರೆ ಮತ್ತು ಹಾನಿಯಾದಾಗ ಅದನ್ನು ಸರಿಪಡಿಸಿದರೆ ಅದು ನಮ್ಮ ಏಳಿಗೆಗೆ ಪೂರಕವೆಂಬುದು ನಿಸ್ಸಂಶಯ.
” ೨೦೨೧ರಲ್ಲಿ ಗ್ಲಾಸ್ಗೊ ಸಮ್ಮೇಳನದಲ್ಲಿ ಮಹತ್ವದ ಬೆಳವಣಿಗೆಯೊಂದರಂತೆ ಮಾಲಿನ್ಯಕ್ಕೆ ವಿಶ್ವಾದ್ಯಂತಕಾರಣವಾಗಿರುವ ಕಲ್ಲಿದ್ದಲು ಬಳಕೆಯನ್ನು ನಿಧಾನವಾಗಿ ವಿದ್ಯುತ್ ಉತ್ಪಾದನೆಯಲ್ಲಿ ಮತ್ತು ಇತರ ಆರ್ಥಿಕ ಚಟುವಟಿಕೆಗಳಲ್ಲಿ ಶಕ್ತಿ ಮೂಲವಾಗಿ ಬಳಸುವುದನ್ನು ಕಡಿಮೆ ಮಾಡಬೇಕೆಂದು ನಿರ್ಣಯಿಸಲಾಯಿತು.”





