ಮೈಸೂರು: ಶ್ರೀರಾಮ ಪ್ರಭುವಿನ ದರ್ಶನಕ್ಕೆ ಜಿಲ್ಲೆಯಿಂದ ತೆರಳುವ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಯೋಧ್ಯೆಗೆ ಮೈಸೂರಿನಿಂದ ರೈಲು ಸಂಪರ್ಕ ಕಲ್ಪಿಸಲಾಗಿದೆ.
ಮೈಸೂರು ಮಾರ್ಗವಾಗಿ ಅಯೋಧ್ಯೆಗೆ ಅತ್ಯಂತ ವೇಗವಾಗಿ ಚಲಿಸುವ ಮೈಸೂರು-ಅಯೋಧ್ಯೆ-ಮೈಸೂರು ರೈಲು ಸೇವೆ ಫೇಬ್ರವರಿ 4ರಿಂದ ಆರಂಭವಾಗಲಿದೆ. ಈ ಬಗ್ಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮೈಸೂರಿನಿಂದ ಅಯೋಧ್ಯೆಗೆ ರೈಲು ಫೆಬ್ರವರಿ 4 ಮತ್ತು ಫೆಬ್ರವರಿ 18 ರಂದು ಓಡಾಟ ನಡೆಸಲಿದೆ. ಅದರಂತೆಯೇ ಅಯೋಧ್ಯೆಯಿಂದ ಮೈಸೂರಿಗೆ ಫೆಬ್ರವರಿ 7 ಮತ್ತು ಫೆಬ್ರವರಿ 21 ರಂದು ಸಂಚಾರ ನಡೆಸಿಲಿದೆ.
ರೈಲ್ವೆ ಇಲಾಖೆ ತಯಾರಿಸಿರುವ ಈ ವೇಳಾಪಟ್ಟಿ ಅನ್ವಯ ರೈಲು ಮೈಸೂರಿನಿಂದ ಫೆಬ್ರವರಿ 4 ರಂದು ರಾತ್ರಿ 12.15 ಕ್ಕೆ ಹೊರಟು ಅಯೋಧ್ಯೆಗೆ ಫೆಬ್ರವರಿ 7ರ ರಾತ್ರಿ 12.55ಕ್ಕೆ ತಲುಪಲಿದೆ. ಇನ್ನು ಫೆಬ್ರವರಿ 18 ರಂದು ಇದೇ ಸಮಯಕ್ಕೆ ಹೊರಡಲಿರುವ ರೈಲು ಫೆಬ್ರವರಿ 21 ರಂದು ಅಯೋಧ್ಯೆ ತಲುಪಲಿದೆ.
ಅಯೋಧ್ಯೆಯಿಂದ ಮೈಸೂರಿನ ಕಡೆ ಸಂಚರಿಸಲಿರುವ ರೈಲು ಫೆಬ್ರವರಿ 7 ರಂದು ರಾತ್ರಿ 9.20ಕ್ಕೆ ಅಯೋಧ್ಯೆಯಿಂದ ಹೊರಟು ಮೈಸೂರಿಗೆ ಫೆಬ್ರವರಿ 10 ರ ಬೆಳಗ್ಗೆ 7 ಗಂಟೆಗೆ ತಲುಪಲಿದೆ. ಫೆಬ್ರವರಿ 21 ರಂದು ಕೂಡಾ ಇದೇ ಸಮಯಕ್ಕೆ ರೈಲು ಮೈಸೂರನನ್ನು ತಲುಪಲಿದೆ.
22 ಕೋಚ್ ಹೊಂದಿರುವ ಈ ರೈಲು ಮೈಸೂರು ಮಾರ್ಗವಾಗಿ ರಾಜ್ಯದ ಬೆಂಗಳೂರು, ತುಮಕೂರು, ಅರಸೀಕೆರೆ ಜಂಕ್ಷನ್, ಕಡೂರು, ಬೀರೂರು ಜಂಕ್ಷನ್ಗಳಲ್ಲಿ ನಿಲ್ದಾಣ ಹೊಂದಿರಲಿದೆ.





