Mysore
16
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

ಕಾಂಗ್ರೆಸ್​ ಯೋಜನೆಗಳ ಲಾಭ ಪಡೆದುಕೊಂಡವರೇ ನಮ್ಮನ್ನು ವಿರೋಧಿಸುತ್ತಿದ್ದಾರೆ: ಜಿ ಪರಮೇಶ್ವರ್

ತುಮಕೂರು : ಯಾರು ಕಾಂಗ್ರೆಸ್​ನ ಯೋಜನೆಗಳ ಲಾಭ ಪಡೆದುಕೊಂಡಿದ್ದಾರೋ ಅವರೇ ನಮ್ಮನ್ನ ವಿರೋಧ ಮಾಡುತ್ತಿದ್ದಾರೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ 18 ವರ್ಷದವರಿಗೆ ಮತದಾನದ ಹಕ್ಕು ನೀಡಿದ್ದರು. ಈಗ ಅವರೇ ನಮ್ಮನ್ನು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಬಡವರ ಪರವಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್​ನವರು ಅಲ್ಪಸಂಖ್ಯಾತರ ಪರ ಅಂತಾ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕರ್ತರಿಗೆ ಕರೆ ನೀಡಿದ ಸಚಿವ ಡಾ.ಜಿ.ಪರಮೇಶ್ವರ್

ಅಲ್ಪಸಂಖ್ಯಾತರು ಈ ದೇಶದಲ್ಲಿ ಹುಟ್ಟಿಲ್ವಾ. ಕೋಟ್ಯಂತರ ಅಲ್ಪಸಂಖ್ಯಾತರಿದ್ದಾರೆ, ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಜೆಡಿಎಸ್​ ನವರು ಜಾತ್ಯತೀತ ಎಂದು ಇಟ್ಟುಕೊಂಡು ಬದಲಾಗಿದ್ದಾರೆ. ದೆಹಲಿಗೆ ಕರೆದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜವಾಬ್ದಾರಿ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಸಂಕಲ್ಪ ಮಾಡಬೇಕು. ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ ಗೆಲ್ಲಬೇಕು. ನೀವು ಈ ಕಚೇರಿಯಿಂದ ಹೊರಬೀಳುವಾಗ ಸಂಕಲ್ಪ ಮಾಡಿಕೊಂಡು ಹೋಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿಯ ಸಮಾಜ ವಿರೋಧಿ ನೀತಿಗಳನ್ನು ಜನರಿಗೆ ತಿಳಿಸಬೇಕು. ಬಿಜೆಪಿಯ ನಾಲ್ಕು ವರ್ಷದ ದುರಾಡಳಿತ ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆ ಬರುವಂತೆ ಮಾಡಿದೆ. ಕಳೆದ ಸರ್ಕಾರದಲ್ಲಿ ಯಾವ ಅಭಿವೃದ್ಧಿ ಕಾರ್ಯವೂ ಆಗಿಲ್ಲ. ಶೋಷಿತ ಸಮುದಾಯಗಳ ಮೇಲೆತ್ತುವ ಕೆಲಸ ಆಗಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಬಡವರನ್ನು ಶಕ್ತಿವಂತರನ್ನಾಗಿ ಮಾಡಬೇಕು ಎಂದು ಐದು ಗ್ಯಾರಂಟಿ ಅನುಷ್ಠಾನಕ್ಕೆ ತರಲಾಗಿದೆ. ಹಣ ಖರ್ಚಾಗುತ್ತಿದೆ, ಅಭಿವೃದ್ಧಿಗೆ ದುಡ್ಡಿಲ್ಲ ಎನ್ನುವರು ಸಾಮಾನ್ಯ ಜನರ ವಿರೋಧಿಗಳು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲರು ಸಂಕಲ್ಪ ಮಾಡಬೇಕು. ನನಗೆ ಒಂದು ಜವಾಬ್ದಾರಿ ನೀಡಲಾಗಿದೆ.

ಟೀಕೆ ಮಾಡುವವರು ಮಾಡುತ್ತಾರೆ

ಕರ್ನಾಟಕದಲ್ಲಿ ವಿನೂತವಾದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಶೋಷಿತರ ನೋವು ಸರ್ಕಾರಕ್ಕೆ ಬಹಳ ಚೆನ್ನಾಗಿ ಅರ್ಥವಾಗಿದೆ. ಆ ಬಡವರನ್ನ ಶಕ್ತಿವಂತನಾಗಿ ಮಾಡಲು ನಮ್ಮ ಸರ್ಕಾರ ಹೊರಟಿದೆ. ಈ ವೇಳೆ ಹಲವು ಟೀಕೆ ಟಿಪ್ಪಣಿ ಬರಬಹುದು. ಬಡವರ ಏಳಿಗೆ ಆದಾಗ ಮಾತ್ರ ಅದಕ್ಕೆ ಉತ್ತರ ಸಿಗಲಿದೆ. ಶೋಷಿತರನ್ನ ಮೇಲೆ ತರುವ ಭಾಗ್ಯವನ್ನ ಕೊಟ್ಟಿದ್ದೇವೆ. ಟೀಕೆ ಮಾಡುವವರು ಮಾಡುತ್ತಾರೆ ಎಂದರು.

ತುಮಕೂರು ಜಿಲ್ಲೆ ಅಭಿವೃದ್ಧಿಗೆ ಬದ್ಧ

ತುಮಕೂರು ಬಹಳ ವಿಶೇಷವಾದ ಜಿಲ್ಲೆ. ಆಧುನಿಕವಾಗಿ ಮುಂದುವರಿಯಲೇಬೇಕು. ತುಮಕೂರು ಕೇವಲ ಬೆಂಗಳೂರಿನಿಂದ 70 ಕಿಲೋಮೀಟರ್​ನಲ್ಲಿದೆ. ಆದ್ದರಿಂದ ಅನಿವಾರ್ಯವಾಗಿ ಅಭಿವೃದ್ಧಿ ಮಾಡಲೇಬೇಕು. ನಾವು ಅಭಿವೃದ್ಧಿ ಮಾಡೇ ಮಾಡುತ್ತೇವೆ ಅಂತ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!