Mysore
25
overcast clouds

Social Media

ಸೋಮವಾರ, 11 ಮೇ 2026
Light
Dark

ಸೆಂಟ್ರಲ್‌ನಲ್ಲಿ ಒಳಹೊಡೆತ ಹೊರಹೊಡೆತ ನಡೆದಿದೆ : ಶೆಟ್ಟರ್‌

ಹುಬ್ಬಳ್ಳಿ : ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಒಳ ಹೊಡೆತ ಮತ್ತು ಹೊರ ಹೊಡೆತ ಎರಡೂ ನಡೆದಿದೆ. ಅಂದರೆ ನನ್ನ ಎದುರಾಳಿ ಬಿಜೆಪಿಗೆ ಯಾವ ರೀತಿ ಶಾಕ್‌ ಆಗಲಿದೆ ಎನ್ನುವುದು ಫಲಿತಾಂಶದ ದಿನ ಕಾದು ನೋಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಮಾತಿಗೂ ಕೃತಿಗೂ ಹೊಂದಾಣಿಕೆಯೇ ಇಲ್ಲ. ಇಲ್ಲಿ ನೋಡಿದರೆ, ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳುತ್ತಾರೆ. ಬಿಜೆಪಿಯವರಿಗೆ ಪಕ್ಷವೇ ಮುಖ್ಯ ಎನ್ನುವುದಾದರೆ, ವ್ಯಕ್ತಿಯಾಗಿರುವ ಮೋದಿಯವರ ಮುಖ ಯಾಕೆ ಮುಂದೆ ಮಾಡಬೇಕು.

ಒಂದು ವೇಳೆ ಪಕ್ಷವೇ ಮುಖ್ಯವಾದರೆ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಏಕೆ ಗೆಲ್ಲಲಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಯಾವುದೇ ಚುನಾವಣೆ ಇರಲಿ ವೈಯಕ್ತಿಕ ನಾಯಕತ್ವ, ಪಕ್ಷದ ಶಕ್ತಿ ಇದ್ದಾಗ ಮಾತ್ರ ಗೆಲುವು ಸಾಧ್ಯ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಣ ಚುನಾವಣೆಯೇ ಹೊರತು, ಶೆಟ್ಟರ್‌ ಮತ್ತು ಕೇಂದ್ರ ಸರ್ಕಾರದ ನಡುವಣ ಚುನಾವಣೆಯಲ್ಲ. ಕಾಂಗ್ರೆಸ್‌ ಅಭ್ಯರ್ಥಿಯಾದ ನಂತರ ದೊಡ್ಡ ಪ್ರಮಾಣದಲ್ಲಿ ನನಗೆ ಜನಬೆಂಬಲ ಸಿಕ್ಕಿದೆ. ದೊಡ್ಡ ಪ್ರಮಾಣದಲ್ಲಿ ಒಳ ಹೊಡೆತ ಆಗಿದೆ. ಫಲಿತಾಂಶದ ದಿನ ಅದರ ಪರಿಣಾಮ ಗೊತ್ತಾಗಲಿದೆ. ಹೆಚ್ಚಿನ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!