Mysore
20
overcast clouds
Light
Dark

ಮೈಸೂರಿನ ಶಿಲ್ಪಿ ಅರುಣ್​ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಫೈನಲ್

ಮೈಸೂರು : ಅಯೋಧ್ಯೆಯಲ್ಲಿ ಇದೇ ಜನವರಿ 22ರಂದು ರಾಮ ಮಂದಿರ ಉದ್ಘಾಟನೆಯಾಗಲಿದೆ. ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ಮೂರ್ತಿಯನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಎಂಬುವವರು ಕೆತ್ತನೆ ಮಾಡಿರುವುದು ವಿಶೇಷವಾಗಿದ್ದು, ಇದೀಗ ಅವರು ಕೆತ್ತನೆ ಮಾಡಿದ ಮೂರ್ತಿಯೇ ಫೈನಲ್​​​​​​ ಆಗಿದೆ. ಈ ಬಗ್ಗೆ ರಾಮಜನ್ಮ ಭೂಮಿ ಟ್ರಸ್ಟ್​​ ಮಾಹಿತಿ ನೀಡಿದೆ.

ಮತ ಹಾಕುವ ಮೂಲಕ ರಾಮಲಲ್ಲಾನ ಮೂರ್ತಿಯನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಜನವರಿ 22ರಂದು ಈ ಮೂರ್ತಿಯನ್ನು ಪ್ರಾಣ ಪ್ರತಿಷ್ಠೆ ಮಾಡಲಾಗುವುದು. ಎಂಬಿಎ ಪದವೀಧರರಾಗಿರುವ ಅರುಣ್ ಯೋಗಿರಾಜ್, ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮ ಲಲ್ಲ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ ಎಂದು ಹೇಳಿದೆ.

ಮೈಸೂರಿನ ಅರುಣ್​ ಅವರೊಂದಿಗೆ ಬೆಂಗಳೂರಿನ ಜಿ.ಎಲ್.ಭಟ್ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೇ ಕೂಡ ಈ ರಾಮ ಲಲ್ಲ ಮೂರ್ತಿ ಕೆತ್ತನೆ ಮಾಡಿದ್ದಾರೆ. ಇದು 51 ಇಂಚು ಎತ್ತರದ ಮೂರ್ತಿಯಾಗಿದ್ದು, ಒಟ್ಟು ಮೂರ್ತಿಯ ಗಾತ್ರ 8 ಅಡಿ ಎತ್ತರ ಹಾಗೂ ಮೂರು ಅಡಿ ಅಗಲ ಇದೆ. ಈ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ.

ಜನವರಿ 22ರಂದು ಆಯೋಧ್ಯೆ ರಾಮ ಮಂದರದಲ್ಲಿ ಆಯೋಜನೆಗೊಂಡಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ 2 ಸಾವಿರ ಆಹ್ವಾನಿತರಲ್ಲಿ ಅರುಣ್​ ಸಹ ಒಬ್ಬರು. ಎಂಬಿಎ ಪದವೀಧರರಾಗಿರುವ ಅರುಣ್ ಕಾರ್ಪೋರೇಟ್ ನೌಕರಿಯನ್ನು ತೊರೆದು ಕುಟುಂಬ ನಡೆಸಿಕೊಂಡು ಬಂದ ಶಿಲ್ಪ ಕೆತ್ತನೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2008ರಿಂದ ಈವರೆಗೂ ಸುಮಾರು 1 ಸಾವಿರಕ್ಕೂ ಹೆಚ್ಚು ವಿವಿಧ ಪ್ರತಿಮೆಗಳನ್ನು ಕತ್ತನೆ ಮಾಡಿದ್ದಾರೆ. ಈ ಮೊದಲು ಕೇದರನಾಥ ದೇಗುಲಕ್ಕೆ ಆದಿ ಶಂಕರಾಚಾರ್ಯರ ಮೂರ್ತಿಯನ್ನು ನಿರ್ಮಿಸಿದ್ದರು. ದೆಹಲಿಯ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾದ ಸುಭಾಶಚಂದ್ರ ಬೋಸ್ ಅವರ ಪ್ರತಿಮೆಯನ್ನು ಸಹ ಕೆತ್ತಿದ್ದು ಮೈಸೂರಿಗನೇ, ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಮಲಲ್ಲಾ ವಿಗ್ರಹವನ್ನು ಕೆತ್ತನೆ ಮಾಡಿರುವ ಬಗ್ಗೆ ಖಾಸಗಿ ವಾಹಿನಿ ಜೊತೆ ಮಾತನಾಡಿರುವ ಅರುಣ್, ರಾಮಲಲ್ಲಾ ಕಲ್ಲಿನ ವಿಗ್ರಹ ಕೆತ್ತನೆಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಸಂತಸ ಹಂಚಿಕೊಂಡಿದ್ದಾರೆ.

ಏನಿದು ರಾಮಲಲ್ಲಾ ವಿಗ್ರಹ! : ಇದೇ ಜನವರಿ 22 ರಂದು ಅಯೋಧ್ಯಾ ರಾಮಮಂದಿರದಲ್ಲಿ ಅತ್ಯಾಕರ್ಷಕವಾದ ರಾಮಲಲ್ಲಾನ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ರಾಮ ಬಾಲಕನಿದ್ದಾಗಿನ ಪರಿಕಲ್ಪನೆಯಲ್ಲಿ ಈ ವಿಗ್ರಹ ಇರುತ್ತದೆ. 51 ಇಂಚಿನ ಈ ಕಲ್ಲಿನ ವಿಗ್ರಹದಲ್ಲಿ ಶ್ರೀ ರಾಮನ ಬಾಲ್ಯದ ಸ್ವರೂಪ, ಶ್ರೀ ರಾಮನ ಮುಗ್ದತೆ, ತುಂಟತನದ ಜೊತೆಗೆ ಗಾಂಭೀರ್ಯತೆ ಸಹಾ ಇರಲಿದೆ. ಮತ್ತು ಶ್ರೀರಾಮ ಪ್ರಭು ಪುಟ್ಟ ಬಾಲಕನಾಗಿ ಧನುರ್ದಾಯಿಯೊಂದಿಗೆ ಕಾಣಿಸಿಕೊಳ್ಳಲಿದ್ದಾನೆ.

ಯಾರಿದು ಅರುಣ್ ಯೋಗಿರಾಜ್: ಅರುಣ್ ಯೋಗಿರಾಜ್ ಮೂಲತಃ ಮೈಸೂರಿನವರು. ಕಲ್ಲಿನ ವಿಗ್ರಹ ಶಿಲ್ಪದಲ್ಲಿ 200 ವರ್ಷಗಳ ತಲೆಮಾರಿನ ಪರಂಪರೆ ಇವರದ್ದಾಗಿದೆ. ಬರೋಬ್ಬರಿ ಐದು ತಲೆ ಮಾರಿನಿಂದ ಕಲ್ಲಿನ ಶಿಲ್ಪ ಕಲೆ ಕೆತ್ತನೆಯಲ್ಲಿ ಇವರ ವಂಶಸ್ಥರು ತೊಡಗಿಕೊಂಡಿದ್ದಾರೆ. ಅರುಣ್‌ ಅವರ ಅಜ್ಜ ಬಸವಣ್ಣ ಶಿಲ್ಪಿ ಮೈಸೂರು ರಾಜರ ಆಸ್ತಾನದಲ್ಲಿದ್ದರು.

ಎಂಬಿಎ ಮುಗಿಸಿದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಆ ಕೆಲದ ತೃಪ್ತಿ ನೀಡಲಿಲ್ಲ. ನಂತರ ಅವರಿಗೆ ಅನಿಸಿದ್ದು ತಮ್ಮ ಪೂರ್ವಜರ ಕಲೆಯನ್ನು ಮುಂದುವರಿಸಬೇಕು ಎಂದು. ಇದಕ್ಕೆ ಒಪ್ಪದ ಅವರ ತಂದೆ ಒಂದು ಷರತ್ತಿನೊಂದಿಗೆ ಅನುಮತಿ ನೀಡಿದರು. ನೀನು ಎಂಬಿಎ ಪದವೀಧರ. ಕೆತ್ತನೆಯು ಶ್ರದ್ದಾ ಭಕ್ತಿಯ ಕೆಲಸ. ಇಲ್ಲಿ ನೀನು ಮಾರ್ಕೆಟಿಂಗ್ ಮಾಡುವುದಾದರೆ ಸುತಾರಾಂ ಬರಬೇಡ. ಕಲ್ಲಿನ ವಿಗ್ರಹಗಳ ಖರೀದಿ ಮಾರಾಟಕ್ಕೆ ಇಲ್ಲಿ ಅವಕಾಶವಿಲ್ಲ. ಇಲ್ಲೇನಿದ್ದರು ಕಲಾಸೇವೆ ಅಷ್ಟೇ ಅಂತಾ ಕಡ್ಡಿ ತುಂಡಾದ ರೀತಿ ಷರತ್ತು ವಿಧಿಸಿದ್ದರು. ಅದಕ್ಕೆ ಒಪ್ಪಿದ ಅರುಣ್ ಯೋಗಿರಾಜ್ 2008ರಿಂದ ಮತ್ತೆ ಶಿಲ್ಪ ಕೆತ್ತನೆ ವೃತ್ತಿಗೆ ಮುಡುಪಾಗಿರಿಸಿಕೊಂಡಿದ್ದಾರೆ.

ಅರುಣ್ ಯೋಗಿರಾಜ್ ಅವರು ದೇಗುಲಗಳಿಗೆ ಭಗವಾನ್ ಪಂಚಮುಖಿ ಗಣಪತಿ, ಭಗವಾನ್ ಮಹಾವಿಷ್ಣು, ದೇವರು ಬುದ್ಧ, ನಂದಿ, ಸ್ವಾಮಿ ಶಿವಬಾಲ ಯೋಗಿ, ಸ್ವಾಮಿ ಶಿವಕುಮಾರ ಮತ್ತು ಬನಶಂಕರಿ ದೇವಿಯ ವಿಗ್ರಹಗಳನ್ನು ಕೆತ್ತನೆ ಮಾಡಿ ನೀಡಿದರು.

ಇದಾದ ನಂತರ ಮೈಸೂರಿನಲ್ಲಿ 5 ಅಡಿಯ ಗರುಡ ದೇವರ ವಿಗ್ರಹ. ಕೆಆರ್ ನಗರದಲ್ಲಿ 7 ಅಡಿ ಎತ್ತರದ ಯೋಗಾನರಸಿಂಹ ಸ್ವಾಮಿ ದೇವರ ವಿಗ್ರಹ, ಭಾರತದ ಅತಿ ದೊಡ್ಡ 10 ಅಡಿ ಏಕಶಿಲೆಯ ಬಿಳಿ ಅಮೃತಶಿಲೆಯ ಶ್ರೀ ರಾಮಕೃಷ್ಣ ಪರಮಹಂಸರ ಶಿಲ್ಪ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ “ಕ್ರಿಯೇಶನ್ ಆಫ್ ಕ್ರಿಯೇಶನ್” ಪರಿಕಲ್ಪನೆಯಲ್ಲಿ 11 ಅಡಿ ಏಕಶಿಲೆಯ ಆಧುನಿಕ ಕಲಾ ಕಲ್ಲಿನ ಶಿಲ್ಪ, 15 ಅಡಿ ಏಕಶಿಲೆಯ ಬಿಳಿ ಅಮೃತಶಿಲೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಪೀಠದೊಂದಿಗೆ ಮೈಸೂರಿನ ಶಿಲ್ಪ, 15 ಅಡಿ ಏಕಶಿಲೆಯ ಬಿಳಿ ಅಮೃತಶಿಲೆಯ ಡಾ.ಬಿ.ಆರ್. ಅಂಬೇಡ್ಕರ್ ಅವರ ಪೀಠದೊಂದಿಗಿನ ಶಿಲ್ಪ, ಕೆ.ಆರ್.ನಗರದ ಚುಂಚಕಟ್ಟೆಯಲ್ಲಿ 21 ಅಡಿ ಏಕಶಿಲೆಯ ಹನುಮಾನ್ ಹೊಯ್ಸಳ ಶೈಲಿ ಶಿಲ್ಪ ಇವರ ಕೈ ಚಳಕದಲ್ಲಿ ಅದ್ಬುತವಾಗಿ ಮೂಡಿಬಂದವು.

ಅರುಣ್‌ ಇದಲ್ಲದೇ ಉತ್ತರಾಖಂಡದ ಕೇದಾರನಾಥದಲ್ಲಿ 12 ಅಡಿಯ ಆದಿ ಶಂಕರಾಚಾರ್ಯರ ವಿಗ್ರಹ ಹಾಗೂ 28 ಅಡಿ ಏಕಶಿಲೆಯ ಕಪ್ಪು ಗ್ರಾನೈಟ್ ಕಲ್ಲಿನ ಸುಭಾಷ್ ಚಂದ್ರ ಬೋಸ್ ಅವರ ಕಲಾಕೃತಿಗಳು. ಈ ಕಲಾಕೃತಿಗಳನ್ನು ಖುದ್ದು ದೇಶದ ಪ್ರಧಾನಿ ಮೆಚ್ಚಿ ಅನಾವರಣಗೊಳಿಸಿದರು‌. ಇದೀಗ ರಾಮಲಲ್ಲಾ ಅರುಣ್ ಅವರ ಹ್ಯಾಟ್ರಿಕ್ ಕಲಾಕೃತಿಯಾಗಲಿದೆ‌.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ