Mysore
24
overcast clouds

Social Media

ಬುಧವಾರ, 05 ಆಗಸ್ಟ್ 2026
Light
Dark

ತಿರುಮಲದಲ್ಲಿ ಬಾಲಕಿಯನ್ನು ಕೊಂದಿದ್ದ ಚಿರತೆ ಸೆರೆ

ತಿರುಪತಿ : ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಪ್ರಸಿದ್ಧ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ ಆರು ವರ್ಷದ ಬಾಲಕಿಯನ್ನು ಕೊಂದಿದ್ದ ಚಿರತೆ ಕೊನೆಗೂ ಸೆರೆಯಾಗಿದೆ.

ಇದೇ ಆಗಸ್ಟ್ 12ರ ಶುಕ್ರವಾರ ರಾತ್ರಿ 7.30ರಿಂದ 8ರ ವೇಳೆ ಲಕ್ಷಿತಾ (6) ಎಂಬ ನೆಲ್ಲೂರು ಮೂಲದ ಬಾಲಕಿ ತನ್ನ ಪೋಷಕರೊಂದಿಗೆ ತಿಮ್ಮಪ್ಪನ ದರ್ಶನಕ್ಕೆಂದು ಬಂದಿದ್ದಳು. ತಿರುಮಲಕ್ಕೆ ಕಾಲ್ನಡಿಗೆ ಮೂಲಕ ಹೊರಟಿದ್ದರು. ಲಕ್ಷಿತಾ ಪೋಷಕರಿಗಿಂತ ಮುಂದೆ ನಡೆಯುತ್ತ ಸಾಗಿದ್ದಳು. ಸ್ವಲ್ಪ ಹೊತ್ತಿನ ಬಳಿಕ ಬಾಲಕಿ ಕಣ್ಮರೆಯಾದ ಕಾರಣ ಆತಂಕಕ್ಕೊಳಗಾದ ಪೋಷಕರು ಹುಡುಕಾಟ ಆರಂಭಿಸಿದ್ದರು. ಬಾಲಕಿಯನ್ನು ಚಿರತೆ ಹೊತ್ತೊಯ್ದಿತ್ತು.

ಕೊನೆಗೆ ಟಿಟಿಡಿ ಜಾಗೃತ ದಳ ಮತ್ತು ಭದ್ರತಾ ಸಿಬಂದಿ, ಸ್ಥಳೀಯ ಪೊಲೀಸರು, ಅರಣ್ಯ ಇಲಾಖೆ ಸಿಬಂದಿ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದು, ಬೆಳಗಿನ ಜಾವ 4 ಗಂಟೆಗೆ ನರಸಿಂಹ ಸ್ವಾಮಿ ದೇಗುಲದ ಸಮೀಪದಲ್ಲಿ ಮೃತದೇಹ ಪತ್ತೆಯಾಗಿದೆ. ದೇಹದಲ್ಲಿ ಪ್ರಾಣಿ ದಾಳಿಯ ಗಾಯದ ಗುರುತುಗಳು ಕಂಡುಬಂದಿವೆ. ಈ ಘಟನೆ ಬೆನ್ನಲ್ಲೇ ಕಾರ್ಯಾಚರಣೆ ಆರಂಭಿಸಿದ್ದ ಟಿಟಿಡಿ ಸಿಬ್ಬಂದಿ ಮತ್ತು ಅರಣ್ಯ ಇಲಾಖೆ ಇಂದು ಬಾಲಕಿಯನ್ನು ಕೊಂದಿದ್ದ ಚಿರತೆಯನ್ನು ಸೆರೆ ಹಿಡಿದಿದ್ದಾರೆ.

ಚಿರತೆ ಸೆರೆ ಹಿಡಿಯಲು ಟಿಟಿಡಿ ಅಧಿಕಾರಿಗಳು ಅಲಿಪಿರಿ ನಡಿಗೆ ಮಾರ್ಗದಲ್ಲಿ ಬೋನುಗಳನ್ನು ಇರಿಸಿದ್ದರು. ಕಳೆದ ರಾತ್ರಿ ಈ ಮಾರ್ಗದಲ್ಲಿ ಸಂಚರಿಸಿದ ಚಿರತೆ ಬೋನಿಗೆ ಬಿದ್ದಿದೆ. ಕಳೆದ ಎರಡು ದಿನಗಳಲ್ಲಿ ಐದು ಪ್ರದೇಶಗಳಲ್ಲಿ ಚಿರತೆ ಸಂಚರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಮಲ ಬಾವಿ ಹತ್ತಿರದ ಪಬ್ಲಿಕ್ ವ್ಯೂ ಪಾಯಿಂಟ್ ಬಳಿ ಚಿರತೆ ಬೋನಿಗೆ ಬಿದ್ದಿದೆ. ಎಂದು ಟಿಟಿಡಿ ಇಒ ಧರ್ಮಾರೆಡ್ಡಿ ಹೇಳಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!