Mysore
22
broken clouds

Social Media

ಮಂಗಳವಾರ, 25 ಆಗಸ್ಟ್ 2026
Light
Dark

ಮುಜರಾಯಿ ಇಲಾಖೆಯಿಂದ ಕಾಶಿ ಯಾತ್ರೆಗಾಗಿ ವಿಶೇಷ ರೈಲು

ಬೆಂಗಳೂರು : ಕಾಶಿಯಾತ್ರೆಗಾಗಿ ರಾಜ್ಯದ ಮುಜರಾಯಿ ಇಲಾಖೆಯಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆಯ ನಾಲ್ಕನೇ ರೈಲಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟಿರುವ ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆ ರೈಲು ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ದರ್ಶನ ಮಾಡಲಿರುವ ಯಾತ್ರಿಗಳನ್ನು ಕರೆದೊಯ್ಯಲಿದೆ. ಒಟ್ಟು 8 ದಿನಗಳ ಕಾಶಿ ಪ್ರವಾಸಕ್ಕೆ ಒಬ್ಬರಿಗೆ 20 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಇದರಲ್ಲಿ ಸಬ್ಸಿಡಿ 5 ಸಾವಿರ ರೂ. ಸರ್ಕಾರದಿಂದ ಸಿಗಲಿದೆ. ಅಂದರೆ ಒಬ್ಬರಿಗೆ 15 ಸಾವಿರ ರೂ. ಖರ್ಚು ಪ್ರಯಾಣಿಕರಿಗೆ ಬರಲಿದೆ. ಊಟ, ವಸತಿ ವ್ಯವಸ್ಥೆ ಸಹ ಇರಲಿದೆ. 700 ಸೀಟ್ ಸಾಮಥ್ರ್ಯ ಹೊಂದಿರುವ ರೈಲಿನಲ್ಲಿ ಸದ್ಯ 403 ಸೀಟ್ ಬುಕ್ಕಿಂಗ್ ಆಗಿವೆ.

ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ತಲುಪಲು ಎರಡು ದಿನ ಆಗಲಿದೆ. ವಾರಣಾಸಿಗೆ ತಲುಪಿದ ಬಳಿಕ ಗಂಗಾ ಸ್ನಾನ, ತುಳಸಿ ಮಂದಿರ ದರ್ಶನ, ಶ್ರೀ ಹನ್ಮಾನ್ ದರ್ಶನ, ಕಾಶಿ ವಿಶ್ವನಾಥ ದರ್ಶನ ಪಡೆದ ಬಳಿಕ ಒಂದು ದಿನ ಕಾಶಿಯಲ್ಲಿ ತಂಗುವುದು. ಬಳಿಕ 5ನೇ ದಿನ ವಾರಣಾಸಿಯಿಂದ ಆಯೋಧ್ಯೆಗೆ ತೆರಳುವುದು. ಇಲ್ಲಿ ಶ್ರೀರಾಮ ಭೂಮಿ ದರ್ಶನ ಮಾಡಿ, ಸಂಜೆ ಸರಾಯು ಆರತಿ ವೀಕ್ಷಣೆ ಮಾಡುವುದು. ಸಂಜೆಯ ಬಳಿಕ ಪ್ರಯಾಗ್ ರಾಜ್‍ಗೆ ಪ್ರಯಾಣ, 6ನೇ ದಿನ ಪ್ರಯಾಗ್ ರಾಜ್ ತಲುಪುವ ರೈಲು ತಲುಪಲಿದೆ. ಬಳಿಕ ತ್ರಿವೇಣಿ ಸಂಗಮ ಸ್ನಾನ, ಶ್ರೀ ಹನುಮಾನ್ ಮಂದಿರ ದರ್ಶನ ಇರಲಿದೆ. ಬಳಿಕ ಅದೇ ದಿನ ಪ್ರಯಾಗ್ ರಾಜ್‍ನಿಂದ ಬೆಂಗಳೂರಿಗೆ ರೈಲು ಹೊರಡಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮುಜರಾಯಿ ಸಚಿವ ರಾಮಲಿಂಗರೆಡ್ಡಿಯವರು, ಹಿಂದೆ ಮೂರು ಟ್ರಿಪ್ ಆಗಿದೆ. ಇದು ನಾಲ್ಕನೇ ಟ್ರಿಪ್, ಈ ಬೋಗಿಗಳು ರಾಜ್ಯ ಸರ್ಕಾರದ್ದಾಗಿದ್ದು, ರಾಜ್ಯ ಸರ್ಕಾರವೇ ಹಣ ಕೊಟ್ಟು ಮಾಡಿಸಿದೆ. ಮುಂದೆ ಬೇರೆ ಭಾಗಗಳಿಗೂ ಈ ಬೋಗಿಗಳನ್ನು ಬಳಕೆ ಮಾಡಲಾಗುತ್ತದೆ. ಪ್ರವಾಸದ ವೇಳೆ ಊಟದ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಿವೆ. ರೈಲಿನಲ್ಲಿ ರಾಜ್ಯ ಆರೋಗ್ಯ ಇಲಾಖೆಯ ಇಬ್ಬರು ವೈದ್ಯರು ಇರಲಿದ್ದಾರೆ. ಆಗಸ್ಟ್ 15ಕ್ಕೆ ಮತ್ತೆ 5ನೇ ಕಾಶಿಯಾತ್ರೆ ಆರಂಭವಾಗಲಿದೆ ಎಂದಿದ್ದಾರೆ.

ಈ ವಿಶೇಷ ರೈಲಿಗೆ ದಾವಣಗೆರೆ, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗದಲ್ಲಿ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!