ನೆನ್ನೆಯಷ್ಟೇ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಮನೆಗೆ ಹೋದ ಮೊದಲ ದಿನವೇ ಸಾಕಷ್ಟು ಸುದ್ದಿ ಮಾಡಿದ್ದರು ಪ್ರದೀಪ್ ಈಶ್ವರ್. ಹಲವು ದಿನಗಳ ಕಾಲ ಸ್ಪರ್ಧಿಯಾಗಿಯೇ ಅವರು ಮನೆಯಲ್ಲಿ ಉಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಹೋದದ್ದು ಅತಿಥಿಯಾಗಿ ಎನ್ನುವುದು ಈಗ ಗೊತ್ತಾಗಿದೆ.
ಚಿಕ್ಕಬಳ್ಳಾಪುರದ ಜನಪ್ರಿಯ ಶಾಸಕ ಎಂದೇ ಖ್ಯಾತರಾಗಿರುವ ಪ್ರದೀಪ್ ಈಶ್ವರ್ ಅಚ್ಚರಿ ಎನ್ನುವಂತೆ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಇವರು ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಎರಡು ದಿನ ಕಾಯಿರಿ ನೋಡೋಣ ಎಂದಷ್ಟೇ ಅವರು ಹೇಳಿ ಅಚ್ಚರಿ ಮೂಡಿಸಿದ್ದರು. ಕೊನೆಗೂ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.
ಅನಾಥ ಮಕ್ಕಳಿಗಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿರುವುದಾಗಿ ಹೇಳಿದ್ದಾರೆ. ಬಿಗ್ ಬಾಸ್ ನಿಂದ ಬಂದ ಹಣವನ್ನು ಅಪ್ಪ ಅಮ್ಮನಿಲ್ಲದ ಮಕ್ಕಳಿಗೆ ನೀಡಲು ನಿರ್ಧಾರ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ, ಪ್ರದೀಪ್ ಈಶ್ವರ್ ಬಿಗ್ ಬಾಸ್ ಗೆ ಹೋಗಿರೋ ವಿಚಾರವನ್ನು ಹಲವರು ಪ್ರಶ್ನೆ ಮಾಡಿದ್ದಾರೆ. ಸರ್ಕಾರಕ್ಕೆ ಸಾಮಾನ್ಯರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಜನಪ್ರತಿನಿಧಿಯಾಗಿ ಇಂತಹ ವೇಳೆಯಲ್ಲಿ ರಿಯಾಲಿಟಿ ಶೋಗೆ ಹೋಗಬಹುದಾ ಎಂದು ಹಲವರು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಿದ್ದಾರೆ.
ಎಲ್ಲ ಸ್ಪರ್ಧಿಗಳನ್ನು ಸುದೀಪ್ ಶನಿವಾರವೇ ದೊಡ್ಮನೆ ಒಳಗೆ ಕಳುಹಿಸಿದ್ದರೆ, ಒಂದು ದಿನ ತಡವಾಗಿ ಪ್ರದೀಪ್ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಡೊಳ್ಳು ಕುಣಿತ ಮೂಲಕ ಅವರಿಗೆ ಬಿಗ್ ಬಾಸ್ ಮನೆಗೆ ಸ್ವಾಗತ ಮಾಡಿದ್ದಾರೆ. ಪ್ರದೀಪ್ ಅವರನ್ನು ಕಂಡು ದೊಡ್ಮನೆ ಸದಸ್ಯರು ಕುಣಿದು ಕುಪ್ಪಳ್ಳಿಸಿದ್ದಾರೆ. ಅವರೊಂದಿಗೆ ಪ್ರದೀಪ್ ಕೂಡ ಡಾನ್ಸ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರದೀಪ್ ಈಶ್ವರ್ ಕಂಡು ಸ್ಪರ್ಧಿಗಳು ಅಚ್ಚರಿ ವ್ಯಕ್ತ ಪಡಿಸಿದರು. ತುಕಾಲಿ ಸಂತು,ನಾವು ಒಬ್ಬ ಎಂ.ಎಲ್.ಎ ಜೊತೆ ಸ್ಪರ್ಧೆ ಮಾಡಬೇಕು ಎಂದು ಮಾತನಾಡಿದರೆ, ಅದಕ್ಕೆ ಪ್ರದೀಪ್, ನಾವು ಸೋಲಬೇಕು ಅಂತಾನೆ ಬೆಂಗಳೂರಿಗೆ ಬಂದವನು ಎಂದು ಉತ್ತರಿಸಿದ್ದಾರೆ. ಪ್ರದೀಪ್ ಈಶ್ವರ್ ಮನೆಗೆ ಬಂದಿರುವುದು ಹೊಸ ಕಳೆ ಬಂದಂತಾಗಿದೆ. ಒಬ್ಬ ಜನಪ್ರತಿನಿಧಿ ಎಷ್ಟು ದಿನ ಆ ಮನೆಯಲ್ಲಿ ಉಳಿಯಬಹುದು ಎನ್ನುವುದೇ ಅಚ್ಚರಿ.