Mysore
29
scattered clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ : ಅಪಾಯದಿಂದ ಪಾರು

ಕೋಲ್ಕತಾ : ಸಾರ್ವಜನಿಕ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್ ತುರ್ತುು ಭೂಸ್ಪರ್ಶ ಮಾಡಲಾಗಿದೆ. ಬಗ್‌ದೋಗ್ರಾಗೆ ತೆರಳುತ್ತಿದ್ದ ವೇಳೆ ಹವಾಮಾನ ವೈಪರಿತ್ಯ ಉಂಟಾಗಿದೆ. ಹೀಗಾಗಿ ಹೆಲಿಕಾಪ್ಟರ್‌ನ್ನು ಸೆವೋಕ್ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಹವಾಮಾನ ವೈಪರಿತ್ಯದಿಂದ ಸ್ಪಷ್ಟ ಗೋಚರತೆ ಸಮಸ್ಯೆ ಎದುರಾಗಿದೆ. ಮಮತಾ ಬ್ಯಾನರ್ಜಿ ಸುರಕ್ಷಿತವಾಗಿದ್ದಾರೆ. ಸೆವೋಕ್ ವಾಯು ನೆಲೆಯಿಂದ ಮಮತಾ ಬ್ಯಾನರ್ಜಿ ರಸ್ತೆ ಮಾರ್ಗದ ಮೂಲಕ ತೆರಳಿದ್ದಾರೆ.

ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡ್ ಮಾಡಲಾಗಿದೆ. ಗೋಚರತೆ ಸಮಸ್ಯೆ ಎದುರಾಗಿತ್ತು. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಸೇವೋಕ್ ವಾಯುನೆಲೆಯಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಗಿದೆ. ಮಮತಾ ಬ್ಯಾನರ್ಜಿ ಸುರಕ್ಷಿತವಾಗಿದ್ದಾರೆ ಎಂದು ಟಿಎಂಸಿ ನಾಯಕ ರಾಜೀಬ್ ಬ್ಯಾನರ್ಜಿ ಹೇಳಿದ್ದಾರೆ.

ಜಲ್ಪೈಗುರಿಯ ಕ್ರಿಂತಿ ಬಳಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಮತಾ ಬ್ಯಾನರ್ಜಿ ಅಲ್ಲಿಂದ ಬಗ್‌ದೋಗ್ರಾಗೆ ಹೆಲಿಕಾಪ್ಟರ್ ಮೂಲಕ ತೆರಳಿದ್ದಾರೆ. ಈ ವೇಳೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇದೀಗ ರಸ್ತೆ ಮಾರ್ಗದ ಮೂಲಕ ಮಮತಾ ಬ್ಯಾನರ್ಜಿ ಪ್ರಯಾಣ ಮುಂದುವರಿಸಿದ್ದಾರೆ. ಇಂದು ಸಂಜೆ ವೇಳೆಗೆ ಕೋಲ್ಕತಾಗೆ ಮರಳಲಿದ್ದಾರೆ.

ಕಳೆದ ಮೂರು ವಾರ ಪಶ್ಚಿಮ ಬಂಗಾಳದ ಬಹುತೇಕ ಕಡೆ ಬಿಸಿಗಾಳಿ ಸಮಸ್ಯೆ ತಂದಿತ್ತು. ಇದೀಗ ಈಶಾನ್ಯ ಭಾರತದಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇತ್ತ ಬಂಗಾಳಕ್ಕೆ ಮುಂಗಾರು ಪ್ರವಶಿಸಿದೆ. ಹೀಗಾಗಿ ಇನ್ನೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಹವಾಮಾನ ವೈಪರಿತ್ಯವಾಗಿದೆ.

ಇತ್ತೀಚೆಗೆ ಬಿಹಾರ ಪಾಟ್ನಾದಲ್ಲಿ ನಡೆದ ವಿಪಕ್ಷಗಳ ಮೈತ್ರಿ ಸಭೆಯಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಬೃಹತ್ ಮೈತ್ರಿಗೆ ಮೊದಲ ಸಭೆ ನಡೆದಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಮಮತಾ ಬ್ಯಾನರ್ಜಿ ಒಗ್ಗಟ್ಟಿನ ಮಂತ್ರ ಪಠಿಸಿದ್ದರು. ಆದರೆ ಬಂಗಾಳ ಹಿಂತುರಿಗಿದ ಬಳಿಕ ಕಾಂಗ್ರೆಸ್ ಹಾಗೂ ಸಿಪಿಎಂ ವಿರುದ್ದ ಆಕ್ರೋಶ ಹೊರಹಾಕಿದ್ದರು. ಈ ಮೂಲಕ ಮಹಾ ಮೈತ್ರಿ ಬುಡ ಅಲುಗಾಡತೊಡಗಿದೆ. ಬಂಗಾಳದಲ್ಲಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ಬೃಹತ್‌ ಮೈತ್ರಿಕೂಟ ಕಟ್ಟುವ ತಮ್ಮ ಭಾರೀ ಯತ್ನಕ್ಕೆ ರಾಜ್ಯದಲ್ಲಿ ಕೆಲ ಪಕ್ಷಗಳ ಒಳಮೈತ್ರಿ ಅಡ್ಡಿ ಮಾಡಿದೆ. ಈ ಕುತಂತ್ರವನ್ನು ತಾವು ಬಯಲಿಗೆಳೆಯುವುದಾಗಿ ಸಿಪಿಎಂ ಮತ್ತು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ಇತ್ತ ಪಂಚಾಯತ್ ಚುನಾವಣೆಯಲ್ಲೂ ಹಿಂಸಾಚಾರ ನಡೆದಿದ್ದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ಕುರಿತು ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಗಲಭೆ, ಹಿಂಸಾಚಾರವಿಲ್ಲದೆ ನೆಟ್ಟಗೆ ಒಂದು ಚುನಾವಣೆ ಮಾಡಲು ಸಾಧ್ಯವಿಲ್ಲವೇ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ. ಪಂಚಾಯತ್ ಚುನಾವಣೆಯ ಹಿಂಸಾಚಾರಕ್ಕೆ ಹಲವರು ಬಲಿಯಾಗಿದ್ದಾರೆ. ಈ ಘಟನೆ ಪಶ್ಚಿಮ ಬಂಗಾಳದಲ್ಲಿನ ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!