ಬೆಂಗಳೂರು: ಮದ್ಯದ ದರವನ್ನು ಹೆಚ್ಚಳ ಮಾಡುವ ಪ್ರಸ್ತಾಪ ನಮ್ಮ ಇಲಾಖೆಯ ಮುಂದಿಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮದ್ಯದ ದರ ಹೆಚ್ಚಳದ ಬಗ್ಗೆ ಮಾಹಿತಿ ಇಲ್ಲ. ಇದುವರೆಗೂ ದರ ಹೆಚ್ಚಳ ಮಾಡಲಾಗಿಲ್ಲ. ಈ ಸಂಬಂಧ ಅಬಕಾರಿ ಇಲಾಖೆಯಿಂದ ಯಾವುದೇ ಸೂಚನೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.
ಆರ್ಥಿಕ ಇಲಾಖೆ, ಪಾನಿಯಾ ನಿಗಮದಿಂದಲೂ ಮದ್ಯದ ದರ ಏರಿಕೆ ಹಾಗೂ ಪ್ರಸ್ತಾಪ ಬಂದಿಲ್ಲ ಎಂದು ಅವರು ಹೇಳಿದರು.
ಅಬಕಾರಿ ಇಲಾಖೆಯಿಂದ ಯಾವುದೇ ದರ ಏರಿಕೆ ಮಾಡಿಲ್ಲ. ನನಗೆ ಮಾಹಿತಿಯೂ ಇಲ್ಲ. ದರ ಏರಿಕೆ ಇದುವರೆಗೂ ಆಗಿಲ್ಲ. ಪರಿಶೀಲನೆ ಮಾಡಿ ಹೇಳುತ್ತೇನೆ ಎಂದು ಹೇಳಿದರು. ಕಳೆದ ಒಂದು ವಾರದಿಂದ ಬಿಯರ್ ದರ 20 ರೂ. ಜಾಸ್ತಿ ಆಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೇಕಾದರೆ ನಾವು ವಾಸ್ತವ ಪರಿಶೀಲನೆ ಮಾಡುತ್ತೇವೆ. ದರ ಏರಿಕೆ ಮಾಡಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು..
ರಾಜ್ಯದಲ್ಲಿ ಇತ್ತೀಚೆಗಷ್ಟೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಒಂದೆಡೆ ತಾವು ಘೋಷಣೆ ಮಾಡಿದ್ದ ಐದು ಯೋಜನೆಗಳಲ್ಲಿ ಒಂದೊಂದನ್ನೇ ಜಾರಿ ಮಾಡುತ್ತಿದ್ದರೆ, ಇನ್ನೊಂದೆಡೆ ವಿದ್ಯುತ್ ಬಿಲ್ ಹೆಚ್ಚಳ ಹಾಗೂ ಮದ್ಯದ ದರ ಹೆಚ್ಚಳ ಮಾಡಿದೆ ಎನ್ನುವ ದೂರುಗಳಿವೆ. ವಾರದ ಹಿಂದೆ ಮಹಿಳೆಯರಿಗೆ ಉಚಿತ್ ಬಸ್ ಸಂಚಾರ ಸೇವೆ ಪ್ರಾರಂಭಿಸಿದ್ದ ಸರ್ಕಾರ ಜೊತೆ ಜೊತೆಗೆ ಮದ್ಯಪ್ರಿಯರಿಗೆ ದರ ಏರಿಕೆ ಮಾಡುವ ಮೂಲಕ ಶಾಕ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರ ಶೇ 20ರಷ್ಟು ಮದ್ಯದ ಬೆಲೆ ಏರಿಕೆ ಮಾಡಿದೆ. ಬಿಯರ್ಗೆ 10 ರೂ ಏರಿಕೆಯಾಗಿದೆ. ಇನ್ನುಳಿದ ಮದ್ಯದ ವಿವಿಧ ಬ್ರ್ಯಾಂಡ್ಗಳಿಗೆ ಬೇರೆ ಬೇರೆ ರೀತಿಯಲ್ಲಿ ದರ ಹೆಚ್ಚಳ ಮಾಡಿದೆ. ಬಿಯರ್ ಮೇಲೆ ಶೇ 20 ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಸರ್ಕಾರ ತನ್ನ ಬೊಕ್ಕಸ ಭರ್ತಿ ಮಾಡಲು ಈ ರೀತಿಯ ಆದಾಯದ ದಾರಿ ಕಂಡುಕೊಂಡಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಮದ್ಯದ ಬೆಲೆ ಏರಿಕೆ ಮಾತ್ರವಲ್ಲದೆ, ಮದ್ಯದ ಲೈಸೆನ್ಸ್ ದರವನ್ನೂ ಸರ್ಕಾರ ಹೆಚ್ಚಳ ಮಾಡಿತ್ತು.
2016ರಿಂದ ಲಿಕ್ಕರ್ ಲೈಸನ್ಸ್ ದರ ಹೆಚ್ಚಳ ಮಾಡಿರಲಿಲ್ಲ. ಹಾಗಾಗಿ ಲಿಕ್ಕರ್ ಲೈಸನ್ಸ್ ಶುಲ್ಕವನ್ನು ಶೇ 25ರಷ್ಟು ಹೆಚ್ಚಳ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿತ್ತು. ಈಗಾಗಲೇ ಸರ್ಕಾರ ಮುಂದಿನ ವರ್ಷಕ್ಕೆ ಆದಾಯ ಟಾರ್ಗೆಟ್ ಮಾಡಿಕೊಂಡಿದ್ದು, ಅದನ್ನು ಗಳಿಸಲು ಸರ್ಕಾರ ಹಲವು ದಾರಿಗಳನ್ನು ಕಂಡುಕೊಳ್ಳುತ್ತಿದೆ. ಸರ್ಕಾರದ ಈ ದರ ಹೆಚ್ಚಳದ ನೀತಿಗೆ ಮದ್ಯಪ್ರಿಯರು ಹಾಗೂ ಮದ್ಯದ ಸಂಘಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅಬಕಾರಿ ಇಲಾಖೆ ಸಚಿವ ಆರ್.ಬಿ. ತಿಮ್ಮಾಪೂರ್ ಅವರು ತಮ್ಮ ಸರ್ಕಾರ ಮದ್ಯದ ಬೆಲೆಯನ್ನು ಹೆಚ್ಚಳ ಮಾಡಿಲ್ಲ ಎನ್ನುವ ಸ್ಪಷ್ಟನೆ ಕೊಟ್ಟಿದ್ದಾರೆ.