Mysore
20
overcast clouds
Light
Dark

ವೇದಿಕೆಯಲ್ಲಿ ಭೂ ಗಲಾಟೆ : ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

ಕೋಲಾರ : ಭೂ ಕಬಳಿಕೆ ವಿಷಯಕ್ಕೆ ಸಂಬಂಧಪಟ್ಟಂತೆ ಕೋಲಾರದ ಸಂಸದ ಮುನಿಸ್ವಾಮಿ ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಡುವೆ ಅವಾಚ್ಯ ಶಬ್ಧಗಳ ವಾಗ್ವಾದ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಹೋದ ಘಟನೆ ನಡೆದಿದೆ.

ರಾಜ್ಯಸರ್ಕಾರದ ಸೂಚನೆಯ ಮೇರೆಗೆ ಸೋಮವಾರ ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಜನತಾದರ್ಶನ ನಡೆಸುತ್ತಿದ್ದರು. ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕುಳಿತಿದ್ದರು. ಜನತಾದರ್ಶನದ ವೇಳೆ ತಡವಾಗಿ ಆಗಮಿಸಿದ ಸಂಸದ ಮುನಿಸ್ವಾಮಿ ಅವರು ಭೂಗಳ್ಳರನ್ನು ಪಕ್ಕದಲ್ಲೇ ಕೂರಿಸಿಕೊಂಡು ಯಾವ ರೀತಿ ನ್ಯಾಯ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.

ಇದರಿಂದ ಸಿಟ್ಟಿಗೆದ್ದ ಎಸ್.ಎನ್.ನಾರಾಯಣಸ್ವಾಮಿ ಸಂಸದರ ವಿರುದ್ಧ ವಾಗ್ಧಾಳಿ ನಡೆಸಿದರು. ಶಾಸಕರಿಗೆ ಗೌರವ ಕೊಟ್ಟು ಮಾತನಾಡುವುದನ್ನು ಕಲಿ, ಏನೆಂದುಕೊಂಡಿದ್ದೀಯ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಇದರಿಂದ ರೊಚ್ಚಿಗೆದ್ದ ಮುನಿಸ್ವಾಮಿ ಶಾಸಕರ ಮೇಲೇರಿ ಹೋಗಿದ್ದಲ್ಲದೆ, ಹಲ್ಲೆ ನಡೆಸುವ ರೀತಿ ವರ್ತಿಸಿದರು.

ತಕ್ಷಣವೇ ಮಧ್ಯಪ್ರವೇಶ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳು ಸೇರಿದಂತೆ ಇತರೆ ಸಿಬ್ಬಂದಿಗಳು ಸಂಸದ ಮುನಿಸ್ವಾಮಿಯವರನ್ನು ಹೊರಗೆ ಕರೆದುಕೊಂಡು ಹೋದರು. ಬಳಿಕ ಸಮಾಧಾನಪಡಿಸಲಾಯಿತು.
ನಂತರ ಮುಂದುವರೆದ ಜನತಾದರ್ಶನದಲ್ಲಿ ಸಚಿವರ ಮತ್ತೊಂದು ಪಕ್ಕದಲ್ಲಿ ಸಂಸದರು ಆಸೀನರಾದರು. ಇದಕ್ಕೂ ಮೊದಲು ಮಾತನಾಡಿದ ಸಂಸದರು, ನಾನು ನಾರಾಯಣಸ್ವಾಮಿ ಹೆಸರನ್ನು ಪ್ರಸ್ತಾಪಿಸಿ ಆರೋಪ ಮಾಡಲಿಲ್ಲ. ಭೂಗಳ್ಳರಿಂದ ಅನ್ಯಾಯವಾಗುತ್ತಿದೆ. ಒತ್ತುವರಿ ತೆರವು ಮಾಡಿ ಎಂದಷ್ಟೇ ಹೇಳಿದೆ. ನಾರಾಯಣಸ್ವಾಮಿ ತಮಗೆ ಹೇಳಿದ್ದು ಎಂದು ಭಾವಿಸಿ ಜಗಳಕ್ಕೆ ಬಂದಿದ್ದಾರೆ. ಬಂಗಾರಪೇಟೆ ಸೇರಿದಂತೆ ಹಲವಾರು ಕಡೆ ಬಡವರ ಭೂಮಿ ಒತ್ತುವರಿಯಾಗಿದೆ. ಅವರಿಗೆ ನ್ಯಾಯ ಕೊಡಿಸಬೇಕೆಂದು ತಾವು ಪ್ರಸ್ತಾಪಿಸಿದ್ದೇವೆ ಎಂದು ಹೇಳಿದರು.

ಸಂಸದರು ಮತ್ತು ಶಾಸಕರ ನಡುವೆ ಏಕವಚನ, ಅವಾಚ್ಯ ಶಬ್ಧಗಳ ಬಳಕೆ, ಗೂಂಡಾ ಮಾದರಿಯ ಹಲ್ಲೆ ಪ್ರಯತ್ನಜನತಾದರ್ಶನಕ್ಕೆ ಆಗಮಿಸಿದ್ದ ಸಾರ್ವಜನಿಕರನ್ನು ದಿಗ್ಭ್ರಾಂತರನ್ನಾಗುವಂತೆ ಮಾಡಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ