ಬೆಂಗಳೂರು : ಮೈಸೂರು ಸಂಸದರಾದ ಪ್ರತಾಪ್ ಸಿಂಹ ಅವರೇ ನಿಮ್ಮ ಬಾಯಿ ಚಪಲ ಸ್ವಲ್ಪ ಕಡಿಮೆ ಮಾಡಿಕೊಳ್ಳಿ. ನಾಲ್ಕು ದಿನಕ್ಕೆ ದೊಡ್ಡ ಯೋಜನೆಗಳನ್ನು ಜಾರಿಮಾಡಬೇಕು ಎಂದು ಕೇಳುತ್ತಿದ್ದೀರಾ? ನಿಮಗೆ ಕನಿಷ್ಠ ಪರಿಜ್ಞಾನವೂ ಇಲ್ಲವೇ ? ಎಂದು ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ಶನಿವಾರ ರಾಜಭವನದಲ್ಲಿ ನಡೆದ ರಾಜ್ಯ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಅವರು ಗ್ಯಾರಂಟಿ ಯೋಜನೆಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ಕನಿಷ್ಠ ಪರಿಜ್ಞಾನವೂ ಇಲ್ಲವೇ? : ಒಂದು ಸರ್ಕಾರ ಈಗ ತಾನೆಯೇ ಅಧಿಕಾರಕ್ಕೆ ಬಂದಿದೆ. ಆ ಸರ್ಕಾರದ ಸಚಿವ ಸಂಪುಟ ಈಗ ಸಿದ್ಧವಾಗುತ್ತಿದೆ. ಯಾವುದೇ ಯೋಜನೆ ಜಾರಿಗೊಳಿಸಬೇಕು ಎಂದರೂ ಸಚಿವ ಸಂಪುಟ ಅನುಮೋದನೆ ಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜಾರಿಗೆ ತಂದೇ ತರುತ್ತೇವೆ ಎಂದಿದ್ದಾರೆ. ಆದರೆ, ನಾಲ್ಕು ದಿನಕ್ಕೆ ಜಾರಿ ಮಾಡಬೇಕು ಎಂದು ಕೇಳುತ್ತಿರುವ ಚುನಾಯಿತ ಸದಸ್ಯರಾಗಿರುವ ಮೈಸೂರು ಸಂಸದರಾದ ಪ್ರತಾಪ್ ಸಿಂಹ ಅವರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲವೇ? “ಎಂದು ಪ್ರಶ್ನಿಸಿದರು.
ಬಾಯಿ ಚಪಲ ಕಡಿಮೆ ಮಾಡಿಕೊಳ್ಳಿ : ನಿಮ್ಮ ಬಾಯಿ ಚಪಲ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಪ್ರತಾಪ್ ಸಿಂಹ ಅವರೇ. ಸ್ಪಲ್ಪ ಸಮಯ ಬೇಕಿದೆ. ವಿರೋಧ ಪಕ್ಷವಾಗಿ ಏನೋ ಮಾತನಾಡಬೇಕು ಎಂದು ಮಾತನಾಡಬಾರದು. ಸಿದ್ದರಾಮಯ್ಯ ಅವರನ್ನು ಬೈದರೇ ಇವರು ಪ್ಯಾಪುರಲ್ ಆಗಿಬಿಡುತ್ತಾರೆ. ಹೀಗಾಗಿಯೇ, ಅದನ್ನು ಬಿಟ್ಟು ಇವರಿಗೆ ಏನು ಕೆಲಸ ಇಲ್ಲ ಎಂದು ಕಿಡಿಕಾರಿದರು.