ಮೈಸೂರು: 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಂಗಳವಾರ (ಏ.2) ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವಾಗಲೂ ಕೂಲ್ ಆಗಿದ್ದೇನೆ ಅದಕ್ಕಾಗಿಯೇ ನನಗೆ ಯಾವುದೇ ಟೆನ್ಷನ್ ಇಲ್ಲ. ಇದು ಕೂಡಾ ನನ್ನ ಆರೋಗ್ಯದ ಒಂದು ಗುಟ್ಟು. ಜನರು ಪ್ರೀತಿಯಿಂದ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ನಿವೃತ್ತಿ ಹೊಂದುವುದಾಗಿ ತೀರ್ಮಾನಿಸಿದ್ದೇನೆ. ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವರ್ಷ ವಯಸ್ಸಾಗಲಿದೆ. ಆನಂತರ ರಾಜಕೀಯದಲ್ಲಿ ಉತ್ಸಾಹ ಇರುವುದಿಲ್ಲ. ಜೊತೆಗೆ ನನ್ನ ದೇಹದ ಸ್ಥಿತಿ ಹೇಗಿರುತ್ತದೆ ಎಂಬುದು ನನಗೆ ಮಾತ್ರ ಗೊತ್ತಿದ್ದು, ಈ ಎಲ್ಲಾ ಕಾರಣದಿಂದಾಗಿ ರಾಜಕೀಯದಿಂದ ನಿವೃತ್ತಿ ಹೊಂದಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇನ್ನು ರಾಜ್ಯ ರಾಜಧಾನಿಯಲ್ಲಿ ಬರಗಾಲದಿಂದಾಗಿ ನೀರಿನ ಸಮಸ್ಯೆ ಉಂಟಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವ ಹಣದ ಸಮಸ್ಯೆ ಇಲ್ಲ. ಒಂದೆರಡು ಕಡೆ ಸಮಸ್ಯೆ ಇದ್ದರು ಅದನ್ನು ಬಗೆ ಹರಿಸುವಂತೆ ಹೇಳಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರ ಸಂಬಂಧ ಅಧಿಕಾರಿಗಳ ಸಭೆ ನಡೆಸಲು ಸಾಧ್ಯವಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.