ನಂಜನಗೂಡು : ನಾನು ತಂದೆ ತಾಯಿ ಇಬ್ಬರನ್ನ ಕಳೆದುಕೊಂಡಿದ್ದೇನೆ. ನಿಮ್ಮನ್ನ ನಂಬಿ ಚುನಾವಣೆ ಎದುರಿಸುತ್ತಿದ್ದೇನೆ. ಕ್ಷೇತ್ರದ ಜನತೆಯೇ ನನ್ನ ತಂದೆ ತಾಯಿ ಈಗ. ನಿಮ್ಮ ಸೇವೆಗೆ ಒಂದು ಅವಕಾಶ ಕೊಡಿ ಎಂದು ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಇಡೀ ಕುಟುಂಬ ಈಗಲೂ ಕೂಡ ನೋವು, ದುಃಖದ ವಾತವರಣದಲ್ಲಿದೆ. ನಿಮ್ಮೆಲ್ಲರ ಶಕ್ತಿಯಿಂದ ಚುನಾವಣೆಗೆ ನಿಂತಿದ್ದೇನೆ ಎಂದು ಸಭೆಯಲ್ಲಿ ಕ್ಷೇತ್ರದ ಜನತೆ ಮುಂದೆ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.
ನಮ್ಮ ತಂದೆ ನಿಮ್ಮಲ್ಲರಿಗೂ ನಿರಂತರ ಸ್ಪಂದಿಸುವುದರ ಜೊತೆಗೆ ನಿಮ್ಮ ಜೊತೆ ಇದ್ದರು. ಲೋಕಸಭೆ ಸೋಲಿನ ಬಳಿಕ ಈ ಕ್ಷೇತ್ರದ ಜನರಿಗೆ ಸೇವೆ ಮಾಡೋ ಆಸೆ ಇಟ್ಟುಕೊಂಡಿದ್ದರು. ಆದರೆ ವಿಧಿವಶರಾದ್ರು, ಕೆಲ ದಿನಗಳಲ್ಲೇ ನಮ್ಮ ತಾಯಿಯನ್ನ ಕಳೆದುಕೊಂಡೆ. ಇದರ ನಡುವೆ ಕಾಂಗ್ರೆಸ್ ನಿಮ್ಮ ಸೇವೆಗೆ ಒಂದು ಅವಕಾಶ ನೀಡಿದೆ. ದಯಮಾಡಿ ನೀವೆಲ್ಲ ನನಗೆ ಆಶೀರ್ವಾದಿಸಿ ಎಂದು ಮತಯಾಚನೆ ಮಾಡಿದ್ದಾರೆ.
ನಿಮ್ಮ ಸೇವೆಗೆ ಒಂದು ಅವಕಾಶ ಕೊಡಿ. ಪ್ರಚಾರದ ವೇಳೆ ನೀವೆಲ್ಲ ಸಮಸ್ಯೆಗಳನ್ನ ಹೇಳಿಕೊಂಡಿದ್ದೀರಿ. ನಂಜನಗೂಡಿನ ಜನ ಭ್ರಷ್ಟಾಚಾರದ ವಿರುದ್ಧ ಬದಲಾವಣೆಗೆ ಸಿದ್ದ ಇದ್ದೀರಿ. ನಾನು ತಂದೆ ತಾಯಿ ಇಬ್ಬರನ್ನ ಕಳೆದುಕೊಂಡಿದ್ದೇನೆ. ನಿಮ್ಮನ್ನ ನಂಬಿ ಚುನಾವಣೆ ಎದುರಿಸುತ್ತಿದ್ದೇನೆ. ಕ್ಷೇತ್ರದ ಜನತೆಯೇ ನನ್ನ ತಂದೆ, ತಾಯಿ ಆಗಿದ್ದೀರಾ ಎಂದು ಹೇಳಿದ್ದಾರೆ.
ನಮ್ಮ ತಂದೆಯ ಹಾದಿಯಲ್ಲೇ ನಡೆದು ಸೇವೆ ಮಾಡಲು ಸಿದ್ದನಿದ್ದೇನೆ. ಕ್ಷೇತ್ರದ ಜನತೆಯೇ ನಮ್ಮ ತಂದೆಯವರು ಬಿಟ್ಟು ಹೋಗಿರುವ ಆಸ್ತಿ. ನಮ್ಮ ಕುಟುಂಬ ಬಹಳ ಕಷ್ಟದಲ್ಲಿದೆ. ಚುನಾವಣೆಯನ್ನು ಹಣದಲ್ಲಿ ಮಾಡಲು ಆಗುವುದಿಲ್ಲ. ದಯಾಮಾಡಿ ನನಗೆ ಒಂದು ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.