Mysore
21
broken clouds

Social Media

ಬುಧವಾರ, 18 ಫೆಬ್ರವರಿ 2026
Light
Dark

ಬೆಳಗಾವಿಗೆ ಡಿಕೆಶಿ ದಿಢೀರ್ ಭೇಟಿ : ಲಕ್ಷ್ಮಣ ಸವದಿ ನಿವಾಸದಲ್ಲಿ ಮಾತುಕತೆ

ಬೆಳಗಾವಿ‌ : ಯಾವಾಗ ? ಏನು ? ಎಂದೆಲ್ಲ ಕೇಳಬೇಡಿ. ಯಾರು ನಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದಾರೋ ಅವರನ್ನ ಕಾಂಗ್ರೆಸ್ ಪಕ್ಷ ಎಂದೂ ಕೈ ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳವಾರ ರಾತ್ರಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಚುನಾವಣೆ, ಫಲಿತಾಂಶ ನಂತರ ಸರಕಾರ ರಚನೆ ಬಿಡುವಿಲ್ಲದ ಕಾರ್ಯಕ್ರಮಗಳ ಕಾರಣದಿಂದ ಒಂದಿಷ್ಟು ಜನರನ್ನು ಮಾತನಾಡಿಸಲು ಆಗಿರಲಿಲ್ಲ. ಇದೇ ಕಾರಣದಿಂದ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಮಾತನಾಡಿಸಲು ಸ್ವತಃ ಬೆಳಗಾವಿಗೆ ಆಗಮಿಸಿದ್ದೇನೆ’’ ಎಂದರು.

“ಅವರಿಬ್ಬರೂ ನಮ್ಮ ಪಕ್ಷಕ್ಕೆ ಬಂದು ಇನ್ನಷ್ಟು ಶಕ್ತಿ ತುಂಬಿದ್ದಾರೆ. ಸಚಿವ ಸ್ಥಾನ ಸಿಗದಿರುವ ಬಗ್ಗೆ ಅವರಲ್ಲಿ ಯಾವುದೇ ಅಸಮಾಧಾನ ಇಲ್ಲ. ಹಾಗಂತ ಅವರನ್ನು ಪಕ್ಷ ನಿರ್ಲಕ್ಷಿಸುವುದೂ ಇಲ್ಲ. ಕೈ ಬಿಡುವುದೂ ಇಲ್ಲ. ಮುಂದಿನ‌ ದಿನಗಳಲ್ಲಿ ಅವರಿಬ್ಬರಿಗೂ ಉತ್ತಮ ಅವಕಾಶಗಳು ಸಿಗುತ್ತವೆ’’ ಎಂದರು.

ಸಚಿವ ಸಂಪುಟ ಸ್ಥಾನ ಸಿಗಲಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅಸಮಾಧಾನ ಆಗಿದ್ದಾರೆ. ಅವರ ಜತೆಗೆ ನೇರವಾಗಿ ಮಾತನಾಡಿ ಅಸಮಾಧಾನ ಪಡಿಸುವ ಉದ್ಧೇಶದಿಂದ ಡಿ.ಕೆ.ಶಿವಕುಮಾರ ಬೆಳಗಾವಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ.

ಸವದಿ ಮನೆಗೆ ಸತೀಶ್ ಜಾರಕಿಹೊಳಿ ಹೋಗಿದ್ದು ವಿಶೇಷ : ಮಂಗಳವಾರ ತಡರಾತ್ರಿ ಬೆಂಗಳೂರಿನಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ ಅವರನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಶಾಸಕರಾದ ಆಸೀಫ್ ಸೇಠ್, ಬಾಬಾಸಾಹೇಬ್ ಪಾಟೀಲ್, ಚನ್ನರಾಜ ಹಟ್ಟಿಹೊಳಿ ಸ್ವಾಗತಿಸಿ ಬರ ಮಾಡಿಕೊಂಡರು.

ನಂತರ ಡಿ.ಕೆ.ಶಿವಕುಮಾರ್ ನೇರವಾಗಿ ಬೆಳಗಾವಿ ನಗರದಲ್ಲಿರುವ ಲಕ್ಷ್ಮಣ ಸವದಿ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು. ಬುಧವಾರ ಬೆಳಗ್ಗೆ ಬೆಳಗಾವಿಯಿಂದ ಹುಬ್ವಳ್ಳಿಗೆ ತೆರಳಿ ಅಲ್ಲಿ ಜಗದೀಶ್ ಶೆಟ್ಟರ್ ಜತೆಗೆ ಮಾತುಕತೆ ಮಾಡಲಿದ್ದಾರೆ. ಸತೀಶ್ ಜಾರಕಿಹೊಳಿ ಇದೇ ಮೊದಲ ಬಾರಿಗೆ ಇವರೆಗೆ ರಾಜಕೀಯ ಎದುರಾಳಿ ಆಗಿದ್ದ ಲಕ್ಷ್ಮಣ ಸವದಿ ಮನೆಗೆ ಡಿ.ಕೆ.ಶಿವಕುಮಾರ ಜತೆಗೆ ತೆರಳಿರುವುದು ವಿಶೇಷ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!