ಬೆಂಗಳೂರು : ಕಾಂಗ್ರೆಸ್ ನಾಯಕರು ನಿಮ್ಮ ಬೆದರಿಕೆಗೆ ಹೆದರೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದೆ ಇದ್ದರೆ ಕೇಂದ್ರದ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.
ಸದಾಶಿವನಗರದಲ್ಲಿ ಸೋಮವಾರ ಮಾತನಾಡಿದ ಡಿಕೆಶಿ, ಮಿಸ್ಟರ್ ನಡ್ಡಾಜಿ, ನಮ್ಮನ್ನು ಹೆದರಿಸಬೇಡಿ, ಏನು ಹೆದರಿಸ್ತೀರಾ? ಎಂದು ಖಾರವಾಗಿ ಪ್ರಶ್ನಿಸಿದರು.
ಕೇಂದ್ರದ ಯೋಜನೆಗಳನ್ನು ನಿಲ್ಲಿಸ್ತೇವೆ ಅಂತ ಹೆದರಿಸ್ತೀರಾ? ನಿಮ್ಮ ಶಾಸಕರು ಮಕ್ಕಳ ತರಹ ಸುಮ್ಮನಿರಬಹುದು. ಆದರೆ ಕಾಂಗ್ರೆಸ್ ನಾಯಕರು ನಿಮ್ಮ ಬೆದರಿಕೆಗೆ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ನಿಮ್ಮ ಪ್ರಧಾನಿಯನ್ನು ಬೀದಿ ಬೀದಿ ಅಲೆಯೋ ತರಹ ಮಾಡಿದ್ದೀರಲ್ಲ ಎಂದು ನರೇಂದ್ರ ಮೋದಿ ರೋಡ್ ಶೋಗೂ ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರ ಕಾಂಗ್ರೆಸ್ ನ ಬ್ಲಾಕ್ ಮೇಲ್ ಮಾಡ್ತಾ ಇದ್ದಾರೆ. ಇದು ಫೆಡರಲ್ ವ್ಯವಸ್ಥೆಯಾಗಿದೆ. ಕರ್ನಾಟಕದ ತೆರಿಗೆ ಪಾಲಿನಲ್ಲಿ 41% ದೆಹಲಿ ಕೊಡ್ತಾ ಇದೆ. ವಾಪಸ್ ಬರ್ತಾ ಇರೋದು 17, 18% ಮಾತ್ರ. ನಡ್ಡಾ ಅವರ ಬ್ಲ್ಯಾಕ್ ಮೇಲ್ ಗೆ ಹೆದರಲ್ಲ ನಾವು ಎಂದರು.
ಗೃಹ ಸಚಿವ ಅಮಿಶ್ ಶಾ ಹೇಳಿದ್ದರು ಶಾಂತಿ ಸುವ್ಯವಸ್ಥೆ ಹಾಳುಮಾಡುತ್ತಿದ್ದಾರೆ ಅಂತ. ಇದು ಕರ್ನಾಟಕದ ಸ್ವಾಭಿಮಾನದ ಚುನಾವಣೆ ಇದು.
ನಮಗೆ ಈ ರೀತಿ ಮಾಡೋಕೆ ಆಗಲ್ಲ. ಮೇಕೆದಾಟು ಪಾದಯಾತ್ರೆ ಮಾಡಿದ್ವಿ. ಬಿಜೆಪಿ ಒಂದು ಸಾವಿರ ಕೋಟಿ ಘೋಷಣೆ ಮಾಡಿದರು ಎಂದರು.
141 ಸೀಟ್ ಗೆಲ್ಲುವುದು ಪಕ್ಕಾ : ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 141 ಸ್ಥಾನಗಳನ್ನು ಗೆಲ್ಲುತ್ತದೆ. ನಮ್ಮ ಕಾನ್ಫಿಡೆನ್ಸ್ 141, ನೀವು 113 ಅನ್ನಬಹುದು ಆದರೆ ನಾವು 141 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.15 ನೇ ತಾರಿಕು ಕ್ಯಾಬಿನೆಟ್ ನಲ್ಲಿ ನಾವು ಘೋಷಣೆ ಮಾಡಿರುವ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ. ಯಾರ ನೇತೃತ್ವದ ಕ್ಯಾಬಿನೆಟ್ ಅನ್ನೊದನ್ನು ಮೇ 15 ರಂದು ಮಲ್ಲಿಕಾರ್ಜುನ ಖರ್ಗೆ ತಿಳಿಸುತ್ತಾರೆ ಎಂದರು.