Mysore
20
clear sky
Light
Dark

ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗುವ ಹಡಗು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬಾಗಲಕೋಟೆ : ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗುವ ಹಡಗು. ಕೆಲವರು ಮುಳುಗುವ ಹಡಗು ಹತ್ತಿದ್ದಾರೆ‌. ಇಲ್ಲಿ ಇದ್ದಿದ್ದರೆ ಅವರು ದಡ ಸೇರುತ್ತಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮುಧೋಳದಲ್ಲಿ ಗೋವಿಂದ ಕಾರಜೋಳ ಅವರ ಪರ ರೋಡ್ ಶೋ ನಡೆಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಅಭೂತಪೂರ್ವ ಜನ ಬೆಂಬಲ ಬಿಜೆಪಿಗೆ ದೊರೆತಿದೆ. ಕಾರಜೋಳ ಅವರು ಒಬ್ಬ ಸಚಿವರಾಗಿ ಕಳೆದ ಮೂವತ್ತು ವರ್ಷದಿಂದ ಸೇವೆ ಸಲ್ಲಿಸಿದ್ದಾರೆ. ಲೋಕೋಪಯೋಗಿ, ನೀರಾವರಿ, ಸಮಾಜ ಕಲ್ಯಾಣ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.
ಉತ್ತರ ಕರ್ನಾಟಕ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ : ಕೃಷ್ಣಾ ಮೇಲೆ ಆಣೆ ಮಾಡಿದ ಕಾಂಗ್ರೆಸ್ ನವರು ಏನೂ ಮಾಡಲಿಲ್ಲ. ಉತ್ತರ ಕರ್ನಾಟಕ ಜನರಿಗೆ ಮೋಸ ಮಾಡಿದರು. ಭೂಮಿ ಕಳೆದುಕೊಂಡ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದರು, ರೈತರಿಗೆ ಪರಿಹಾರ ನೀಡಲು ನಮ್ಮ ಕಾರಜೋಳ ಅವರು ಸಚಿವರಾಗಿ ಬರಬೇಕಾಯಿತು. ನಾನು ಸಚಿವ ಸಂಪುಟದ ಉಪ ಸಮಿತಿ ಮಾಡಿ ಎಲ್ಲರಿಗೂ ಸಮಾನವಾದ ಪರಿಹಾರ ನೀಡಿದ್ದು, ಭೂಮಿ ಕಳೆದುಕೊಂಡವರಿಗೆ ಸಮಾನ ಪರಿಹಾರ ನೀಡಲಾಗಿದೆ. ಈ ಭಾಗದಲ್ಲಿ ಏತ ನೀರಾವರಿ ಮಾಡುವ ಮೂಲಕ ಮುಧೋಳ ಅಭಿವೃದ್ಧಿ ಮಾಡಲಾಗಿದೆ ಎಂದರು.
ಬಿಜೆಪಿ ಸುನಾಮಿ : ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಮತ್ತೆ ಬಿಜೆಪಿ ಸರ್ಕಾರ ನೂರಕ್ಕೆ ನೂರು ಬರುತ್ತದೆ. ಕಾಂಗ್ರೆಸ್ ನವರು ನೀಡುತ್ತಿರುವುದು ಗ್ಯಾರೆಂಟಿ ಕಾರ್ಡ್ ಅಲ್ಲ, ಅದು ವಿಜಿಟಿಂಗ್ ಕಾರ್ಡ್, ಅದು ಮುಂದೆ ಗಳಗಂಟಿ ಆಗುತ್ತದೆ. ಕಾರಜೋಳ ಅವರು ರಾಜ್ಯ ಸುತ್ತಬೇಕಿದೆ. ನಾವು ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಒಳ ಮೀಸಲಾತಿ ನೀಡಿದ್ದೇವೆ. ಒಕ್ಕಲಿಗ ಲಿಂಗಾಯತರ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಕಾರಜೋಳ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಕಾಂಗ್ರೆಸ್ ನವರು ಮುಂದಿನ ಬಾರಿ ಅರ್ಜಿ ಹಾಕದಂತೆ ಮಾಡಬೇಕು ಎಂದು ಹೇಳಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ