ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭಾನುವಾರ ಹಿಂಸಾಚಾರ ಪೀಡಿತ ಮಣಿಪುರದ ಕ್ರೀಡಾಪಟುಗಳನ್ನು ಆಹ್ವಾನಿಸಿದ್ದು, ರಾಜ್ಯದಲ್ಲಿಯೇ ಅವರಿಗೆ ತರಬೇತಿ ನೀಡುವುದಾಗಿ ತಿಳಿಸಿದ್ದಾರೆ.
ಅಲ್ಲದೆ, ಅವರ ಮಗ ಮತ್ತು ಕ್ರೀಡಾ ಸಚಿವ ಉದಯನಿಧಿ ಈ ಸಂಬಂಧ ಮಣಿಪುರದ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.
ಖೇಲೋ ಇಂಡಿಯಾ ಮತ್ತು ಏಷ್ಯನ್ ಗೇಮ್ಸ್ನಂತಹ ಕ್ರೀಡಾಕೂಟಗಳಿಗೆ ತರಬೇತಿ ನೀಡಲು ಮಣಿಪುರದ ಸದ್ಯದ ಪರಿಸ್ಥಿತಿ ಅಲ್ಲಿನ ಕ್ರೀಡಾಪಟುಗಳಿಗೆ ಅನುಕೂಲಕರವಾಗಿಲ್ಲ ಎಂದು ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Understanding the current challenges faced by Manipur sportspersons, I cordially invite athletes from Manipur for sports training in Tamil Nadu ahead of #KheloIndia2024. Hon'ble Minister @Udhaystalin has also promised his support to facilitate their stay and training here.
Let's… https://t.co/aHA9nqOTM8
— M.K.Stalin (@mkstalin) July 23, 2023
‘ಮಣಿಪುರದ ಕ್ರೀಡಾ ಪಟುಗಳಿಗೆ ತಮಿಳುನಾಡಿನಲ್ಲಿಯೇ ವ್ಯವಸ್ಥೆ ಕಲ್ಪಿಸುವಂತೆ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಸೂಚಿಸಿದ್ದೇನೆ. ಕ್ರೀಡಾ ಇಲಾಖೆಯ ಪರವಾಗಿ ‘ಉತ್ತಮ ಗುಣಮಟ್ಟದ’ ಸೌಲಭ್ಯಗಳನ್ನು ಒದಗಿಸುವುದಾಗಿ ಉದಯನಿಧಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
2024ರ ಆವೃತ್ತಿಯ ಖೇಲೋ ಇಂಡಿಯಾ ಗೇಮ್ಸ್ಗೆ ತಮಿಳುನಾಡು ಈ ಭಾರಿ ಆತಿಥ್ಯ ವಹಿಸಲಿದೆ.
‘ಮಣಿಪುರ ರಾಜ್ಯವು ಕ್ರೀಡಾ ರಂಗಕ್ಕೆ ‘ಚಾಂಪಿಯನ್ಗಳನ್ನು, ವಿಶೇಷವಾಗಿ ಮಹಿಳಾ ಚಾಂಪಿಯನ್ಗಳನ್ನು’ ನೀಡುವಲ್ಲಿ ಹೆಸರುವಾಸಿಯಾಗಿದೆ. ಸದ್ಯದ ಮಣಿಪುರದಲ್ಲಿನ ಪರಿಸ್ಥಿತಿ ಬಗ್ಗೆ ತಮಿಳುನಾಡು ರಾಜ್ಯ ‘ಆಳವಾದ ದುಃಖ’ ವ್ಯಕ್ತಪಡಿಸಿದೆ. ಪರಿಸ್ಥಿತಿ ತಿಳಿಯಾಗಲೆಂದು ಎದುರು ನೋಡುತ್ತಿದೆ’ ಎಂದು ಸ್ಟಾಲಿನ್ ಹೇಳಿದರು.
ಎಮ್ಸಿ ಮೇರಿ ಕೋಮ್, ಕುಂಜರಾಣಿ ದೇವಿ, ಮೀರಾಬಾಯಿ ಚಾನು, ಖುಮುಚ್ಚಮ್ ಸಂಜಿತಾ ಚಾನು, ಟಿಂಗೊನ್ಲೀಮಾ ಚಾನು ಮತ್ತು ಅನೇಕ ವರ್ಷಗಳಿಂದ ಹಲವಾರು ಶ್ರೇಷ್ಠ ಕ್ರೀಡಾಪಟುಗಳು ಮಣಿಪುರದಿಂದಲೇ ಬಂದವರಾಗಿದ್ದಾರೆ.
‘ತಮಿಳು ಸಂಸ್ಕೃತಿ ಪ್ರೀತಿ ಮತ್ತು ಕಾಳಜಿಯಿಂದ ಬದುಕುತ್ತಿದೆ ಎಂದು ಹೇಳಿದ ಸಿಎಂ, ‘ಎಲ್ಲವೂ ನನ್ನದು, ಎಲ್ಲ ಜನರು ನನ್ನ ಸಂಬಂಧಿಕರು’ ಎಂಬ ಮಾತಿನಂತೆ ನಡೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಈ ಪ್ರಯೋಜನವನ್ನು ಪಡೆಯಲು ಇಚ್ಛಿಸುವವ ಮಣಿಪುರದ ಕ್ರೀಡಾಪಟುಗಳು +91-8925903047 ಅನ್ನು ಸಂಪರ್ಕಿಸಬಹುದು ಅಥವಾ ID ಪುರಾವೆ ಮತ್ತು ತರಬೇತಿ ಅಗತ್ಯತೆಗಳು ಸೇರಿದಂತೆ ವಿವರಗಳನ್ನು sportstn2023@gmail.com ಗೆ ಇಮೇಲ್ ಮಾಡಬಹುದು.





