Mysore
29
scattered clouds

Social Media

ಮಂಗಳವಾರ, 24 ಫೆಬ್ರವರಿ 2026
Light
Dark

3 ತಿಂಗಳಲ್ಲಿ 242 ಭ್ರೂಣ ಹತ್ಯೆ; ಮಂಡ್ಯ ಭ್ರೂಣ ಹತ್ಯೆ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡ ಕಮಿಷನರ್‌

ಮೊನ್ನೆ ಮೈಸೂರು ಹಾಗೂ ಮಂಡ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಭ್ರೂಣ ಹತ್ಯೆ ಜಾಲದ ಬಗೆಗಿನ ಸುದ್ದಿ ಇಡೀ ರಾಜ್ಯವನ್ನೇ ಆತಂಕಕ್ಕೊಳಗಾಗುವಂತೆ ಮಾಡಿತ್ತು. ಜೀವ ಉಳಿಸಬೇಕಾದ ವೈದ್ಯರೇ ಇಂತಹ ಅಮಾನವೀಯ ಕೆಲಸಕ್ಕೆ ಕೈಹಾಕಿದ್ದು ಮನುಕುಲ ತಲೆ ತಗ್ಗಿಸುವಂತಹ ಕೃತ್ಯ ಇದಾಗಿತ್ತು.

ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ನಡೆಸಿದ ಈ ಕಾರ್ಯಾಚರಣೆಯಿಂದ ಬೆಳಕಿಗೆ ಬಂದ ಹಲವು ವರ್ಷಗಳ ಈ ದಂಧೆಯಲ್ಲಿ ಶಾಮೀಲಾಗಿದ್ದ ಒಟ್ಟು 9 ಜನರನ್ನು ಬಂಧಿಸಲಾಗಿದೆ. ಸದ್ಯ ಇವರೆಲ್ಲಾ ಪೊಲೀಸರ ಸೆರೆಯಲ್ಲಿದ್ದು, ಈ ಕುರಿತು ಇಂದು ( ನವೆಂಬರ್‌ 28 ) ಬೆಂಗಳೂರು ನಗರ ಕಮಿಷನರ್‌ ದಯಾನಂದ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಈ ಹೇಯ ಕೃತ್ಯವೆಸಗಿರುವ ಗುಂಪು ರಿಜಿಸ್ಟರ್‌ ಒಂದನ್ನು ಬಳಸಿದ್ದು, ಇದರಲ್ಲಿ ಕಳೆದ 3 ತಿಂಗಳಿನಲ್ಲಿಯೇ ಒಟ್ಟು 242 ಹೆಣ್ಣು ಭ್ರೂಣಗಳ ಹತ್ಯೆಯನ್ನು ಮಾಡಲಾಗಿದೆ ಎಂದು ದಯಾನಂದ್‌ ಮಾಹಿತಿ ನೀಡಿದ್ದಾರೆ. ಅಲ್ಲದೇ ಒಂದು ಭ್ರೂಣ ಹತ್ಯೆಗೆ 20ರಿಂದ 25 ಸಾವಿರ ರೂಪಾಯಿ ಹಣವನ್ನು ಪಡೆಯುತ್ತಿದ್ದರು, ಮೈಸೂರಿನ ಆಸ್ಪತ್ರೆ ಹಾಗೂ ಮಂಡ್ಯದ ಆಲೆಮನೆಯಲ್ಲಿ ಆಗಿರುವುದು ಇಲ್ಲಿಯವರೆಗಿನ ತನಿಖೆಯಲ್ಲಿ ಗೊತ್ತಾಗಿದೆ ಎಂದೂ ಸಹ ಮಾಹಿತಿ ನೀಡಿದ್ದಾರೆ.

ಇನ್ನು ಈ ಪ್ರಕರಣದ ತನಿಖೆಯಲ್ಲಿ ತಮಗೆ ಎರಡು ಸ್ಕ್ಯಾನಿಂಗ್‌ ಮಷಿನ್‌ ಸಿಕ್ಕಿರುವುದಾಗಿ ಹೇಳಿದ ದಯಾನಂದ್‌ ಒಂದು ಕೆಟ್ಟಿದೆ ಹಾಗೂ ಇನ್ನೊಂದು ಚೆನ್ನಾಗಿದೆ ಎಂದಿದ್ದಾರೆ. ಈ ರೀತಿ ಸ್ಕ್ಯಾನಿಂಗ್‌ ಮಷಿನ್‌ ಅವರಿಗೆ ಲಭಿಸಿದ್ದು, ಅಂತಹ ಸಲಕರಣೆಗಳನ್ನು ಪಡೆಯಬೇಕೆಂದರೆ ಡಿಎಚ್‌ಒ ಅವರ ಅನುಮತಿ ಬೇಕಿದ್ದು ಅವರೂ ಸಹ ಇದರಲ್ಲಿ ಶಾಮೀಲಾಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ದಯಾನಂದ್ ಈ ಸಾಧ್ಯತೆಗಳೂ ಸಹ ಇವೆ, ಅದರ ಬಗ್ಗೆ ಮುಂದಿನ ತನಿಖೆಯಲ್ಲಿ ತಿಳಿಯಲಿದೆ ಎಂದಿದ್ದಾರೆ. ಈ ಕೃತ್ಯದಲ್ಲಿ ಸದ್ಯ ಪೊಲೀಸರ ಅತಿಥಿಯಾಗಿರುವ ವೀರೇಶ್‌ ಹಾಗೂ ಸಿದ್ದೇಶ್‌ ಎಂಬುವವರು ಮೂಲತಃ ಹೊನ್ನಾಳಿಯವರಾಗಿದ್ದು ಈ ಹಿಂದೆ ಅವರು ಕಿಡ್ನಾಪ್‌ ಕೇಸ್‌ ಒಂದರಲ್ಲಿ ಆರೋಪಿಯಾಗಿದ್ದರು ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಕಳೆದ ಮೂರು ತಿಂಗಳ ಮಾಹಿತಿ ಮೊದಲ ಹಂತದ ತನಿಖೆಯಲ್ಲಿ ಲಭಿಸಿದ್ದು ಅದರ ಹಿಂದಿನ ಕುರಿತ ತನಿಖೆ ನಡೆಯಲಿದೆ, ಎಲ್ಲಾ ಆರೋಪಿಗಳನ್ನೂ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು ವಿಚಾರಣೆ ನಡೆಯುತ್ತಿದೆ ಮತ್ತು ಕೆಲ ಪೋಷಕರನ್ನೂ ಸಹ ತನಿಖೆ ಮಾಡಲಿದ್ದೇವೆ ಎಂದು ದಯಾನಂದ್‌ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!