ಗುಂಡ್ಲುಪೇಟೆ: ಲಾರಿಯೊಂದು ಡಿಕ್ಕಿ ಹೊಡೆದು ಭಾರೀ ಗಾತ್ರದ ಹೆಣ್ಣಾನೆ ಮೃತಪಟ್ಟ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮದ್ದೂರು ವಲಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ತಮಿಳುನಾಡು ಮೂಲದ ಲಾರಿಯೊಂದು ಮೈಸೂರು ಕಡೆ ಬರುವಾಗ ಅಡ್ಡ ಬಂದ ಸುಮಾರು ೩೫ ವರ್ಷದ ಆನೆಗೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಕಾಡಾನೆ ಸ್ಥಳದಲ್ಲೇ ಮೃತಪಟ್ಟಿದೆ. ಈ ರೀತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಮೃತಪಟ್ಟಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ತಮಿಳುನಾಡು ಮೂಲದ ಲಾರಿ ವಶಕ್ಕೆ ಪಡೆಯಲಾಗಿದೆ. ರಾತ್ರಿ ೯ಕ್ಕೆ ಗೇಟ್ ಬಂದಾಗುವ ಆತಂಕದಲ್ಲಿ ಚಾಲಕರು ಜೋರಾಗಿ ವಾಹನ ಓಡಿಸುವುದರಿಂದ ಇಂತಹ ಅನಾಹುತ ಆಗುತ್ತಿದ್ದು, ಅಲ್ಲಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸುವ ಒತ್ತಾಯ ಕೇಳಿ ಬಂದಿದೆ.
ಘಟನೆ ಸಂಬಂಧ ಮೊಕದ್ದಮೆ ದಾಖಲಿಸಲಾಗುತ್ತಿದೆ. ಬುಧವಾರ ಮರಣೋತ್ತರ ಪರೀಕ್ಷೆ ನಡೆದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಬಂಡೀಪುರ ನಿರ್ದೇಶಕ ಡಾ.ಪಿ.ರಮೇಶಕುಮಾರ್ ಆಂದೋಲನಕ್ಕೆ ತಿಳಿಸಿದ್ದಾರೆ.





