Mysore
21
scattered clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ಮಲ್ಲಿಕಾರ್ಜುನ ಖರ್ಗೆ ಕುಟುಂಬ ಹತ್ಯೆಗೆ ಸಂಚು ಆರೋಪ : ಬಿಜೆಪಿ ಅಭ್ಯರ್ಥಿ ವಿರುದ್ಧ ಎಫ್​ಐಆರ್ ದಾಖಲು

ಕಲಬುರಗಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರನ್ನ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿರುವ ಬಿಜೆಪಿ ನಾಯಕರು, ಈ ಬಾರಿ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಚಿತ್ತಾಪುರ ಕ್ಷೇತ್ರದಲ್ಲಿ ಸೋಲಿಸಲು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. ಆದ್ರೆ, ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮಾತನಾಡಿದ್ದಾರೆ ಎನ್ನಲಾಗಿರುವ ಅದೊಂದು ಆಡಿಯೋ ಇದೀಗ ಸಂಚಲನ ಸೃಷ್ಟಿಮಾಡಿದೆ. ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹತ್ಯೆಗೆ ಸಂಚು ಆರೋಪಿಸಿ, ಚುನಾವಣಾ ಸಿಬ್ಬಂದಿ ಕರ್ಣ ಕುಮಾರ್ ದೂರಿನ ಮೇರೆಗೆ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ
ಎಫ್​ಐಆರ್ ದಾಖಲಾಗಿದೆ. ​ಐಪಿಸಿ ಸೆಕ್ಷನ್ 504, 506ರಡಿ ದೂರು ದಾಖಲಿಸಿಕೊಂಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಖರ್ಗೆ ಕುಟುಂಬದ ಬಗ್ಗೆ ಬಹಿರಂಗವಾಗಿ ಅನೇಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಿದ್ದು, ಜಿಲ್ಲೆಯ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ದ ಅನೇಕ ಆರೋಪಗಳನ್ನು ಮಾಡುವುದರ ಜೊತೆಗೆ ಅವರ ವಿರುದ್ದ ತೊಡೆ ತಟ್ಟುವ ಕೆಲಸವನ್ನು ಮಾಡಿದ್ದರು. ಇದೇ ಕಾರಣದಿಂದಲೇ ಅನೇಕ ಆಕಾಂಕ್ಷಿಗಳಿದ್ದರು ಕೂಡ ಅವರೆಲ್ಲರನ್ನು ಬಿಟ್ಟು ಬಿಜೆಪಿ ಹೈಕಮಾಂಡ್, ಚಿತ್ತಾಪುರ ಕ್ಷೇತ್ರದ ಬಿಜೆಪಿ ಟಿಕೆಟ್​ನ್ನು ಮಣಿಕಂಠ ರಾಠೋಡ್​ಗೆ ನೀಡಿತ್ತು. ಈ ಹಿಂದೆ ನಾನು ಪ್ರಿಯಾಂಕ್ ಖರ್ಗೆರನ್ನು ಶೂಟ್ ಮಾಡಲು ಕೂಡಾ ಸಿದ್ದ ಅಂತ ಹೇಳಿದ್ದ ಮಣಿಕಂಠ ರಾಠೋಡ್ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು. ಆದ್ರೆ, ಇದೀಗ ಖರ್ಗೆ ಕುಟುಂಬವನ್ನು ಸಾಪ್ ಮಾಡಿಬಿಡುತ್ತಿದ್ದೆ ಎಂದು ಹೇಳಿರುವ ಆಡಿಯೋವೊಂದು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಆಡಿಯೋದಲ್ಲೇನಿದೆ ? : ರವಿ ಎನ್ನುವ ವ್ಯಕ್ತಿಯ ಜೊತೆ ಮಣಿಕಂಠ ರಾಠೋಡ್ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿರುವ ಆಡಿಯೋವನ್ನು ಕಾಂಗ್ರೆಸ್ ನಾಯಕರು ನಿನ್ನೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ರವಿ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿರುವ ಆಡಿಯೋದಲ್ಲಿ, ‘ನನ್ನ ಬಳಿ ಖರ್ಗೆ ಅವರ ನಂಬರ್ ಇಲ್ಲ, ನಂಬರ್ ಇದ್ದಿದ್ದರೆ ಅವರನ್ನು ಮತ್ತು ಅವರ ಹೆಂಡತಿ ಮಕ್ಕಳನ್ನು ಸಾಪ್ ಮಾಡ್ತೇನೆ, ಅದಕ್ಕೆ ಅವರ ನಂಬರ್ ಇಲ್ಲ ಎಂದು ಹೇಳುತ್ತಾರೆ. ಇನ್ನು ಮಣಿಕಂಠ ರಾಠೋಡ್ ಮೇಲೆ ನಲವತ್ತಕ್ಕೂ ಹೆಚ್ಚು ಕೇಸ್​‘ಗಳಿವೆ. ರೌಡಿಶೀಟರ್​ ಪಟ್ಟಿಯಲ್ಲಿರುವ ಮಣಿಕಂಠ ರಾಠೋಡ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದವರ ಹತ್ಯೆಗೆ ಸಂಚು ರೂಪಸಿದ್ದಾರೆ ಎಂದು ಆರೋಪಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!